ರಾಘವೇಂದ್ರ ರಾಜ್ಕುಮಾರ್ ಆರೋಗ್ಯದಲ್ಲಿ ಚೇತರಿಕೆ, ಇಂದು ಆಸ್ಪತ್ರೆಯಿಂದ ಬಿಡುಗಡೆ
ಖ್ಯಾತ ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಆರೋಗ್ಯದಲ್ಲಿ ವ್ಯತ್ಯಯವಾದ ಕಾರಣ ನಿನ್ನೆ (ಫೆಬ್ರವರಿ 16) ರ ರಾತ್ರಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು.
ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ನಿನ್ನೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಆಯಾಸ ಉಂಟಾಗಿ, ಅನಾರೋಗ್ಯ ಕಂಡುಬಂದಿತ್ತು, ಹಾಗಾಗಿ ಕೂಡಲೇ ಅವರು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ನೀಡಿದ್ದ ಮಾಹಿತಿಯಂತೆ ರಾಘವೇಂದ್ರ ರಾಜ್ಕುಮಾರ್ ಅವರಿಗೆ ನೀರಸ ಉಂಟಾಗಿತ್ತು, ಎದೆ ಬಡಿತ ಜೋರಾಗಿತ್ತು, ಹಾಗಾಗಿ ಅವರನ್ನು ನಿಘಾದಲ್ಲಿ ಇಡಲಾಗಿತ್ತು.

ನಿನ್ನೆ ತಡ ರಾತ್ರಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್, 'ಆರಾಮವಾಗಿದ್ದಾರೆ, ಶೂಟಿಂಗ್ ಇತ್ತಲ್ಲ ಅಲ್ಲಿ ತುಸು ಸುಸ್ತಾಗಿದ್ದಾರೆ. ಮುನ್ನೆಚ್ಚರಿಕೆಯಿಂದಾಗಿ ಇಲ್ಲಿ ಬಂದು ಅಡ್ಮಿಟ್ ಮಾಡಿದ್ದೇವೆ. ಸಾಮಾನ್ಯ ಚೆಕ್ಅಪ್ಗಳು ನಡೆದಿವೆ. ಏನೂ ಸಮಸ್ಯೆ ಇಲ್ಲ, ನಾಳೆ (ಫೆಬ್ರವರಿ 17) ಕ್ಕೆ ಡಿಸ್ಚಾರ್ಜ್ ಮಾಡುತ್ತಾರೆ' ಎಂದಿದ್ದರು.
ರಾತ್ರಿ ಆಸ್ಪತ್ರೆ ಬಳಿ ಬಂದಿದ್ದ ಶ್ರೀಮುರಳಿ ಸಹ ರಾಘವೇಂದ್ರ ರಾಜ್ಕುಮಾರ್ ಆರಾಮವಾಗಿದ್ದಾರೆ ಎಂದಿದ್ದರು. 'ನಾನು ರಾಘವೇಂದ್ರ ರಾಜ್ಕುಮಾರ್ ಅವರನ್ನು ಮಾತನಾಡಿಸಿದೆ. ಅವರು ಆರಾಮವಾಗಿದ್ದಾರೆ. ಕರ್ನಾಟಕದ ಜನರ ಪ್ರೀತಿ ಅವರ ಮೇಲೆ, ಅವರ ಕುಟುಂಬದ ಮೇಲೆ ಇದೆ, ಹೀಗಿದ್ದಾಗ ಅವರಿಗೆ ಏನೂ ಆಗಲು ಸಾಧ್ಯವಿಲ್ಲ' ಎಂದರು ಶ್ರೀಮುರಳಿ.
ನಿನ್ನೆ ರಾತ್ರಿಯೇ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಹಾಗೂ ಇನ್ನೂ ಕೆಲವು ಕುಟುಂಬ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ರಾಘವೇಂದ್ರ ರಾಜ್ಕುಮಾರ್ ಅವರ ಆರೋಗ್ಯ ವಿಚಾರಿಸಿದರು.
Recommended Video
ರಾಘವೇಂದ್ರ ರಾಜ್ಕುಮಾರ್ ಅವರಿಗೆ ಕೆಲವು ತಿಂಗಳ ಹಿಂದೆ ತೀವ್ರ ಅನಾರೋಗ್ಯವಾಗಿತ್ತು, ಪೆರಾಲಿಸಿಸ್ಗೆ ಗುರಿಯಾಗಿದ್ದ ಅವರಿಗೆ ವಿದೇಶದಲ್ಲಿ ಚಿಕಿತ್ಸೆ ನೀಡಲಾಯಿತು. ಆರೋಗ್ಯದಲ್ಲಿ ಚೇತರಿಕೆ ಕಂಡ ರಾಘವೇಂದ್ರ ರಾಜ್ಕುಮಾರ್ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ.


Click it and Unblock the Notifications











