ಈ ಅಭಿಮಾನಕ್ಕೆ ಕೊನೆ ಎಲ್ಲಿ?; ಗಂಧದಗುಡಿ ಸಡಗರದ ಫೋಟೋ ಹಂಚಿಕೊಂಡ ರಾಘಣ್ಣ
ಈ ತಿಂಗಳ 29ನೇ ತಾರೀಕು ಬಂದರೆ ಕನ್ನಡ ಚಲನಚಿತ್ರ ರಂಗದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಒಂದು ವರ್ಷ ತುಂಬಲಿದೆ. ಹೀಗೆ ಅಪ್ಪು ನಿಧನಹೊಂದಿ ವರ್ಷ ಸಮೀಪಿಸುತ್ತಿದ್ದರೂ ಸಹ ಇನ್ನೂ ಅಪ್ಪು ನೆನಪು ಮಾಸಿಲ್ಲ. ಪುನೀತ್ ಅವರನ್ನು ಜನ ನೆನೆಯದ ದಿನವೇ ಇಲ್ಲ.
ಇನ್ನು ಅಪ್ಪು ನಿಧನದ ನಂತರ ಅವರ ಅಭಿನಯದ ಜೇಮ್ಸ್ ಹಾಗೂ ಲಕ್ಕಿ ಮ್ಯಾನ್ ಬಿಡುಗಡೆಯಾಗಿದ್ದು, ಈ ಚಿತ್ರಗಳನ್ನು ಅವರ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸಿದ್ದರು. ಸದ್ಯ ಅಪ್ಪು ಅಭಿನಯದ ಇನ್ನೊಂದು ಚಿತ್ರ ಮಾತ್ರ ಬಾಕಿ ಉಳಿದಿದ್ದು ಈ ಚಿತ್ರವನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸಂಭ್ರಮಿಸಲು ಅಪ್ಪು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಹೌದು, ಗಂಧದಗುಡಿ ಚಿತ್ರದ ಬಿಡುಗಡೆಯನ್ನು ಹಬ್ಬದ ರೀತಿ ಆಚರಿಸಲು ಅಭಿಮಾನಿಗಳು ತೀರ್ಮಾನಿಸಿದ್ದು, ಈಗಾಗಲೇ ತಿಂಗಳಿಗೂ ಮೊದಲೇ ಗಂಧದಗುಡಿ ಹಬ್ಬ ಎಂಬ ಅಭಿಯಾನದಡಿ ಸಂಭ್ರಮಾಚರಣೆ ಶುರುವಿಟ್ಟುಕೊಂಡಿದ್ದಾರೆ. ಬೆಂಗಳೂರು, ಮೈಸೂರು, ರಾಮನಗರ ಹಾಗೂ ಚನ್ನಪಟ್ಟಣ ಹೀಗೆ ಮುಂತಾದ ಪಟ್ಟಣಗಳಲ್ಲಿ ಗಂಧದಗುಡಿ ಹಬ್ಬದ ಪ್ರಯುಕ್ತ ಅಭಿಮಾನಿಗಳು ಪುನೀತ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಮಂಗಳಾರತಿ ಬೆಳಗಿ ಸಂಭ್ರಮಿಸಿದ್ರು. ಅದೇ ರೀತಿ ನಂದಿ ಬೆಟ್ಟ ರಸ್ತೆಯಲ್ಲಿಯೂ ಸಹ ಅಪ್ಪು ಗಂಧದಗುಡಿ ಹಬ್ಬ ಆಚರಣೆ ಮಾಡಿದ್ದಾರೆ ಅಪ್ಪು ಅಭಿಮಾನಿಗಳು.

ಇನ್ನು ಈ ಜಾಗದಲ್ಲಿ ಅಪ್ಪು ನಿಧನದ ನಂತರದಿಂದ ಅಪ್ಪು ಫೋಟೊ ಇಡಲಾಗಿದ್ದು ಜೇಮ್ಸ್ ಸಂದರ್ಭದಲ್ಲಿಯೂ ಜೇಮ್ಸ್ ಚಿತ್ರದ ಪುಟ್ಟ ಸ್ಟಾಂಡಿಗಳನ್ನು ಇಟ್ಟು ಹೂವಿನಿಂದ ಅಲಂಕರಿಸಲಾಗಿತ್ತು. ಇದೀಗ ಅದೇ ರೀತಿ ಗಂಧದ ಗುಡಿ ಚಿತ್ರದ ಸ್ಟ್ಯಾಂಡಿಗಳನ್ನಿಟ್ಟು ಗಂಧದಗುಡಿ ಹಬ್ಬವನ್ನು ಆಚರಿಸಿದ್ದಾರೆ ಅಭಿಮಾನಿಗಳು. ಈ ಸುಂದರ ಚಿತ್ರವನ್ನು ರಾಘವೇಂದ್ರ ರಾಜ್ ಕುಮಾರ್ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದು 'ಅಭಿಮಾನಿಗಳ ಸಡಗರಕ್ಕೆ ಕೊನೆ ಎಲ್ಲಿ' ಎಂದು ಬರೆದುಕೊಂಡಿದ್ದಾರೆ. ಇನ್ನು ಅಪ್ಪು ಅವರ ಕೊನೆಯ ಚಿತ್ರ ಗಂಧದಗುಡಿ ಇದೇ ತಿಂಗಳ 28ಕ್ಕೆ ಬಿಡುಗಡೆಗೊಳ್ಳಲಿದೆ.


Click it and Unblock the Notifications











