ಸಿಂಗಪುರಕ್ಕೆ ರಾಘವೇಂದ್ರ ರಾಜ್; ಚಿಕಿತ್ಸೆ ವಿವರಗಳು
ವರನಟ ಡಾ.ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ (48) ಅವರು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ (ಡಿಸೆಂಬರ್ 13) ಸಿಂಗಪುರಕ್ಕೆ ಹೋಗುತ್ತಿದ್ದಾರೆ. ಅಕ್ಟೋಬರ್ 16ರಂದು ತಮ್ಮ ಸದಾಶಿವನಗರದ ಮನೆ ಬಳಿ ಇರುವ ಅಫಿನಿಟಿ ಫಿಟ್ ನೆಸ್ ಕೇಂದ್ರದಲ್ಲಿ ಟ್ರೆಡ್ ಮಿಲ್ ಮೇಲೆ ಓಡುತ್ತಿದ್ದಾಗ ಕುಸಿದು ಬಿದ್ದಿದ್ದರು.
ಕೂಡಲೆ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಡಿಸ್ಚಾರ್ಚ್ ಆದ ರಾಘಣ್ಣ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗಲೂ ಅವರು ಆರೋಗ್ಯದಿಂದಿದ್ದು ಚುರುಕಾಗಿ ಓಡಾಡಿಕೊಂಡಿದ್ದಾರೆ. [ಅಣ್ಣಾವ್ರ ಮೊಮ್ಮಗ ವಿನಯ್ ರಾಜ್ ಚಿತ್ರ 'ವಿನು']

ರಾಘಣ್ಣನ ಜೊತೆಗೆ ಪತ್ನಿ ಮಂಗಳಾ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಸಿಂಗಪುರಕ್ಕೆ ಹೋಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಶಿವಣ್ಣನ ಉತ್ಸಾಹವನ್ನು ಇಮ್ಮಡಿಸಿದೆ.
ಇನ್ನು ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಬಗ್ಗೆ ಹೇಳಬೇಕೆಂದರೆ ಇದು ಕಿಡ್ನಿ ಮತ್ತು ಹೃದಯ ಕಸಿ ಚಿಕಿತ್ಸೆಗೆ ಹೆಸರುವಾಸಿಯಾಗಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಆಸ್ಪತ್ರೆಗೆ ಜಗತ್ತಿನ ನಾನಾ ಕಡೆಗಳಿಂದ ರೋಗಿಗಳು ಬರುತ್ತಾರೆ. ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಯುವತಿಯನ್ನು ಇದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಿಡ್ನಿ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಸುಮಾರು ಒಂದು ತಿಂಗಳ ಕಾಲ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಎರಡು ವರ್ಷಗಳ ಹಿಂದೆ ರಾಜಕಾರಣಿ ಅಮರ್ ಸಿಂಗ್ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದರು.


Click it and Unblock the Notifications











