'ನನಗೆ ಬಂದ ಮೊದಲ ಪ್ರಶಸ್ತಿ': ಸಂತಸ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್
2018ನೇ ರಾಜ್ಯ ಚಲನಚಿತ್ರವ ಪ್ರಶಸ್ತಿ ಪ್ರಕಟವಾಗಿದೆ. ನಟ ರಾಘವೇಂದ್ರ ರಾಜ್ ಕುಮಾರ್ ಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದರೆ, ಅತ್ಯುತ್ತಮ ನಟಿ ಪ್ರಶಸ್ತಿ ಮೇಘನಾ ರಾಜ್ ಪಾಲಾಗಿದೆ. 'ಆ ಕರಾಳ ರಾತ್ರಿ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಇನ್ನುಳಿದಂತೆ ಜೀವಮಾನ ಸಾಧನೆಗಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ ಎಸ್ ಬಸವರಾಜು ಅವರಿಗೆ ವಿಷ್ಣುವರ್ಧನ ಪ್ರಶಸ್ತಿ ಲಭಿಸಿದೆ.
ಮೊದಲ ಬಾರಿಗೆ ಪ್ರಶಸ್ತಿ ಪಡೆದ ನಟ ರಾಘವೇಂದ್ರ ರಾಜ್ ಕುಮಾರ್ ಫಿಲ್ಮಿ ಬೀಟ್ ಕನ್ನಡ ಜೊತೆ ಸಂತಸ ಹಂಚಿಕೊಂಡಿದ್ದಾರೆ. ಅಮ್ಮನ ಮನೆ ಚಿತ್ರಕ್ಕಾಗಿ ರಾಘಣ್ಣ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ದಶಕದ ಬಳಿಕ ಮತ್ತೆ ಬಣ್ಣ ಹಚ್ಚಿದ ರಾಘಣ್ಣಗೆ 2018ನೇ ಸಾಲಿನ ರಾಜ್ಯ ಪ್ರಶಸ್ತಿ ಬಂದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದು ಹೀಗೆ..
ರಾಘಣ್ಣ ಮೊದಲ ಪ್ರತಿಕ್ರಿಯೆ
"ನನಗೆ ತುಂಬ ಖುಷಿಯಾಗಿದೆ. ಇದು ನನಗೆ ಬಂದ ಮೊದಲ ಪ್ರಶಸ್ತಿ. ಇದುವರೆಗೂ ನನಗೆ ಯಾವುದೆ ಪ್ರಶಸ್ತಿಗಳು ಬಂದಿರಲಿಲ್ಲ. ಅಪ್ಪಾಜಿ, ಶಿವರಾಜ್ ಕುಮಾರ್, ಪುನೀತ್ ಮತ್ತು ಪೂರ್ಣಿಮ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ನಾನು ಒಬ್ಬ ಮಿಸ್ ಆಗಿದ್ದೆ. ಆದರೀಗ ಇಡೀ ಕುಟುಂಬಕ್ಕೆ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯನ್ನು ಅಮ್ಮನ ಮನೆ ನಿರ್ದೇಶಕ ನಿಖಿಲ್ ಮಂಜು ಅವರಿಗೆ ಅರ್ಪಿಸುತ್ತೇನೆ" ಎಂದು ರಾಘಣ್ಣ ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ಇನ್ನು ಮೂರನೆ ಅತ್ಯುತ್ತಮ ಚಿತ್ರ ಪ್ರಶಸ್ತಿ 'ಒಂದೆಲ್ಲ ಎರಡಲ್ಲ' ಸಿನಿಮಾ ಪಾಲಾಗಿದೆ. ನಿರ್ದೇಶಕ ಸತ್ಯ ಪ್ರಕಾಶ್ ಸಾರಥ್ಯದಲ್ಲಿ ಬಂದ ಸಿನಿಮಾ. ಈ ಬಗ್ಗೆ ಮಾತನಾಡಿರುವ ಸತ್ಯಾ ಪ್ರಕಾಶ್ ಫಿಲ್ಮಿ ಬೀಟ್ ಕನ್ನಡ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಸತ್ಯ ಪ್ರಕಾಶ್ ಹೇಳಿದ್ದೇನು?
"ನನಗೆ ತುಂಬ ಖುಷಿ ಆಗುತ್ತಿದೆ. ಇಡೀ ತಂಡದ ಶ್ರಮವಿದು. ಈ ಗೆಲುವು ಇಡೀ ತಂಡಕ್ಕೆ ಸೇರಬೇಕು. ನಮ್ಮ ಸಿನಿಮಾವನ್ನು ಗುರುತಿಸುತ್ತಿರುವುದು ಸಂತಸದ ವಿಷಯ. ನಾನು ಜನರಿಗಾಗಿಯೇ ಸಿನಿಮಾ ಮಾಡುವುದು. ಪ್ರೇಕ್ಷಕರೇ ನನ್ನ ಮೊದಲ ಆದ್ಯತೆ. ಜನ ಇಷ್ಟಪಟ್ಟ ಮೇಲೆ ಅದು ಪ್ರಶಸ್ತಿಗಳಿಗೆ ಕರೆದುಕೊಂಡು ಹೋಗುತ್ತಿದೆ" ಎಂದು ನಿರ್ದೇಶಕ ಸತ್ಯಾ ಪ್ರಕಾಶ್ ಹೇಳಿದ್ದಾರೆ.


Click it and Unblock the Notifications











