ಭೂಮಿಗೆ ಏಲಿಯನ್ಸ್ ಎಂಟ್ರಿ: ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದ 'ರಘಿರ'
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಅಂತಹ ಕ್ರಿಯಾಶೀಲ ನಿರ್ದೇಶಕರ ಸಾಲಿಗೆ ವಿಶ್ವಾಸ್ ಮಡಿಸೆಟ್ಟಿ ಕೂಡ ಸೇರುತ್ತಿದ್ದಾರೆ. ಈ ಹಿಂದೆ 'ನಾರಾಯಣ ಸಾಮಿ' ಕಿರುಚಿತ್ರಕ್ಕಾಗಿ ಪ್ರಣಯರಾಜ ಶ್ರೀನಾಥ್ ಅವರಿಗೆ ಬಣ್ಣ ಹಚ್ಚಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದೀಗ 'ರಘಿರ' ಎಂಬ ವಿಭಿನ್ನ ಟೈಟಲ್ ಇಟ್ಟುಕೊಂಡು ಸೈನ್ಸ್ ಫಿಕ್ಷನ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆಧುನಿಕತೆಯ ಹೆಸರಲ್ಲಿ ಆಗುತ್ತಿರುವ ಪರಿಸರ ನಾಶ ಹಾಗೂ ಜಾಗತಿಕ ಹವಾಮಾನ ವೈಪರೀತ್ಯವನ್ನು ಹಿನ್ನಲೆಯಾಗಿಟ್ಟುಕೊಂಡು ಹೊಸ ಬಗೆಯ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಮನೋರಂಜನೆ ಜೊತೆಗೆ ಸಮಾಜಕ್ಕೊಂದು ವಿಶೇಷ ಸಂದೇಶ ನೀಡುವ ಚಿತ್ರ ಇದಾಗಲಿದೆ ಎಂದು ಹೇಳುತ್ತಾರೆ ನಿರ್ದೇಶಕ ವಿಶ್ವಾಸ್. ಈ ಚಿತ್ರದ ತಾರಾಂಗಣದ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭೂತಪೂರ್ವ ನಟನೆಯಿಂದ ಜನಮನ ಗೆದ್ದ ಸ್ಟಾರ್ ನಟರೊಬ್ಬರು ಈ ಚಿತ್ರದ ಪ್ರಮುಖ ಪಾತ್ರ ಮಾಡಲಿದ್ದಾರೆ.

ಅನ್ಯ ಗ್ರಹ ಜೀವಿಯೆಂದೆ ಕರೆಯಲ್ಪಡುವ ಏಲಿಯನ್ಸ್ ಭೂಮಿಗೆ ಬಂದರೆ ಏನೆಲ್ಲ ಘಟನೆಗಳು ಸಂಭವಿಸಬಹುದು ಎಂಬುದನ್ನು ಈ 'ರಘಿರ' ಚಿತ್ರದಲ್ಲಿ ಹೇಳಲಾಗಿದೆ. ಸದ್ಯಕ್ಕೆ 'ರಘಿರ' ಚಿತ್ರದ ಕಂಟೆಂಟ್ ತಿಳಿಸಲು ಪ್ರೀ-ಟೀಸರ್ ಬಿಡುಗಡೆಯಾಗಿದೆ.
ಹೆಸರಾಂತ ತಾಂತ್ರಿಕ ವರ್ಗ 'ರಘಿರ' ಚಿತ್ರದಲ್ಲಿದೆ. ಖ್ಯಾತ ಛಾಯಾಗ್ರಹಕರಾದ ಸತ್ಯ ಹೆಗ್ಡೆ ಹಾಗೂ ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಮಾಡಲಿದ್ದು ಜನಪ್ರಿಯ ಸಂಗೀತ ನಿರ್ದೇಶಕ ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಟಿ.ಜಿ.ನಂದೀಶ್ ಈ ಚಿತ್ರಕ್ಕೂ ಸಂಭಾಷಣೆ ಬರೆಯಲಿದ್ದಾರೆ.


Click it and Unblock the Notifications











