ಸಂಜು ವೆಡ್ಸ್ ಗೀತಾ 2 ಚಿತ್ರತಂಡದ ವಿರುದ್ಧ ಕೆಂಡ ಕಾರಿದ ರಾಗಿಣಿ ದ್ವಿವೇದಿ..!
ಕನ್ನಡದ ಸಾಕಷ್ಟು ಹೀರೋಗಳ ಜೊತೆಗೆ ತೆರೆ ಹಂಚಿಕೊಂಡವರು ರಾಗಿಣಿ ದ್ವೀವೇದಿ. ಕೆಂಪೇಗೌಡ, ಗೋಕುಲ, ಶಂಕರ್ ಐಪಿಎಸ್., ಆರಕ್ಷಕ, ಶಿವ, ಬಂಗಾರಿ, ಹೀಗೆ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸುತ್ತಾನೇ ಒಂದು ಕಾಲದಲ್ಲಿ ಮಾಲಾಶ್ರೀ ಅವರು ಮಾಡುತ್ತಿದ್ದ ಪಾತ್ರಗಳನ್ನು ತಮ್ಮದಾಗಿಸಿಕೊಂಡ ರಾಗಿಣಿ ಆ ನಂತರ ವೀರ ರಣಚಂಡಿ, ರಾಗಿಣಿ ಐಪಿಎಸ್, ಮುಂತಾದ ಹೀರೋಯಿನ್ ಓರಿಯೆಂಟಡ್ ಚಿತ್ರಗಳಲ್ಲಿ ನಟಿಸಿದರು.
ಇಂಥಾ ರಾಗಿಣಿ ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಚಿತ್ರ ನೋಡಿದವರಿಗೆ ರಾಗಿಣಿ ಅವರ ಪಾತ್ರದ ಬಗ್ಗೆ ಪ್ರಶ್ನೆ ಕಾಡಲು ಶುರುವಾಗಿತ್ತು. ರಾಗಿಣಿ ಈ ಚಿತ್ರವನ್ನು ಮಾಡಿದ ಹಿಂದಿನ ಉದ್ದೇಶವಾದರೂ ಏನು ಎನ್ನುವ ಕುತೂಹಲ ಕಾಡಲು ಶುರುವಾಗಿತ್ತು. ಯಾಕೆಂದರೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ದಿನಗಳಲ್ಲಿ ರಾಗಿಣಿ ಈ ಚಿತ್ರದ ಕುರಿತು ತುಂಬ ಮಾತನಾಡಿದ್ದರು. ತಮ್ಮ ಪಾತ್ರ ಹಾಗೇ ಹೀಗೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಚಿತ್ರ ನೋಡುವಾಗ ರಾಗಿಣಿ ಕಂಡಿದ್ದು ಕೇವಲ ಹಾಡೊಂದರಲ್ಲಿ. ಹೀಗಾಗಿಯೇ ಯಾಕೆ ಹೀಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಈಗ ಖುದ್ದು ರಾಗಿಣಿ ಉತ್ತರ ನೀಡಿದ್ದಾರೆ. ಸಂಜು ವೆಡ್ಸ್ ಗೀತಾ 2 ತಂಡದ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಹೌದು, 'ರಿಪಬ್ಲಿಕ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಗಿಣಿ ದ್ವಿವೇದಿ ನಾನು ಇತ್ತೀಚೆಗೆ ಮಾಡಿದ ಪೂರ್ಣ ಪ್ರಮಾಣದಲ್ಲಿ ಮಾಡಿದ ಮೊದಲ ಚಿತ್ರ ಅಂದರೆ ಅದು ಸಂಜು ವೆಡ್ಸ್ ಗೀತಾ 2. ಆದರೆ ದೌರ್ಭಾಗ್ಯ ನನ್ನ ದೃಶ್ಯಗಳನ್ನೆಲ್ಲ ತೆಗೆದು ಹಾಕಿದ್ದಾರೆ ಎಂದು ಹೇಳಿದ್ದಾರೆ. ಆ ಚಿತ್ರದಲ್ಲಿ ನನ್ನದು ಹೀಗೆ ಬಂದು ಹಾಗೇ ಹೋಗುವ ಪಾತ್ರವಾಗಿರಲಿಲ್ಲ ಪ್ರಮುಖ ಪಾತ್ರವಾಗಿತ್ತು ಎಂದಿರುವ ರಾಗಿಣಿ ತುಂಬಾ ಚೆನ್ನಾಗಿರುತ್ತೆ ಎಂದು ಅಂದುಕೊಂಡು ನಾನು ಒಪ್ಪಿಕೊಂಡೆ ಆದರೆ ಅವರು ಯಾರ ಮಾತು ಕೇಳಿದರೋ ಏನು ಆಯ್ತು ಎನ್ನುವುದು ನನಗೆ ಗೊತ್ತಿಲ್ಲ ನನ್ನ ಪಾತ್ರಕ್ಕೆ ಕತ್ತರಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಚಿತ್ರತಂಡದ ಈ ನಡೆಯಿಂದ ನನಗೆ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.
ಇನ್ನು ಒಂದು ಚಿತ್ರಕ್ಕೆ ಒಬ್ಬ ನಟಿಯಾಗಿ ನಾವು ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿರುತ್ತೇವೆ ಆದರೆ ಆ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡದಿದ್ದಾಗ ಖಂಡಿತಾ ಬೇಜಾರಾಗುತ್ತೆ ಎಂದಿರುವ ರಾಗಿಣಿ ಚಿತ್ರದಿಂದ ನನ್ನ ದೃಶ್ಯಗಳನ್ನು ತೆಗೆದು ಹಾಕಲಾಗಿದೆ. ಬಹುಶಃ ರೀ-ರಿಲೀಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿದೆ, ಇಪ್ಪತ್ತು ನಿಮಿಷದ ದೃಶ್ಯಗಳನ್ನು ಸೇರಿಸಿದ್ದಾರೆ ಎಂದು ಕೇಳಿದೆ, ಈಗ ಇಪ್ಪತ್ತು ನಿಮಿಷ ಸೇರಿಸುವುದಾದರೆ ಮೊದಲು ಇಪ್ಪತ್ತು ನಿಮಿಷ ಯಾಕೆ ತೆಗೆದು ಹಾಕಿದ್ರಿ ಎಂದು ಸಂಜು ವೆಡ್ಸ್ ಗೀತಾ 2 ಚಿತ್ರತಂಡವನ್ನು ರಾಗಿಣಿ ಪ್ರಶ್ನೆ ಮಾಡಿದ್ದಾರೆ.
ಮುಂದುವರೆದು ನನ್ನದೂ ಬಹುದೊಡ್ಡ ಪಾತ್ರ, ಅದಕ್ಕೆ ನಾನು ಚಿತ್ರದಲ್ಲಿದ್ದೀನಿ ಅಂತ ದೊಡ್ಡದಾಗೆಲ್ಲ ಘೋಷಣೆ ಮಾಡಿದರು, ಆದರೆ ನಾನು ಇಲ್ಲದಿರುವಾಗ ಚಿತ್ರವನ್ನು ರಿಲೀಸ್ ಮಾಡಿದ್ದಾರೆ ಎಂದಿರುವ ರಾಗಿಣಿ ಕೊನೆ ಪಕ್ಷ ಚಿತ್ರ ಯಾವಾಗ ಬಿಡುಗಡೆಯಾಗುತ್ತಿದೆ ಎನ್ನುವ ವಿಚಾರವಾದರೂ ನನಗೆ ಗೊತ್ತಿರಬೇಕಲ್ವಾ ? ಸಿನಿಮಾ ತಂಡದ ವತಿಯಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ. ಪ್ರಚಾರಕ್ಕೆ ಕೂಡ ಕರೆಯಲಿಲ್ಲ, ಇದು ಅನ್ ಪ್ರೋಫೆಷನಲ್ ಎಂದು ಹೇಳಿದ್ದಾರೆ. ಎಲ್ಲವನ್ನೂ ಬಿಟ್ಹಾಕಿ ಚಿತ್ರಕ್ಕೆ ಕಥೆ ಮುಖ್ಯ ಅದನ್ನೇ ಅರ್ಥ ಮಾಡಿಕೊಂಡಿದ್ದ ಅಂದರೆ, ಈ ಕೆಟ್ಟ ಪ್ರಪಂಚದಲ್ಲಿ ನಾವೇ ಒಳ್ಳೆಯವರು ಎಂದು ನನಗೆ ಅನಿಸಿಬಿಟ್ಟಿದೆ ಎಂದು ಹೇಳಿದ್ದಾರೆ. ತಮ್ಮ ಮನದ ಬೇಸರವನ್ನು ಈ ಮೂಲಕ ಹೊರ ಹಾಕಿದ್ದಾರೆ.


Click it and Unblock the Notifications











