ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದ ರಾಗಿಣಿ ದ್ವಿವೇದಿ
ಮಾದಕ ವಸ್ತು ಪ್ರಕರಣದಲ್ಲಿ ಹೋದ ಮಾನವನ್ನು ಸಮಾಜ ಸೇವೆ ಮೂಲಕ ಮರಳಿ ಗಳಿಸುವ ಯತ್ನದಲ್ಲಿ ರಾಗಿಣಿ ನಿರತರಾಗಿದ್ದಾರೆಯೇ ಎಂಬ ಅನುಮಾನ ಇತ್ತೀಚೆಗೆ ಸಿನಿಪ್ರೇಮಿಗಳಿಗೆ ಮೂಡುತ್ತಿದೆ.
Recommended Video
ಕೊರೊನಾದ ಸಂಕಷ್ಟದ ಸಮಯದಲ್ಲಿ ಉಚಿತ ಆಹಾರ ವಿತರಣೆ, ಉಚಿತ ದಿನಸಿ ವಿತರಣೆ ಮಾಡುತ್ತಿರುವ ರಾಗಿಣಿ ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಾಟು ಮಾಡಿದ್ದರು.
ಕೆಲವು ದಿನಗಳ ಹಿಂದಷ್ಟೆ ಲಸಿಕೆ ಪಡೆಯುವ ಮುನ್ನ ರಕ್ತ ನೀಡಿದ್ದ ರಾಗಿಣಿ, ಇಂದು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಿದ್ದರು. ಶಿಬಿರದಲ್ಲಿ ಹಲವರು ರಕ್ತ ನೀಡಿದರು.
ಈ ಸಂದರ್ಭದಲ್ಲಿ 'ಫಿಲ್ಮೀಬೀಟ್ ಕನ್ನಡ' ಜೊತೆಗೆ ಮಾತನಾಡಿದ ರಾಗಿಣಿ, 'ರಕ್ತ ದಾನ ಮಾಡುವುದು ಆರೋಗ್ಯದ ಕಾರಣಕ್ಕೆ ಒಳ್ಳೆಯದು. ಕೆಲವು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಅಷ್ಟೇ ಅಲ್ಲದೆ ರಕ್ತ ದಾನ ಮಾಡುವುದರಿಂದ ಇತರರ ಜೀವ ಉಳಿಯುತ್ತದೆ' ಎಂದಿದ್ದಾರೆ.

ತಂದೆ-ತಾಯಿಗಳು ನಮ್ಮನ್ನು ಬೆಳೆಸಿರುವುದು ಹೀಗೆಯೇ: ರಾಗಿಣಿ
ಮಾಡುತ್ತಿರುವ ಸಮಾಜ ಸೇವೆ ಬಗ್ಗೆ ಮಾತನಾಡಿದ ರಾಗಿಣಿ 'ನಮ್ಮ ತಂದೆ-ತಾಯಿಗಳು ನಮ್ಮನ್ನು ಬೆಳೆಸಿರುವುದು ಹೀಗೆಯೇ. ಸಮಾಜಕ್ಕೆ ನಿಮ್ಮ ಕೈಲಿಂದ ಏನಾಗುತ್ತದೆಯೋ ಅದನ್ನು ಕೊಡು ಎಂದು ಹೇಳಿಕೊಟ್ಟಿದ್ದಾರೆ. ಇಂಥಹಾ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಇದನ್ನೆಲ್ಲ ಮಾಡುವುದರಿಂದ ನನಗೂ ಮನಸ್ಸಿಗೆ ತೃಪ್ತಿ ಎನಿಸುತ್ತದೆ' ಎಂದಿದ್ದಾರೆ ರಾಗಿಣಿ.

ಕಳೆದ ವರ್ಷದಿಂದಲೂ ಉಚಿತ ಆಹಾರ ವಿತರಣೆ: ರಾಗಿಣಿ
'ಆಹಾರ ಮತ್ತು ನೀರು ಮೊದಲ ಅಗತ್ಯ ಮತ್ತು ಹಕ್ಕು. ನಾವು ಕಳೆದ ವರ್ಷದಿಂದಲೂ ಪ್ರತಿದಿನವೂ ಉಚಿತ ಆಹಾರ ವಿತರಣೆ ಮಾಡುತ್ತಲೇ ಬಂದಿದ್ದೀವಿ. ಈಗಲೂ ಪ್ರತಿದಿನ ಸಾವಿರಾರು ಪಾಕೆಟ್ ಊಟವನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ' ಎಂದಿದ್ದಾರೆ.

ಸೇವೆಯನ್ನು ನಾನು ನನ್ನ ತೃಪ್ತಿಗಾಗಿ ಮಾಡುತ್ತಿದ್ದೇನೆ: ರಾಗಿಣಿ
'ಈ ಸೇವೆಯನ್ನು ನಾನು ನನ್ನ ತೃಪ್ತಿಗಾಗಿ ಮಾಡುತ್ತಿದ್ದೇನೆ. ನನ್ನಂಥೆ ಎಲ್ಲರೂ ಸಹಾಯ ಮಾಡಲಿ ಎಂಬುದು ನನ್ನ ಉದ್ದೇಶವಲ್ಲ. ಎಲ್ಲರೂ ನನ್ನಂತೆ ಇರಬೇಕು ಎಂದುಕೊಳ್ಳಲಾಗದು. ಯಾರಿಗೆ ಮನಸ್ಸಿದೆಯೋ ಅವರು ಸೇವೆ ಮಾಡುತ್ತಾರೆ. ನಮಗೆ ದೇವರ ಕೃಪೆಯಿಂದ ತುಸು ಹಣವಿದೆ, ಮನೆಯಿದೆ, ಬೆಂಬಲಿಸುವ ಕುಟುಂಬವಿದೆ. ಇರುವ ಸಮಯದಲ್ಲಿ ನಾವು ಬೇರೆಯವರಿಗೆ ಸಹಾಯ ಮಾಡಬೇಕು' ಎಂದಿದ್ದಾರೆ ರಾಗಿಣಿ.

ಜೆನೆಕ್ಸ್ಟ್ ಹೆಸರಿನ ಸೇವಾ ಸಂಸ್ಥೆ
ಜೆನೆಕ್ಸ್ಟ್ ಹೆಸರಿನ ಸೇವಾ ಸಂಸ್ಥೆ ಆರಂಭಿಸಿರುವ ರಾಗಿಣಿ ಅದರ ಮೂಲಕವೇ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. 'ಈ ಸಂಸ್ಥೆಯನ್ನು ಕೇವಲ ಕೋವಿಡ್ ಕಾಲಕ್ಕೆಂದು ಮಾತ್ರವೇ ನಾವು ಸ್ಥಾಪಿಸಿಲ್ಲ ಬದಲಿಗೆ ಈ ಸಂಸ್ಥೆಯು ಮುಂದಿನ ದಿನಗಳಲ್ಲಿಯೂ ಜನರಿಗೆ ನೆರವು ನೀಡಲಿದೆ. ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಲಿದೆ' ಎಂದಿದ್ದಾರೆ.


Click it and Unblock the Notifications











