ಮನೆಗೆ ನೀರು ನುಗ್ಗಿದೆ ಎಂದು ಜಗ್ಗೇಶ್ ಅಳಲು: ನೀವೇ ಹೀಗಂದ್ರೆ ಜನ ಸಾಮಾನ್ಯರ ಪಾಡೇನು ಎಂದ ಜನ?
ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಧಾರಾಕಾರ ಮಳೆಗೆ ತಗ್ಗುಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗುತ್ತಿದೆ. ಇದರಿಂದ ಜನ ಪರದಾಡುವಂತಾಗಿದೆ. ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಅವರ ತುಮಕೂರು ತುರುವೆಕೆರೆ ತಾಲೂಕಿನ ಮಾಯಸಂದ್ರದ ಮನೆಗೂ ನೀರು ನುಗ್ಗಿ ಸಮಸ್ಯೆಯಾಗಿದೆ. ಈ ಬಗ್ಗೆ ಫೋಟೊ ಕ್ಲಿಕ್ಕಿಸಿ ಸಂಬಂಧಪಟ್ಟವರು ಗಮನ ಹರಿಸಿ ಎಂದು ಸಿಎಂ ಬೊಮ್ಮಾಯಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ವಿಟ್ಟರ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಟ ಜಗ್ಗೇಶ್ ಮೂಲತಃ ಮಾಯಸಂದ್ರದವರು. ಇವತ್ತಿಗೂ ಅವರ ಸಹೋದರ ರಾಮಚಂದ್ರ ಜಗ್ಗೇಶ ಅವರ ಹುಟ್ಟೂರಿನ ಮನೆಯಲ್ಲೇ ಇದ್ದಾರೆ. ಅದೇ ಮನೆಗೆ ಮಳೆ ನೀರು ನುಗ್ಗಿದೆ. ನೀರನ್ನೆಲ್ಲಾ ಹೊರಗೆ ಹಾಕಿದ ನಂತರ ಮನೆಯಲ್ಲಿ ಕೆಸರು ತುಂಬಿದೆ. ಈ ಫೋಟೊಗಳನ್ನು ತಮ್ಮ ಟ್ವಿಟ್ಟರ್ ಪೇಜ್ನಲ್ಲಿ ಜಗ್ಗೇಶ್ ಹಾಕಿದ್ದಾರೆ. "ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತ.ಬಹುತೇಕರು ನೀರು ಹರಿವ ಸರ್ಕಾರದ ಜಾಗದಲ್ಲಿ ಮನೆಕಟ್ಟಿ ನೀರು ಹರಿಯುವ ಹೊಂಡಗಳ ಮುಚ್ಚಿದ್ದಾರೆ. ಮಾಯಸಂದ್ರ ತಳದಲ್ಲಿ ಇರುವ ಸುಮಾರು 20 ಆಸ್ತಿಗಳಿಗೆ ನಿರಂತರ ನೀರು ನುಗ್ಗುತ್ತದೆ ದಯಮಾಡಿ ನೀರಾವರಿನಿಗಮ ಗಮನ ಹರಿಸಿ ವಿನಂತಿ" ಎಂದು ಜಗ್ಗೇಶ್ ಬರೆದಿದ್ದಾರೆ.ರಾಜ್ಯಸಭೆ ಸದಸ್ಯ ಜಗ್ಗೇಶ್ ಟ್ವೀಟ್ಗೆ ತರಹೇವಾರಿ ಕಾಮೆಂಟ್ಗಳು ಬಂದಿವೆ. ಸಾಕಷ್ಟು ಜನ ಅಳಲು ತೋಡಿಕೊಂಡ ನವರಸನಾಯಕನನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ್ಮದೇ ಸರ್ಕಾರ ಇದ್ದು, ನೀವು ರಾಜ್ಯಸಭೆ ಸದಸ್ಯರಾಗಿದ್ದು, ನಿಮಗೆ ಇಂತಹ ಸ್ಥಿತಿ ಬಂದಿದ್ದರೆ ಉಳಿದವರ ಪಾಡೇನು ? ಎಂದು ಕಾಲೆಳೆದಿದ್ದಾರೆ. ನಿಮಗೆ ಕಷ್ಟ ಅಂತ ಈಗ ಕೇಳುತ್ತಿದ್ದೀರಿ. ಜನಸಾಮಾನ್ಯರಿಗೆ ಇಂತಹ ಸಮಸ್ಯೆ ಆದಾಗ ನೀವು ಪ್ರತಿಕ್ರಿಯಿಸಿದ್ದೀರಾ? ನಿಮ್ಮದೇ ಬಿಜೆಪಿ ಸರ್ಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ನೀವೇ ಬೇಡಿಕೊಳ್ಳುವಂತಾಗಿದೆ, ತುಮಕೂರಿನ ಸಾಕಷ್ಟು ಭಾಗಗಳಲ್ಲಿ ಇದೇ ರೀತಿ ಸಮಸ್ಯೆ ಆಗಿದೆ. ಅವರೆಲ್ಲರ ಕಷ್ಟ ಕಾಣಿಸುವುದಿಲ್ಲ. ನಿಮ್ಮ ಮನೆಗೆ ನೀರು ನುಗ್ಗಿದ್ದು ಮಾತ್ರ ಕಾಣಿಸುತ್ತಿದೆ ಅಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಅಲ್ಲ ಜಗ್ಗೇಶ್ ಅವ್ರೇ, ತುರುವೇಕೆರೆ ಶಾಸಕರು ಬಿಜೆಪಿ, ತುಮಕೂರಿನ ಎಂಪಿ ಬಿಜೆಪಿ, ಇನ್ನು ನೀವು ರಾಜ್ಯಸಭೆ ಸದಸ್ಯ. ನಿಮ್ಮದೇ ಸರ್ಕಾರ ಇದೆ ಇನ್ನು ನಿಮ್ ಅಂತವರ ಪರಿಸ್ಥಿತಿನೇ ಈಗೆ ಆದ್ರೆ ನಿಮ್ಮ ಪಕ್ಷದ ಆಡಳಿತ ಇದ್ದಾಗ ಜನಸಾಮಾನ್ಯರ ಪಾಡೇನು ಸ್ವಾಮಿ" ಎಂದು ಮತ್ತೊಬ್ಬರು ಕೇಳಿದ್ದಾರೆ. "ಎಲ್ಲಾ ಹೀಗೇ ನೋಡಿ ಸಾಮಾನ್ಯ ಜನರಿಗೆ ಈ ಥರ ಆಗಿದ್ರೆ ಈ ಪೋಸ್ಟ್ ಹಾಕ್ತಾ ಇರ್ಲಿಲ್ಲ ಅಲ್ವಾ? ತಮ್ಮ ಮನೆಗೆ ಕಷ್ಟ ಆದ್ರೇ ಮಾತ್ರ ನೆನಪು ಆಗೋದು ಅಲ್ವ? ನೀವು ಒಬ್ಬರೇ ಅಲ್ಲ ಬಿಡಿ ಎಲ್ಲ ರಾಜಕಾರಣಿಗಳು ಹಾಗೇ" ಎಂದು ಇನ್ನೊಬ್ಬರು ಕುಟುಕಿದ್ದಾರೆ.
Recommended Video
2008ರಲ್ಲಿ ತುರುವೇಕೆರೆಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಜಗ್ಗೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿಗೆ ಸೇರಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಕೆಎಸ್ಆರ್ಟಿಸಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಈಗ ರಾಜ್ಯಸಭೆಗೆ ಬಿಜೆಪಿಯಿಂದ ಪ್ರವೇಶಿಸಿದ್ದಾರೆ. ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅವರ ಸಕ್ರಿಯರಾಗಿದ್ದಾರೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಜಗ್ಗೇಶ್ ಜುಲೈನಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಜೊತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್ ಸಿಂಗ್ ಹಾಗೂ ಜೈರಾಮ್ ರಮೇಶ್ ಸಹ ಪ್ರಮಾಣವಚನ ಸ್ವೀಕರಿಸಿದ್ದರು.


Click it and Unblock the Notifications











