Actor Ganesh: ಗೋಲ್ಡನ್ ಸ್ಟಾರ್ ಗಣೇಶ್ ವಿರುದ್ಧ ರೈತಸಂಘ ಪ್ರತಿಭಟನೆ.. ಗ್ರಾಮಸ್ಥರಿಂದಲೇ ತಡೆ!
Chamarajanagar: ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಸಂಬಂಧ ಪ್ರಕರಣ ಹೈಕೋರ್ಟ್ ಮೆಟ್ಟಿಲು ಕೂಡ ಏರಿತ್ತು.
ಹೈ ಕೋರ್ಟ್ನಲ್ಲಿ ವಾದ ಪ್ರತಿವಾದಗಳ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ಗೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಮ್ಮತಿಸಿ ಆದೇಶ ನೀಡಲಾಗಿದೆ. ಹೀಗಾಗಿ ನಟ ಗಣೇಶ್ಗೆ ಈ ಪ್ರಕರಣದಿಂದ ರಿಲೀಫ್ ಸಿಕ್ಕಿತ್ತು. ಆದರೆ, ರೈತ ಸಂಘ ಈ ಕಾಮಗಾರಿಯನ್ನು ವಿರೋಧಿಸುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ನಿರ್ಮಾಣ ಮಾಡುತ್ತಿರುವ ಮನೆ ಕಾಮಗಾರಿ ವಿರುದ್ಧ ಇಂದು (ಸೆಪ್ಟೆಂಬರ್ 7) ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಗಣೇಶ್ ಮನೆ ನಿರ್ಮಾಣ ಮಾಡುತ್ತಿರುವ ಜಕ್ಕಹಳ್ಳಿ ಗ್ರಾಮಸ್ಥರೇ ರೈತ ಸಂಘದ ಪ್ರತಿಭಟನೆಯನ್ನು ವಿರೋಧಿಸಿದ ಘಟನೆ ನಡೆದಿದೆ.
ಇಂದು (ಸೆಪ್ಟೆಂಬರ್ 7) ಗುಂಡ್ಲುಪೇಟೆ ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಗಣೇಶ್ ಮನೆ ಕಾಮಗಾರಿ ಮಾಡುತ್ತಿರುವ ಸ್ಥಳಕ್ಕೆ ರೈತ ಸಂಘದ ಕಾರ್ಯಕರ್ತರು ತೆರಳಿ ಪ್ರತಿಭಟನೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಜಕ್ಕಹಳ್ಳಿ ಹಾಗೂ ಮಂಗಲ ಗ್ರಾಮಸ್ಥರು ಘೇರವ್ ಹಾಕಿ ಈ ಸ್ಥಳಕ್ಕೆ ಹೋಗದಂತೆ ತಡೆದು ರೈತ ಸಂಘಟನೆಯ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.

"ನಮಗೆ ಗಣೇಶ್ ಅವರ ಕಟ್ಟಡ ನಿರ್ಮಾಣದಿಂದ ಯಾವುದೇ ರೀತಿಯ ತೊಂದರೆ ಆಗುತ್ತಿಲ್ಲ. ಇಲ್ಲಿನ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಏನಾದರೂ ನಿಮಗೆ ಮನವಿ ಮಾಡಿದ್ದೇವೆಯೇ? ನಮಗೆ ತೊಂದರೆ ಆದರೆ ನಾವೇ ಗ್ರಾಮಸ್ಥರು ಬಗೆಹರಿಸಿಕೊಳ್ಳುತ್ತೇವೆ. ನಿಮ್ಮ ಅವಶ್ಯಕತೆ ನಮಗಿಲ್ಲ. ನಿಮಗೆ ಜಾಗ ವೀಕ್ಷಣೆ ಮಾಡಲು ಬಿಡುವುದಿಲ್ಲ" ಎಂದು ಗ್ರಾಮಸ್ಥರು ಘೇರಾವ್ ಹಾಕಿ ಪ್ರತಿಭಟನಾಕಾರರಿಗೆ ಪ್ರಶ್ನೆ ಮಾಡಿದ್ದಾರೆ.
"ಕಾಡಿನ ಅಂಚಿನಲ್ಲಿರುವ ಗ್ರಾಮಕ್ಕೆ ಇಪ್ಪತ್ತು ವರ್ಷಗಳ ಕಾಲ ರಸ್ತೆ ಇರಲಿಲ್ಲ. ಕಾಡು ಪ್ರಾಣಿಗಳಿಂದ ಜನ ಮತ್ತು ಕೃಷಿ ಚಟುವಟಿಕೆಗಳಿಗೆ ತೊಂದರೆಯಾದ ಸಂದರ್ಭದಲ್ಲಿ ಯಾವ ಸಂಘಟನೆಗಳು ಈ ಕಡೆಗೆ ಮುಖ ಮಾಡಿಲ್ಲ" ಎಂದು ಗ್ರಾಮಸ್ಥರು ಕಿಡಿಕಾರಿದ್ದರು. ಆಗ ರೈತ ಸಂಘಟನೆಯ ಮಾಡ್ರಹಳ್ಳಿ ಮಹಾದೇವಪ್ಪ "ನಮಗೆ ಯಾವ ಪರಿಸರವಾದಿಗಳು ಪ್ರತಿಭಟಿಸಲು ಹೇಳಿಲ್ಲ. ಕಾಡಂಚಿನ ಜನರಿಗೆ ಮಾತ್ರ ಕಾನೂನು ಕೇಳುವ ಸರ್ಕಾರ ಹಣವಂತರಿಗೆ ಹೇಗೆ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿತು ಎಂದು ತಿಳಿದುಕೊಳ್ಳುವ ಸಲುವಾಗಿ ಬಂದಿದ್ದೇವೆ" ಎಂದು ಗ್ರಾಮಸ್ಥರಿಗೆ ಹೇಳಿದರೂ ಕೂಡ ಅಲ್ಲಿನ ಜನರು ಪ್ರತಿಭಟನೆ ಮಾಡಲು ಬಿಟ್ಟಲ್ಲ.
ಈ ವೇಳೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ರೈತ ಸಂಘಟನೆಯ ಕಾರ್ಯಕರ್ತರನ್ನು ಒಳಗೆ ಬಿಡಬೇಕು ಎಂದು ಒತ್ತಾಯಿಸಲಾಯಿತು. ಆದರೆ, ಈ ಪ್ರಕರಣ ಹೈ ಕೋರ್ಟ್ನಲ್ಲಿರುವುದರಿಂದ ಪೊಲೀಸರು ಮಧ್ಯೆ ಪ್ರವೇಶ ಮಾಡುವುದಿಲ್ಲ. ಭದ್ರತೆ ಒದಗಿಸುವುದಷ್ಟೇ ನಮ್ಮ ಕೆಲಸ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ರೈತ ಮುಖಂಡರಿಗೆ ಮಾಹಿತಿ ನೀಡಿದರು. ಗೋಲ್ಡನ್ ಸ್ಟಾರ್ ಗಣೇಶ್ ಮನೆ ಕಾಮಗಾರಿ ಪ್ರಕರಣಕ್ಕೆ ಪರ ಹಾಗೂ ವಿರೋಧ ಎರಡೂ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣ ಯಾವ ಸ್ವರೂಪ ಪಡೆಯುತ್ತೆ ಅನ್ನೋದೇ ಕುತೂಹಲ.


Click it and Unblock the Notifications











