ಕಾಂತಾರಕ್ಕೂ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್! ವೈರಲ್ ಆಯಿತು ನಿರ್ದೇಶನದ ದೃಶ್ಯ
ಕಾಂತಾರ ಹೊಂಬಾಳೆ ಫಿಲ್ಮ್ಸ್ನ ಏಳನೇ ಚಿತ್ರ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ನಾಲ್ಕನೇ ಸಿನಿಮಾ. ಪುನೀತ್ ಹಾಗೂ ಯಶ್ಗೆ ಮಾತ್ರ ಸಾಲು ಸಾಲಾಗಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಬಿಡುಗಡೆಗೊಳಿಸಲಿರುವ ಅಪ್ಪು ಯಶ್ ನಾಯಕರಲ್ಲದ ಮೊದಲ ಸಿನಿಮಾ ಈ ಕಾಂತಾರ.
ಕಂಬಳ ಸುತ್ತ ನಡೆಯುವ ಕನ್ನಡ ನಾಡಿನ ಮಣ್ಣಿನ ಕತೆಯನ್ನು ನಿರ್ದೇಶಕ ರಿಷಬ್ ಶೆಟ್ಟಿ ಹೇಳಲು ಹೊರಟಿದ್ದು, ಚಿತ್ರದ ಹಾಡು ಮತ್ತು ಟ್ರೈಲರ್ ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ರಿಷಬ್ ಶೆಟ್ಟಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದು ಪಾಪ್ ಕಾರ್ನ್ ಮಂಕಿ ಟೈಗರ್ ಖ್ಯಾತಿಯ ಸಪ್ತಮಿ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರ ಇದೇ ತಿಂಗಳ 30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು ಚಿತ್ರತಂಡ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಲು ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಗೊಳಿಸಲು ತೀರ್ಮಾನಿಸಿದೆ. ಈ ವಿಡಿಯೋಗೆ 'ವರ್ಲ್ಡ್ ಆಫ್ ಕಾಂತಾರ' ಎಂದು ಹೆಸರಿಟ್ಟಿದ್ದು, ಈ ವಿಡಿಯೋ ಇದೇ ಸೆಪ್ಟೆಂಬರ್ 22ರಂದು ಬಿಡುಗಡೆಗೊಳ್ಳಲಿದೆ. ಹೀಗೆ ಕಾಂತಾರದ ತೆರೆ ಹಿಂದಿನ ಪ್ರಪಂಚವನ್ನು ತೋರಿಸಲು ಮುಂದಾಗಿರುವ ಚಿತ್ರತಂಡ ಇದಕ್ಕೂ ಮುನ್ನ ಇದರ ತುಣುಕೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ.

ರಿಷಬ್ ಶೆಟ್ಟಿಗೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್
ಕಳೆದ ವರ್ಷವಷ್ಟೇ ಬೇರೆ ಚಿತ್ರರಂಗದ ಸಿನಿ ಪ್ರೇಕ್ಷಕರು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಹ ನಿರ್ದೇಶನವನ್ನು ಗರುಡ ಗಮನ ವೃಷಭ ವಾಹನ ಮೂಲಕ ಮಾಡಿ ಸೈ ಎನಿಸಿಕೊಂಡಿದ್ದ ರಾಜ್ ಬಿ ಶೆಟ್ಟಿ ಇದೀಗ ಕಾಂತಾರದಲ್ಲಿಯೂ ಭೂತಾರಾಧನೆಯ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳಿರುವುದು ಈ ಮೇಕಿಂಗ್ ವಿಡಿಯೋ ತುಣುಕಿನ ಮೂಲಕ ತಿಳಿದು ಬಂದಿದೆ. ಈ ದೃಶ್ಯದ ಕುರಿತು ವಿಶೇಷವಾಗಿ ಮಾತನಾಡುತ್ತಿರುವ ನೆಟ್ಟಿಗರು ಇಂಥ ಕಠಿಣ ದೃಶ್ಯಗಳಲ್ಲಿ ರಿಷಬ್ ನಟನೆಯನ್ನೂ ಮಾಡಿ, ನಿರ್ದೇಶನವನ್ನೂ ಮಾಡುವುದು ಕಷ್ಟ ಎನಿಸಿ ರಾಜ್ ಬಿ ಶೆಟ್ಟಿ ಸಹಾಯ ಪಡೆದಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ಗರುಡ ಗಮನ ನಂತರ ಮತ್ತೆ ಈ ಜೋಡಿ ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪೂರ್ಣ ವಿಡಿಯೋ ಯಾವಾಗ?
ಸದ್ಯ ಮೇಕಿಂಗ್ ವಿಡಿಯೋದ ತುಣುಕನ್ನು ಮಾತ್ರ ಹಂಚಿಕೊಂಡಿರುವ ಕಾಂತಾರ ತಂಡ ಸಂಪೂರ್ಣ ವಿಡಿಯೋವನ್ನು ಸೆಪ್ಟೆಂಬರ್ 22ರಂದು ಬೆಳಗ್ಗೆ ಹತ್ತು ಗಂಟೆಗೆ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳಿಸಲಿದೆ. ಈಗಾಗಲೇ ಟ್ರೈಲರ್ನಿಂದ ವೀಕ್ಷಕರ ಚಿತ್ತ ಗೆದ್ದಿರುವ ತಂಡ ಈ ಮೇಕಿಂಗ್ ವಿಡಿಯೋದಿಂದ ಮತ್ತಷ್ಟು ಸದ್ದು ಮಾಡುವುದು ಖಚಿತ.

ಅಪ್ಪು ಅಭಿನಯಿಸಬೇಕಿತ್ತು
ಇನ್ನು ಎಲ್ಲಾ ಅಂದುಕೊಂಡಂತೆ ಈ ಸಿನಿಮಾದ ನಾಯಕನಾಗಿ ಪುನೀತ್ ರಾಜ್ಕುಮಾರ್ ನಟಿಸಬೇಕಿತ್ತು ಹಾಗೂ ರಿಷಬ್ ಶೆಟ್ಟಿ ಅಪ್ಪು ಅವರಿಗೆ ಆಕ್ಷನ್ ಕಟ್ ಹೇಳಬೇಕಿತ್ತು ಎಂಬ ವಿಷಯವನ್ನು ಇತ್ತೀಚಿಗಷ್ಟೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಬಿಚ್ಚಿಟ್ಟಿದ್ದಾರೆ. ಈ ಚಿತ್ರವನ್ನು ನಿರ್ದಿಷ್ಟ ಹವಾಮಾನದಲ್ಲಿ ಚಿತ್ರೀಕರಿಸಬೇಕಿತ್ತು, ಆದರೆ ಆ ಸಮಯದಲ್ಲಿ ಅಪ್ಪು ಬೇರೆ ಚಿತ್ರದಲ್ಲಿ ಬ್ಯುಸಿ ಇದ್ದ ಕಾರಣ ರಿಷಬ್ ಅವರೇ ಅಭಿನಯಿಸಲಿ ಎಂದು ಸೂಚಿಸಿದರು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.


Click it and Unblock the Notifications











