ಮೊಟ್ಟೆ ಕಥೆ ನಂತ್ರ ಗುಬ್ಬಿ ಕಥೆ ಹೇಳ್ತಾರೆ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ 'ಒಂದು ಮೊಟ್ಟೆಯ ಕಥೆ' ಅಂತಹ ವಿಭಿನ್ನ ಸಿನಿಮಾವನ್ನು ಕನ್ನಡ ಅಭಿಮಾನಿಗಳಿಗೆ ನೀಡಿದ ನಾಯಕ ನಟ ಹಾಗೂ ನಿರ್ದೇಶಕ. ಸದ್ಯ ಗಾಂಧಿನಗರದಲ್ಲಿ ಮತ್ತಷ್ಟು ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಲು ರಾಜ್ ಬಿ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಅವುಗಳ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ.
"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಸಿನಿಮಾದ ಮುಹೂರ್ತ ಇಂದು ನಡೆದಿದೆ. 'ಚಮಕ್', 'ಅಯೋಗ್ಯ', 'ಬೀರ್ ಬಲ್', 'ಜಾನ್ ಸೀನಾ' ಸಿನಿಮಾವನ್ನ ನಿರ್ಮಾಣ ಮಾಡಿರುವ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಸಂಸ್ಥೆಯಿಂದಲೇ " ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ನಿರ್ಮಾಣವಾಗುತ್ತಿದೆ.

ಇಷ್ಟು ದಿನಗಳ ಕಾಲ ಸಿನಿಮಾ, ಧಾರಾವಾಹಿಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಸುಜಯ್ ಶಾಸ್ತ್ರಿ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್ ಹೇಳುವಂತೆ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ.ವಿದ್ಯಾ ವಿನಾಯ ಧಾರಾವಾಹಿ ಖ್ಯಾತಿಯ ನಟಿ ಕವಿತಾ ಗೌಡ ಸಿನಿಮಾಗೆ ನಾಯಕಿ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಮುಹೂರ್ತ ಮುಗಿಸಿರುವ ಚಿತ್ರತಂಡ ಮುಂದಿನವಾರದಿಂದ ಚಿತ್ರೀಕರಣ ಆರಂಭಿಸಲಿದೆ. ಈಗಾಗಲೇ ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರುವ ರಾಜ್ ಬಿ ಶೆಟ್ಟಿ "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಚಿತ್ರದ ಮೂಲಕ ಮತ್ತೆ ಸಿನಿಮಾ ಪ್ರೇಮಿಗಳ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರಾ ಕಾದು ನೋಡಬೇಕು.


Click it and Unblock the Notifications











