ರಮ್ಯಾಗೆ ರಾಜ್ ಬಿ ಶೆಟ್ಟಿ ಆಕ್ಷನ್ ಕಟ್: ನಿರ್ದೇಶಕರು ಏನಂದ್ರು?
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ಬಣ್ಣ ಹಚ್ಚುವ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಾಜಾ ಸಮಾಚಾರ ಏನಂದರೆ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಪದ್ಮಾವತಿ ನಟಿಸ್ತಾರೆ ಅನ್ನುವುದು.
'ನಾಗರಹಾವು' ಸಿನಿಮಾ ನಂತರ ರಮ್ಯಾ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಇತ್ತೀಚೆಗೆ ಚಿತ್ರರಂಗದತ್ತ ಮತ್ತೆ ಒಲವು ತೋರಿಸಿರುವ ಮೋಹಕತಾರೆ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರಂತೆ. ಶೀಘ್ರದಲ್ಲೇ ಸಿನಿಮಾದಲ್ಲಿ ನಟಿಸುವುದರ ಬಗ್ಗೆ ಕೂಡ ರಮ್ಯಾ ಆಸಕ್ತಿ ತೋರಿಸಿದ್ದಾರೆ. ಆದರೆ ಯಾವ ಸಿನಿಮಾ ? ನಾಯಕ ಯಾರು ? ನಿರ್ದೇಶಕ ಯಾರು ? ಬ್ಯಾನರ್ ಯಾವುದು ? ಅನ್ನುವುದು ಇನ್ನು ಕನ್ಫರ್ಮ್ ಆಗಿಲ್ಲ.
ಕಳೆದೆರಡು ದಿನಗಳಿಂದ ಹೊಸ ಸುದ್ದಿಯೊಂದು ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡ್ತಿದೆ. 'ಗರುಡ ಗಮನ ವೃಷಭ ವಾಹನ' ನಂತರ ನಟ, ನಿರ್ದೇಶಕ, ಬರಹಗಾರ ರಾಜ್ ಬಿ ಶೆಟ್ಟಿ ರಮ್ಯಾಗೆ ಒಂದು ಕಥೆ ಬರೆದಿದ್ದಾರೆ ಅನ್ನುವುದು. ಈಗಾಗಲೇ ರಮ್ಯಾ ಕಥೆ ಕೇಳಿ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಆಕೆಯೇ ಸಿನಿಮಾ ನಿರ್ಮಾಣ ಮಾಡ್ತಾರೆ ಅಂತೆಲ್ಲಾ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಸ್ವತ: ರಾಜ್ ಬಿ. ಶೆಟ್ಟಿ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಶೆಟ್ರ ನಿರ್ದೇಶನದಲ್ಲಿ ಮೋಹಕತಾರೆ?
ಸದ್ಯ ಕೇಳಿ ಬರುತ್ತಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಜ್ ಬಿ. ಶೆಟ್ಟಿ "ನಾನು ರಮ್ಯಾ ಅವರಿಗೆ ಸಿನಿಮಾ ಮಾಡುತ್ತೀನಿ ಅನ್ನುವುದೆಲ್ಲಾ ಸುಳ್ಳು. ಯಾವುದೇ ಕಥೆಯನ್ನು ಹೇಳಿಲ್ಲ, ರಮ್ಯಾ ಅವರೊಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಈ ಸುದ್ದಿ ಹೇಗೆ ಹುಟ್ಟಿಕೊಳ್ತು ಅನ್ನುವುದೇ ಗೊತ್ತಾಗುತ್ತಿಲ್ಲ" ಎಂದಿದ್ದಾರೆ.

ಸುದ್ದಿ ಹುಟ್ಟಿಕೊಂಡಿದ್ಹೇಗೆ?
ಇತ್ತೀಚೆಗೆ ರಮ್ಯಾ ಹಾಗೂ ರಾಜ್ ಬಿ. ಶೆಟ್ಟಿ ಒಟ್ಟಿಗೆ ಇರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಹುಶಃ ಇದೇ ಫೋಟೊದಿಂದ ಇಂತಹದೊಂದು ಸುದ್ದಿ ಹುಟ್ಟಿಕೊಂಡಿರಬಹುದು ಎಂದು ನಿರ್ದೇಶಕ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.

ಮುಂದಿನ ಸಿನಿಮಾ ಯಾವುದು?
'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದ ರಾಜ್ ಬಿ. ಶೆಟ್ಟಿ ಇತ್ತೀಚೆಗೆ ಬಿಡುಗಡೆಯಾಗಿ ಸಕ್ಸಸ್ ಕಂಡ '777 ಚಾರ್ಲಿ' ಚಿತ್ರದಲ್ಲೂ ನಟಿಸಿದ್ದರು. 'ಫಿಕ್ಷನ್' ಹಾಗೂ 'ರಾಮನ ಅವತಾರ' ಅನ್ನುವ ಮತ್ತೆರಡು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆದರೆ ತಮ್ಮ ನಿರ್ದೇಶನದ ಮುಂದಿನ ಚಿತ್ರಕ್ಕೆ ಯಾವುದೇ ಕಥೆಯನ್ನು ಇನ್ನು ಬರೆದಿಲ್ಲವಂತೆ. ಸದ್ಯ ಮಂಗಳೂರಿನಲ್ಲಿರುವ ನಿರ್ದೇಶಕರು ಮುಂದಿನ ಕಥೆ ಬಗ್ಗೆ ಯೋಚಿಸಿಲ್ಲ ಅಂತ ಫಿಲ್ಮಿ ಬೀಟ್ಗೆ ಹೇಳಿದ್ದಾರೆ.

'ಹೊಯ್ಸಳ' ಸೆಟ್ನಲ್ಲಿ ರಮ್ಯಾ
ಸದ್ಯ ರಾಜಕೀಯರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಚಿತ್ರರಂಗದವರ ಜೊತೆಗೂ ಆತ್ಮೀಯ ಒಡನಾಟ ಮುಂದುವರೆಸಿರುವ ಪದ್ಮಾವತಿ '777 ಚಾರ್ಲಿ' ಸಿನಿಮಾ ನೋಡಿ ಭಾವುಕರಾಗಿದ್ದರು. ಡಾಲಿ ಧನಂಜಯ್- ಅಮೃತಾ ಅಯ್ಯಂಗಾರ್ ನಟನೆಯ 'ಹೊಯ್ಸಳ' ಸಿನಿಮಾ ಸೆಟ್ಗೂ ಭೇಟಿ ನೀಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.


Click it and Unblock the Notifications











