ನನಗೆ ದರ್ಶನ್ ಹೆಚ್ಚು ಪರಿಚಯ ಇಲ್ಲ, ಯಾಕೆ ಹೋಗಿ ಜೈಲಿನಲ್ಲಿ ಭೇಟಿ ಮಾಡ್ಲಿ?; ರಾಜ್ ಬಿ ಶೆಟ್ಟಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳು ಕಳೆದಿದೆ. ಕುಟುಂಬಸ್ಥರು ಸೇರಿ ಕೆಲ ಆಪ್ತರು ಈಗಾಗಲೇ ಅಲ್ಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಮಾತನಾಡಿ ಬರುತ್ತಿದ್ದಾರೆ. ಮತ್ತೊಂದು ಕಡೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ದೇವರ ಮೊರೆ ಹೋಗುತ್ತಿದ್ದಾರೆ.
ಮೊದಲಿಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದರು. ಬಳಿಕ ವಿನೋದ್ ಪ್ರಭಾಕರ್, ಪ್ರೇಮ್, ರಕ್ಷಿತಾ ದಂಪತಿ, ವಿನೋದ್ ರಾಜ್, ಸಾಧು ಕೋಕಿಲ, ಧನ್ವೀರ್ ಸೇರಿದಂತೆ ಹಲವು ದರ್ಶನ್ ಭೇಟಿಗೆ ಹೋಗಿದ್ದರು. ಮತ್ತೆ ಕೆಲವರು ಜೈಲಿನ ಬಳಿಗೆ ಹೋದರೂ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇನ್ನು ಕೆಲವರು ಅಲ್ಲಿಗೆ ಹೋಗಿ ದರ್ಶನ್ನ ಮಾತನಾಡಿಸಿಕೊಂಡು ಬರಲು ಉತ್ಸುಕರಾಗಿದ್ದಾರೆ.

ನಟ, ನಿರ್ದೇಶಕ ರಾಜ್. ಬಿ ಶೆಟ್ಟಿ ಮಾತ್ರ ನನಗೆ ದರ್ಶನ್ ಅವರು ಹೆಚ್ಚು ಪರಿಚಯ ಇಲ್ಲ. ಹಾಗಾಗಿ ನಾನು ಜೈಲಿಗೆ ಹೋಗಿ ಭೇಟಿ ಮಾಡುವ ಆಲೋಚನೆ ಇಲ್ಲ ಎಂದಿದ್ದಾರೆ. ಸಂಚಾರ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ನೀಡಿರುವ ಹೇಳಿಕೆ ಈಗ ವೈರಲ್ ಆಗುತ್ತಿದೆ.
ನೀವು ದರ್ಶನ್ ಭೇಟಿಗೆ ಹೋಗುತ್ತೀರಾ? ಎನ್ನುವ ಪ್ರಶ್ನೆಗೆ "ನನಗೆ ದರ್ಶನ್ ಅವರು ಹೆಚ್ಚು ಪರಿಚಯ ಇಲ್ಲ. ನಾನು ಒಮ್ಮೆ ಮಾತ್ರ ವೇದಿಕೆಯೊಂದರಲ್ಲಿ ಅವರನ್ನು ಭೇಟಿ ಆಗಿದ್ದೆ. ಒಂದ್ಸಲ ಭೇಟಿ ಆದವರು ಜೈಲಿನಲ್ಲಿ ಇದ್ದಾಗ ನಾನು ಭೇಟಿಗೆ ಹೋಗಲ್ಲ ಅಲ್ವಾ? ಸೋ ನನಗೆ ಗೊತ್ತಿಲ್ಲ ಯಾಕೆ ಹೋಗಬೇಕು ಅಂತ"
"ಆ ಘಟನೆ ಆಗಬಾರದಿದ್ದು ಆಗೋಗಿದೆ. ಅದರ ಬಗ್ಗೆನೇ ಮಾತಾಡಿ ಪ್ರಯೋಜನ ಇಲ್ಲ. ಆದರೆ ಎಲ್ಲರಿಗೂ ಒಂದು ಮುನ್ನೆಚ್ಚರಿಕೆ ಬೇಕು. ಯಾವುದೇ ರೀತಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಆಗಲ್ಲ ಅಂತ. ನಾವು ಸಹ ಸಾಮಾನ್ಯರು. ಇಲ್ಲದಿದ್ದರೆ ನಾವು ಸಹ ಶಿಕ್ಷೆ ಅನುಭವಿಸಬೇಕು. ಪೊಲೀಸರು ಪ್ರಕರಣವನ್ನು ತನಿಖೆ ನಡೆಸಿದ ರೀತಿ ಖುಷಿ ಅನ್ನಿಸ್ತು. ಕೆಲವೊಮ್ಮೆ ಪ್ರಭಾವಿಗಳಿಗೆ ಶಿಕ್ಷೆ ಆಗಲ್ಲ ಎಂದು ಜನರಲ್ಲಿ ಕೆಲವೊಮ್ಮೆ ಕೆಟ್ಟ ಅಭಿಪ್ರಾಯ ಮೂಡಬಹುದು. ಅವರೆಲ್ಲಾ ಆರೋಪಿ ಸ್ಥಾನದಲ್ಲಿದ್ದಾರೆ, ಮುಂದೆ ಏನಾಗತ್ತೆ ನೋಡೋಣ" ಎಂದಿದ್ದಾರೆ.
ರಾಜ್ ಬಿ. ಶೆಟ್ಟಿ ಚಿತ್ರಕಥೆ, ಸಂಭಾಷಣೆ ಬರೆದಿರುವ 'ರೂಪಾಂತರ' ಸಿನಿಮಾ ಈ ವಾರ ಬಿಡುಗಡೆ ಆಗಿದೆ. ಇದಕ್ಕೂ ಮುನ್ನ ರಾಜ್ ನಿರ್ದೇಶಿಸಿ, ನಟಿಸಿದ್ದ 'ಸ್ವಾತಿಮುತ್ತಿನ ಮಳೆ ಹನಿಯೇ' ಸಿನಿಮಾ ತೆರೆಗೆ ತಂದಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ.
ಇನ್ನು ರೇಣುಕಾಸ್ವಾಮಿ ಕೊನೆ ಪ್ರಕರಣದ ಬಗ್ಗೆ ಶಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆಗಸ್ಟ್ 1ರವರೆಗೆ ದರ್ಶನ್ ಸೇರಿ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಆಗಸ್ಟ್ ಮೊದಲ ವಾರವೇ ಶಾರ್ಜ್ಶೀಟ್ ಸಲ್ಲಿಕೆ ಆಗಲಿದ್ದು ಬಳಿಕ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.


Click it and Unblock the Notifications











