ನಟನೆಯಿಂದ ಬ್ರೇಕ್ ಪಡೆಯಲಿದ್ದಾರೆ 'ಮೊಟ್ಟೆ' ರಾಜ್.ಬಿ.ಶೆಟ್ಟಿ.!
ಸಿನಿಮಾದ ಹೀರೋ ಅಂದ್ರೆ ಹಾಟ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣಬೇಕು.. ಕಟ್ಟುಮಸ್ತಾದ ದೇಹ ಹೊಂದಿರಬೇಕು.. ಚೆನ್ನಾಗಿ ಡ್ಯಾನ್ಸ್, ಫೈಟ್ ಮಾಡೋಕೆ ಬರಬೇಕು.. ಅನ್ನೋದು ರೆಡಿ ಮೇಡ್ ಫಾರ್ಮುಲಾ. ಈ ಸಿದ್ಧ ಸೂತ್ರವನ್ನು ಮುರಿದು ಬೋಳು ತಲೆಯ ವ್ಯಕ್ತಿಯೇ ಹೀರೋ ಆಗಿ, ಬೋಳು ತಲೆ ಹೊಂದಿರುವವರ ಗೋಳಿನ ಕಥೆಯನ್ನೇ (ಒಂದು ಮೊಟ್ಟೆಯ ಕಥೆ) ಬೆಳ್ಳಿತೆರೆ ಮೇಲೆ ಅಚ್ಚುಕಟ್ಟಾಗಿ ತಂದವರು ರಾಜ್.ಬಿ.ಶೆಟ್ಟಿ.
ಮಂಗಳೂರು ಮೂಲದ ರಾಜ್.ಬಿ.ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದು 'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ. ಈ ಸಿನಿಮಾದಲ್ಲಿ ಹೀರೋ ಆಗಿ, ರೈಟರ್ ಆಗಿ, ನಿರ್ದೇಶಕನಾಗಿ ರಾಜ್.ಬಿ.ಶೆಟ್ಟಿ ಕಮಾಲ್ ಮಾಡಿದ್ದರು.
ಬಳಿಕ 'ಅಮ್ಮಚ್ಚಿ ಎಂಬ ನೆನಪು', 'ಮಹಿರ', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಕಥಾ ಸಂಗಮ' ಚಿತ್ರದಲ್ಲಿ ರಾಜ್.ಬಿ.ಶೆಟ್ಟಿ ಅಭಿನಯಿಸಿದರು. ನಟನಾಗಿ ರಾಜ್.ಬಿ.ಶೆಟ್ಟಿ ಕೈಯಲ್ಲಿ 'ಮಾಯಾಬಜಾರ್', 'ತುರ್ತು ನಿರ್ಗಮನ', 'ಫಿಕ್ಷನ್', 'ರಾಮನ ಅವತಾರ' ಚಿತ್ರಗಳಿವೆ.

ನಟನಾಗಿ ಇಷ್ಟೆಲ್ಲಾ ಬೇಡಿಕೆ ಹೊಂದಿದ್ದರೂ, ನಟನೆಯಿಂದ ಬ್ರೇಕ್ ತೆಗೆದುಕೊಳ್ಳಬೇಕು ಅಂತ ರಾಜ್.ಬಿ.ಶೆಟ್ಟಿ ನಿರ್ಧಾರ ಮಾಡಿದ್ದಾರೆ. ನಿರ್ದೇಶನದ ಕಡೆ ಹೆಚ್ಚು ಒಲವು ಹೊಂದಿರುವ ರಾಜ್.ಬಿ.ಶೆಟ್ಟಿ ಚಿತ್ರರಂಗದಲ್ಲಿ ನಿರ್ದೇಶಕನಾಗಿಯೇ ಉಳಿಯಲು ಇಷ್ಟಪಡುತ್ತಾರಂತೆ. ಹೀಗಾಗಿ, ತೆರೆ ಹಿಂದೆಯೇ ಇರಲು ಮನಸ್ಸು ಮಾಡಿದ್ದಾರೆ.
ಸದ್ಯಕ್ಕೆ ಮಂಗಳೂರಿನಲ್ಲಿ ನಡೆಯುವ ಗ್ಯಾಂಗ್ ಸ್ಟರ್ ಕಥೆಯನ್ನ ರಾಜ್.ಬಿ.ಶೆಟ್ಟಿ ರೆಡಿ ಮಾಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ರಾಜ್.ಬಿ.ಶೆಟ್ಟಿ ನಿರ್ದೇಶನದ ಚಿತ್ರ ತೆರೆಗೆ ಬರಲಿದೆ.


Click it and Unblock the Notifications











