ಪ್ರಜ್ವಲ್ ದೇವರಾಜ್ ಜೊತೆ ಕೈ ಜೋಡಿಸಿದ ರಾಜ್ ಬಿ. ಶೆಟ್ಟಿ; ಮಾವೀರನಾಗಿ ಅಬ್ಬರ
ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಸದ್ಯ 'ಸು ಫ್ರಂ ಸೋ' ಸಿನಿಮಾ ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಅವರು ನಿರ್ಮಿಸಿರುವ ಕಾಮಿಡಿ ಎಂಟರ್ಟೈನರ್ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಅದೇ ರೀತಿ '45' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
'ಸು ಫ್ರಂ ಸೋ' ಚಿತ್ರದಲ್ಲಿ ಕರುಣಾಕರ ಗುರೂಜಿ ಪಾತ್ರದ ಮೂಲಕ ರಾಜ್ ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಡುತ್ತಿದ್ದಾರೆ. ಆ ಪಾತ್ರದಲ್ಲಿ ಅವರನ್ನು ಮರೆಯುವ ಮುನ್ನ ಒಂದು ಖಡಕ್ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಗುರುದರ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್ ಸಮೇತ ಅವರ ಪಾತ್ರ ಪರಿಚಯವನ್ನು ಚಿತ್ರತಂಡ ಮಾಡಿದೆ.

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಮೇಕಿಂಗ್ ಹಂತದಲ್ಲೇ ಸದ್ದು ಮಾಡ್ತಿದೆ. ಕಂಬಳ ಸ್ಪರ್ಧೆಯ ಸುತ್ತಾ ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಎರಡು ಕೋಣಗಳ ನಡುವೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ, ಒಂದು ಕೈಯಲ್ಲಿ ಪಂಜು ಹಿಡಿದು ಗಮನ ಸೆಳೆದಿದ್ದಾರೆ. ಇನ್ನು ಟೀಸರ್ನಲ್ಲಿ ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದ ಮಹಾವೀರನ ಎನ್ನುವ ಕುತೂಹಲ ಹುಟ್ಟಾಕ್ಕಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ.
ಇನ್ನು ಟೈಟಲ್ಲೇ ಹೇಳುವಂತೆ ಕರಾವಳಿ ಭಾಗದ ಕಥೆಯನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು. 'ಎಕ್ಕ' ಚಿತ್ರದಲ್ಲಿ ಮಿಂಚಿದ್ದ ಸಂಪದಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಮಿತ್ರಾ, ರಮೇಶ್ ಇಂದಿರಾ ಚಿತ್ರದ ತಾರಾಗಣದಲ್ಲಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಎರಡ್ಮೂರು ಸಿನಿಮಾ ಬಿಡುಗಡೆ ಆಗಬೇಕಿದೆ. ಆದರೆ 'ಕರಾವಳಿ' ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲವಿದೆ.
ವಿಕೆ ಫಿಲ್ಮಂ ಅಸೋಸಿಯೇಷನ್ನಲ್ಲಿ ಗಾಣಿಗ ಫಿಲ್ಮ್ಸ್ನಲ್ಲಿ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ಹಳ್ಳಿ ಹಿನ್ನೆಲೆಯ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿ ಬರ್ತಿದೆ. ಇದೀಗ ರಾಜ್ ಬಿ. ಶೆಟ್ಟಿ ಎಂಟ್ರಿಯಿಂದ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಮನುಷ್ಯ ಹಾಗೂ ಪ್ರಾಣಿ ನಡುವಿನ ಸಂಘರ್ಷದ ಕಥೆ 'ಕರಾವಳಿ' ಚಿತ್ರದಲ್ಲಿದೆ. ಪ್ರಜ್ವಲ್ ಕೋಣ ಏರಿ ಕುಳಿದ ಪೋಸ್ಟರ್ಗಳು ವೈರಲ್ ಆಗಿ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿಸಿದೆ. ಈ ವರ್ಷಾಂತ್ಯದ ವೇಳೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಇನ್ನು 'ಸು ಫ್ರಂ ಸೋ' ಸಿನಿಮಾ ಮಾಡಿ ರಾಜ್ ಬಿ. ಶೆಟ್ಟಿ ಭರ್ಜರಿ ಲಾಭ ಮಾಡಿದ್ದಾರೆ. ಅಂದಾಜು 2 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಕೋಟಿ ಕೋಟಿ ಲಾಭ ತಂದು ಕೊಟ್ಟಿದೆ. ಮುಂದೆ ಮತ್ತಷ್ಟು ಸಿನಿಮಾಗಳನ್ನು ನಿರ್ಮಿಸುವ ಧೈರ್ಯ ತುಂಬಿದೆ. ಕರಾವಳಿಯ ಮತ್ತಷ್ಟು ಪ್ರತಿಭೆಗನ್ನು ಪ್ರೇಕ್ಷಕರ ಮುಂದೆ ತರಲು ರಾಜ್ ಮುಂದಾಗಿದ್ದಾರೆ. ಈಗಾಗಲೇ ಸಿನಿಮಾ ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗಿದ್ದು ಮುಂದೆ ಹಿಂದಿಗೆ ರೀಮೆಕ್ ಆಗಲಿದೆ. ಸೀಕ್ವೆಲ್ ಮಾಡುವ ಆಲೋಚನೆ ಇಲ್ಲ ಎಂದಿರುವ ಶೆಟ್ರು ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕಾಗಿ ಕಥೆ ಸಿದ್ಧಪಡಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











