'ರಾಜ್-ವಿಷ್ಣು' ಜೊತೆ 'ಬಾಹುಬಲಿ-ಕಟ್ಟಪ್ಪ'ನ ಸರ್ಪ್ರೈಸ್ ಎಂಟ್ರಿ!
ಕಾಮಿಡಿ ಕಿಂಗ್ ಶರಣ್ ಹಾಗೂ ಚಿಕ್ಕಣ್ಣ ಜುಗಲ್ ಬಂದಿಯಲ್ಲಿ ಮೂಡಿಬರ್ತಿರುವ 'ರಾಜ್-ವಿಷ್ಣು' ಚಿತ್ರ ತೆರೆಗೆ ಬರಲು ಸಿದ್ದವಾಗ್ತಿದೆ.
ಎಲ್ಲರಿಗೂ ಗೊತ್ತಿರುವಾಗೇ, 'ರಾಜ್-ವಿಷ್ಣು' ಚಿತ್ರದಲ್ಲಿ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರು ಛಾಯೆ ಎಷ್ಟರ ಮಟ್ಟಿಗೆ ಇರಲಿದೆ ಎಂಬುದು, ಶೀರ್ಷಕೆಯಿಂದಲೇ ಗೋಚರವಾಗಿದೆ. ಇನ್ನೂ ಚಿತ್ರವಿಡೀ 'ರಾಜ್-ವಿಷ್ಣು' ಅವರ ಗೆಟಪ್ ಗಳು, ಡೈಲಾಗ್ ಗಳು ಇನ್ನೇಷ್ಟರ ಮಟ್ಟಿಗೆ ಕಿಕ್ ಕೊಡಲಿವೆ ಎನ್ನುವಷ್ಟರಲ್ಲಿ, ಚಿತ್ರದ ಬಗ್ಗೆ ಮತ್ತಷ್ಟು ಇಂಟ್ರಸ್ಟಿಂಗ್ ವಿಚಾರಗಳು ಬಹಿರಂಗವಾಗಿವೆ.['ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು]
ಹೌದು, ಶರಣ್-ಚಿಕ್ಕಣ್ಣನ 'ರಾಜ್-ವಿಷ್ಣು' ಚಿತ್ರದಲ್ಲಿ ಬರೀ ರಾಜ್ ಕುಮಾರ್, ವಿಷ್ಣುವರ್ಧನ್ ಮಾತ್ರವಲ್ಲ, 'ಬಾಹುಬಲಿ' ಹಾಗೂ 'ಕಟ್ಟಪ್ಪ'ನೂ ಕಮಾಲ್ ಮಾಡಲಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ...

'ಗಂಧದ ಗುಡಿ' ಜೋಡಿ
'ಗಂಧದ ಗುಡಿ' ಚಿತ್ರದಲ್ಲಿ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಅವರು ಒಟ್ಟಿಗೆ ಅಭಿನಯಿಸಿದ್ದರು. ಈಗ ಅದೇ ಪಾತ್ರಗಳನ್ನ ನೆನಪು ಮಾಡುತ್ತಿದೆ ಶರಣ್ ಹಾಗೂ ಚಿಕ್ಕಣ್ಣನ 'ರಾಜ್-ವಿಷ್ಣು'. ಚಿತ್ರದಲ್ಲಿ ಶರಣ್, ರಾಜ್ ಕುಮಾರ್ ಅವರಂತೆ ಚಿಕ್ಕಣ್ಣ ವಿಷ್ಣುವರ್ಧನ್ ಅವರಂತೆ ಮಿಂಚಿದ್ದಾರೆ.

'ರಾಜ್-ವಿಷ್ಣು' ಜೊತೆಗೆ 'ಬಾಹುಬಲಿ-ಕಟ್ಟಪ್ಪ'
ಅಚ್ಚರಿ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ಬರೀ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, 'ಕಟ್ಟಪ-ಬಾಹುಬಲಿ'ಯ ಪಾತ್ರಗಳು ಬರಲಿವೆಯಂತೆ. ಚಿತ್ರದ ಸನ್ನಿವೇಶವೊಂದರಲ್ಲಿ ಚಿಕ್ಕಣ್ಣ ಕಟ್ಟಪ್ಪನಾಗಿ, ಶರಣ್ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಪಾತ್ರದಲ್ಲಿ ಶ್ರೀಮುರುಳಿ
'ರಾಜ್-ವಿಷ್ಣು' ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಅತಿಥಿ ಪಾತ್ರವನ್ನ ನಿರ್ವಹಿಸಿದ್ದು, ಶೂಟಿಂಗ್ ಕೂಡ ಮುಗಿಸಿದ್ದಾರೆ.

'ರಾಜ್-ವಿಷ್ಣು' ಜೊತೆ ಉಳಿದವರು...
ಶರಣ್, ಚಿಕ್ಕಣ್ಣನ ದುನಿಯಾದಲ್ಲಿ ಸಾಧುಕೋಕಿಲಾ, ರವಿಶಂಕರ್, ವೀಣಾ ಸುಂದರ್, ಮಿಮಿಕ್ರಿ ಗೋಪಿ, ರಮೇಶ್ ಪಂಡಿತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಮುಂಬೈ ಮೂಲದ ನಾಯಕಿ
ಮುಂಬೈ ಮೂಲದ ನಟಿ ವೈಭವಿ, ರಾಜ್ ವಿಷ್ಣು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಉಳಿದಂತೆ ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ.[ಶರಣ್ ರ 'ರಾಜ್-ವಿಷ್ಣು'ಗೆ ಮರಾಠಿ ಬೆಡಗಿ ಎಂಟ್ರಿ, ಯಾರೀ ಚೆಲುವೆ?]

'ರಜನಿ-ಮುರುಗನ್' ರಿಮೇಕ್
ಅಂದ್ಹಾಗೆ, ಕನ್ನಡದ 'ರಾಜ್-ವಿಷ್ಣು' ತಮಿಳಿನ ಸೂಪರ್ ಹಿಟ್ ಸಿನಿಮಾ ರಜನಿಮುರುಗನ್ ಚಿತ್ರದ ರಿಮೇಕ್. ತಮಿಳಿನಲ್ಲಿ ಪೋನ್ ರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶಿವಕಾರ್ತಿಕೇಯನ್ ಹಾಗೂ ರಾಜ್ ಕಿರಣ್, ಸೂರಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಕೆ. ಮಾದೇಶ್ ಆಕ್ಷನ್ ಕಟ್
ಕನ್ನಡದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾದ ಕೆ.ಮಾದೇಶ್, 'ರಾಜ್-ವಿಷ್ಣು'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಜನಾರ್ಧನ್ ಮಹರ್ಷಿ ಚಿತ್ರಕಥೆ ಬರೆದಿದ್ದು, ರಾಜೇಶ್ ಅವರ ಛಾಯಗ್ರಹಣ ಚಿತ್ರಕ್ಕಿದೆ.

ರಾಮು ನಿರ್ಮಾಣ
ಅದ್ದೂರಿ ಸಿನಿಮಾ ಹಾಗೂ ಸಾಹಸ ಚಿತ್ರಗಳನ್ನ ನಿರ್ಮಾಣ ಮಾಡುವ ರಾಮು ಎಂಟರ್ ಪ್ರೈಸಸ್, ಮೊದಲ ಬಾರಿಗೆ ಕಾಮಿಡಿ ಎಂಟರ್ ಟೈನ್ಮೆಂಟ್ ಪ್ರಾಜೆಕ್ಟ್ ನಿರ್ಮಾಣ ಮಾಡಿದೆ.

ಯಾವಾಗ ಬಿಡುಗಡೆ?
ಬಹುತೇಕ ಚಿತ್ರೀಕರಣ ಮುಗಿಸಿರುವ 'ರಾಜ್-ವಿಷ್ಣು' ಈಗ ಫೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ರೇಣುಕಾಂಬ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ಮಾಡುತ್ತಿರುವ 'ರಾಜ್-ವಿಷ್ಣು' ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುವ ಯೋಚನೆಯಲ್ಲಿದ್ದಾರೆ.


Click it and Unblock the Notifications











