ನ.20 ರಿಂದ ಕರ್ನಾಟಕದಲ್ಲಿ 'ರಾಜರಥ' ಸಂಚಾರ
ಬೆಂಗಳೂರಿನ ಕಂಠೀರವ ಸ್ಟುಡಿಯೋದ ಡಾ. ರಾಜಕುಮಾರ್ ಸಮಾಧಿ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕದ ಲೋಕಾರ್ಪಣೆ ಸಮಾರಂಭ ನ.29ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಜನರನ್ನು ಆಹ್ವಾನಿಸಲು ಬಣ್ಣದ ಲೋಕ ತಂಡ 'ರಾಜರಥ ರಾಜ್ಯ ಸಂಚಾರ ಮಹಾಭಿಯಾನ' ಹಮ್ಮಿಕೊಂಡಿದೆ.
ಬಣ್ಣದ ಲೋಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎಲ್.ಸ್ವಾಮಿ ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಗಾಜನೂರಿನಲ್ಲಿ ನ.20ರಂದು ರಾಜರಥ ಸಂಚಾರಕ್ಕೆ ಚಾಲನೆ ದೊರೆಯಲಿದ್ದು, ರಾಜ್ಯದ ಜಿಲ್ಲೆಗಳಲ್ಲಿ ಸಂಚರಿಸಿ ರಥ ನ.29ರಂದು ಬೆಂಗಳೂರಿಗೆ ತಲುಪಲಿದೆ ಎಂದರು. [ರಾಜ್ ಸ್ಮಾರಕ ಲೋಕಾರ್ಪಣೆ ಆಹ್ವಾನಿತರ ಪಟ್ಟಿ]

ಬಭ್ರುವಾಹನ ಮಾದರಿಯ ಈ ರಥ ಕನ್ನಡ ಬಾವುಟಗಳಿಂದ ಅಲಂಕೃತವಾಗಿರುತ್ತದೆ. ರಥಯಾತ್ರೆ ಮೂಲಕ ರಾಜ್ಯದಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ರಾಜ ರಥ ಒಟ್ಟು 7,500 ಕಿ.ಮೀ.ಸಂಚರಿಸಲಿದೆ ಎಂದು ಕೆ.ಎಸ್.ಎಲ್.ಸ್ವಾಮಿ ಹೇಳಿದರು.
ನ.29ರಂದು ರಥ ಬೆಂಗಳೂರಿಗೆ ಆಗಮಿಸಲಿದ್ದು ಪಾರ್ವತಮ್ಮ ರಾಜಕುಮಾರ್ ಅವರು ರಥವನ್ನು ಕಂಠೀರವ ಸ್ಟುಡಿಯೋ ಬಳಿ ಬರಮಾಡಿಕೊಳ್ಳಲಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ರಾಜ್ಕುಮಾರ್ ಮೇಲೆ ಅಂದು ಜನರು ಇಟ್ಟುಕೊಂಡಿದ್ದ ಅಭಿಮಾನ ಇಂದಿಗೂ ಹಾಗೇ ಇದೆ. ಬೆಂಗಳೂರಿಗೆ ಬಂದವರು ರಾಜ್ ಸಮಾಧಿಗೆ ಭೇಟಿ ನೀಡಿ ಮರಳುತ್ತಾರೆ ಎಂದರು.
ರಾಘವೇಂದ್ರ ರಾಜಕುಮಾರ್, ನಿರ್ದೇಶಕ ಎಸ್.ನಾರಾಯಣ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಗಂಗರಾಜು, ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











