ಪುನೀತ್ ರಾಜ್ಕುಮಾರ್ ನೆನದು ರಾಜಮೌಳಿ ಭಾವುಕ
'RRR' ಸಿನಿಮಾದ ಹಾಡು ಬಿಡುಗಡೆಗೆಂದು ಬೆಂಗಳೂರಿಗೆ ಬಂದಿದ್ದ ನಿರ್ದೇಶಕ ರಾಜಮೌಳಿ, ಪುನೀತ್ ರಾಜ್ಕುಮಾರ್ ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಜಮೌಳಿ, ''ಪುನೀತ್ ಇಲ್ಲವಾಗಿ ಇಷ್ಟು ದಿನಗಳಾದರೂ ಪುನೀತ್ ನಿಧನದ ಆಘಾತ ಇನ್ನೂ ನಮ್ಮ ಮನಗಳಲ್ಲಿ ಹಾಗೆಯೇ ಇದೆ. ನಾನು ಕೇವಲ ಒಂದೆರಡು ಬಾರಿ ಮಾತ್ರವೇ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ನಾಲ್ಕು ವರ್ಷಗಳ ಹಿಂದೆ ಇದೇ ಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ನನ್ನನ್ನು ತಮ್ಮ ಕುಟುಂಬ ಸದಸ್ಯನಂತೆ ನೋಡಿದ್ದರು, ಒಬ್ಬ ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಎಂದು ನನಗೆ ಎನಿಸಿರಲಿಲ್ಲ, ನನ್ನ ಗೆಳೆಯನೊಟ್ಟಿಗೆ ಮಾತನಾಡುತ್ತಿದ್ದೇನೆ ಎನಿಸುವಂತೆ ಅವರ ವ್ಯಕ್ತಿತ್ವ ಇತ್ತು'' ಎಂದಿದ್ದಾರೆ ರಾಜಮೌಳಿ.
''ಇಂಥಹಾ ವ್ಯಕ್ತಿಯೊಬ್ಬ ಇಂದು ಇಲ್ಲ ಎಂದುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಪುನೀತ್ ಇನ್ನಿಲ್ಲ ಎಂಬುದು ನೆನಪಿಸಿಕೊಂಡರೆ ಹೃದಯ ಒಡೆದಂತೆ ಭಾಸವಾಗುತ್ತದೆ. ಪುನೀತ್ ಇಲ್ಲವೆಂಬ ನೋವನ್ನು ಪದಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ತೀರದ ನೋವು'' ಎಂದಿದ್ದಾರೆ ರಾಜಮೌಳಿ.

''ಪುನೀತ್ ಸಾವಿನಿಂದ ಕಲಿಯಬೇಕಾದ ಪಾಠ ಮಹತ್ವದ್ದು. ಪುನೀತ್ ಅಗಲಿದ ಬಳಿಕವಷ್ಟೆ ಎಲ್ಲರಿಗೂ ಗೊತ್ತಾಗಿದೆ, ಪುನೀತ್ ಅದೆಷ್ಟು ಜನಕ್ಕೆ ಬೆಂಬಲ ನೀಡಿದ್ದರೆಂದು. ನಾವು ಕೇವಲ ಒಬ್ಬನಿಗೆ ಸಹಾಯ ಮಾಡಿದರು ಅದು ಕೋಟ್ಯಂತರ ಜನಕ್ಕೆ ಗೊತ್ತಾಗಬೇಕೆಂದು ಬಯಸುತ್ತೇವೆ. ನಮ್ಮ ಸಹಾಯಕ್ಕೆ ಪ್ರಚಾರ ಪಡೆಯುತ್ತೇವೆ. ಆದರೆ ಪುನೀತ್ ಹಾಗಿರಲಿಲ್ಲ, ತಮ್ಮ ಸಹಾಯವನ್ನು ಯಾರಿಗೂ ಹೇಳದೆ ಮಾಡಿದರು. ಅವರಿಂದ ಕಲಿಯುವುದು ಸಾಕಷ್ಟಿದೆ'' ಎಂದರು ರಾಜಮೌಳಿ.
''ಪುನೀತ್ ರಾಜ್ಕುಮಾರ್ ಕುಟುಂಬದವರಿಗೆ ಈ ನೋವನ್ನು ನುಂಗುವ ಶಕ್ತಿಯನ್ನು ಆ ದೇವರು ನೀಡಲಿ. ಪುನೀತ್ ರಾಜ್ಕುಮಾರ್ ಮಾಡುತ್ತಿದ್ದ ಒಳ್ಳೆಯ ಕೆಲಸ ಮುಂದುವರೆಸುವ ಶಕ್ತಿಯನ್ನು ದೇವರು ನೀಡಲಿ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ರಾಜಮೌಳಿ ಹಾರೈಸಿದರು.
ತೆಲುಗು ಚಿತ್ರರಂಗದೊಂದಿಗೆ ಪುನೀತ್ ರಾಜ್ಕುಮಾರ್ ಆಪ್ತ ಸಂಬಂಧ ಹೊಂದಿದ್ದರು. ಚಿರಂಜೀವಿ ಕುಟುಂಬದೊಂದಿಗೆ ಹಾಗೂ ಎನ್ಟಿಆರ್ ಕುಟುಂಬದೊಂದಿಗೆ ದೊಡ್ಮನೆಯವರದ್ದು ದಶಕಗಳ ಗೆಳೆತನ. ಅದನ್ನು ಹೊರತುಪಡಿಸಿಯೂ ಹಲವರೊಂದಿಗೆ ಪುನೀತ್ ಆಪ್ತರಾಗಿದ್ದರು. 'RRR' ಸಿನಿಮಾದ ಇಬ್ಬರು ನಾಯಕರಾದ ಜೂ ಎನ್ಟಿಆರ್ ಮತ್ತು ರಾಮ್ ಚರಣ್ ತೇಜ ಇಬ್ಬರೂ ಸಹ ಪುನೀತ್ ಅಗಲಿಕೆ ಬಳಿಕ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತೆಲುಗು ಚಿತ್ರರಂಗದ ದಿಗ್ಗಜರಾದ ನಟ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಮೋಹನ್ಬಾಬು ಇನ್ನೂ ಹಲವರು ಪುನೀತ್ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಆ ನಂತರವೂ ಹಲವರು ಪುನೀತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.


Click it and Unblock the Notifications