Darshan: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ.. ದರ್ಶನ್ಗೆ ನೋಟಿಸ್ ನೀಡಿದ ಪೊಲೀಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಅವರ ಮನೆಯ ಸಾಕು ನಾಯಿ ವಕೀಲೆಯೊಬ್ಬರಿಗೆ ಕಚ್ಚಿತ್ತು. ಈ ಪ್ರಕರಣದ ಸಂಬಂಧ ಆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಪೊಲೀಸರು ದರ್ಶನ್ಗೆ ನೋಟಿಸ್ ಕಳುಹಿಸಿದ್ದಾರೆ.
ದರ್ಶನ್ಗೆ ರಾಜರಾಜೇಶ್ವರಿ ನಗರ ಪೊಲೀಸರು ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿದ್ದಾರೆ. ಬಿಇಎಂಎಲ್ 5ನೇ ಹಂತ ನಿವಾಸಿಯಾಗಿದ್ದ ಅಮಿತಾ ಜಿಂದಾಲ್ ಎಂಬುವವರು ಕಾರ್ಯಕ್ರಮದ ನಿಮಿತ್ತ ರಾಜರಾಜೇಶ್ವರಿ ನಗರಕ್ಕೆ ಬಂದಿದ್ದರು. ದರ್ಶನ್ ಮನೆಯ ಮುಂಭಾಗದಲ್ಲಿ ಕಾರನ್ನು ಪಾರ್ಕ್ ಮಾಡಿ ಕಾರ್ಯಕ್ರಮಕ್ಕೆ ತೆರಳಿದ್ದರು. ಹಿಂತಿರುಗಿ ಬಂದಾಗ ಈ ಘಟನೆ ನಡೆದಿದೆ.

ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್ ಮನೆಯಲ್ಲಿ ನಾಯಿಯನ್ನು ನೋಡಿಕೊಳ್ಳುತ್ತಿರುವ ಕೇರ್ ಟೇಕರ್ ಹೇಮಂತ್ ಅವರ ವಿಚಾರಣೆ ಮಾಡಲಾಗಿದೆ. ಜೊತೆ ಪೊಲೀಸರು ಸ್ಥಳ ಮಹಜರು ಕೂಡ ಮಾಡಿದ್ದು, ಮಾಹಿತಿ ಸಂಗ್ರಹಿಸಿದ ಬಳಿಕ ದರ್ಶನ್ಗೆ ನೋಟಿಸ್ ನೀಡಿದ್ದಾರೆ.
ದರ್ಶನ್ ಮನೆಯಲ್ಲಿ ಸಾಕಿರುವ ನಾಯಿಗಳಿಂದ ಕಚ್ಚಿಸಿಕೊಂಡ ಮಹಿಳೆ ಅಮಿತಾ ಜಿಂದಾಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡ ದಿನವೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ರಾಜರಾಜೇಶ್ವರಿ ನಗರ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಬಂದಿದ್ದು, ದರ್ಶನ್ ಮನೆಯ ಬಳಿ ಇರುವ ಖಾಲಿ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದೆ. ಹಿಂತಿರುಗಿ ಬರುವಾಗ ಮೂರು ನಾಯಿಗಳು ಇದ್ದವು. ದರ್ಶನ್ ಅವರ ಸಿಬ್ಬಂದಿಗೆ ನಾಯಿಗಳನ್ನು ಹಿಡಿದುಕೊಳ್ಳುವಂತೆ ಮನವಿ ಮಾಡಿದ್ದೆ." ಎಂದು ಹೇಳಿಕೆ ನೀಡಿದ್ದರು.
ಈ ವೇಳೆ ದರ್ಶನ್ ಸಿಬ್ಬಂದಿ ಕಾರನ್ನು ಇಲ್ಲಿ ಪಾರ್ಕ್ ಮಾಡಬಾರದು ಎಂದು ಹೇಳಿದ್ದರು. ಆಗ ನಮ್ಮ ನಡುವೆ ವಾದ ವಿವಾದ ನಡೆದ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ಮಾಡಿದ್ದಾಗಿ ಮಹಿಳೆ ಹೇಳಿದ್ದರು. ಹಾಗೇ ರಾಜರಾಜೇಶ್ವರಿ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದರು. ಈ ಸಂಬಂಧ IPC 289ರ ಅನ್ವಯ ನಾಯಿ ಕೇರ್ ಟೇಕರ್ ಮೊದಲ ಆರೋಪಿ ಹಾಗೂ ದರ್ಶನ್ 2ನೇ ಆರೋಪಿಯಾಗಿ ಕೇಸ್ ದಾಖಲು ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಆರ್ ನಗರ ಪೊಲೀಸರು ಈಗ ದರ್ಶನ್ಗೆ ನೋಟಿಸ್ ಕಳುಹಿಸಿದ್ದಾರೆ. ಮೂರು ದಿನಗಳ ಒಳಗಾಗಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಆ ಬಳಿಕ ಕೇಸ್ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ ಅನ್ನೋದು ನೋಡಬೇಕಿದೆ.
ದೀಪಾವಳಿ ಹಬ್ಬದಂದು 'ಕಾಟೇರ' ಪೋಸ್ಟರ್
ನಾಯಿ ಕಚ್ಚಿದ ಪ್ರಕರಣ ಒಂದು ಕಡೆಯಾದರೆ, ಇನ್ನೊಂದು ಕಡೆ 'ಕಾಟೇರ' ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ದರ್ಶನ್ ರೆಡ್ ಕಾಸ್ಟ್ಯೂಮ್ನಲ್ಲಿ ಮಿಂಚಿದ್ದು, ಪೋಸ್ಟರ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಹಾಗೇ ತಮ್ಮ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯಗಳನ್ನೂ ತಿಳಿಸಿದ್ದಾರೆ.
"ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ದರ್ಶನ್ 'ಕಾಟೇರ' ಪೋಸ್ಟರ್ ಶೇರ್ ಮಾಡಿದ್ದಾರೆ.
ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ನ ಎರಡನೇ ಸಿನಿಮಾವಿದು. 'ರಾಬರ್ಟ್' ಸಿನಿಮಾ ಬಳಿಕ ಈ ಜೋಡಿ 'ಕಾಟೇರ'ಗೆ ಮತ್ತೆ ಒಂದಾಗುತ್ತಿದ್ದು, ರಾಕ್ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











