ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಹೊಸ ಸಿನಿಮಾ 'ಹಿರಣ್ಯ' ಶೂಟಿಂಗ್ ಮುಕ್ತಾಯ
ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಈ ಬಾರಿ ಪಕ್ಕಾ ಮಾಸ್ ಆಕ್ಷನ್ ಸಿನಿಮಾದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಕೆಲವು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಅದ್ಧೂರಿಯಾಗಿ ನಡೆಯುತ್ತಿತ್ತು. ಸದ್ಯ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿದೆ.
ಅಂದ್ಹಾಗೆ ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ಆ ಸಿನಿಮಾವೇ 'ಹಿರಣ್ಯ'. ಈ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಮುಗಿದಿದ್ದು, ಬೆಂಗಳೂರು ಹಾಗೂ ಅದರ ಸುತ್ತಮುತ್ತ ಇಡೀ ಸಿನಿಮಾದ ಚಿತ್ರೀಕರಣ ನಡೆದಿದೆ. ಸದ್ಯ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.

'ಹಿರಣ್ಯ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ಪ್ರವೀಣ್ ಅವ್ಯುಕ್ತ್. ಈ ಸಿನಿಮಾ ಆರಂಭ ಮಾಡುವುದಕ್ಕೂ ಮುನ್ನ ಈಗಾಗಲೇ ಹಲವು ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವವಿದೆ. ಪ್ರವೀಣ್ ಅವ್ಯೂಕ್ತ್ ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿತ್ತಿದ್ದಾರೆ.
ಇನ್ನು 'ಹಿರಣ್ಯ' ಸಿನಿಮಾದಲ್ಲಿ ರಾಜವರ್ಧನ್ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ರಿಹಾನಾ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರ ಜೋಡಿ ತೆರೆಮೇಲೆ ಹೇಗೆ ಕಾಣಿಸುತ್ತೆ? ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ರಾಜವರ್ಧನ್ ನಟಿಸುತ್ತಿರುವ ಈ ಸಿನಿಮಾ ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಜೊತೆಗೆ ತಾಯಿ ಸೆಂಟಿಮೆಂಟ್ ಕೂಡ ಇದೆ. ರಾಜವರ್ಧನ್ ಹಾಗೂ ರಿಹಾನಾ ಜೊತೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ವಿಘ್ನೇಶ್ವರ ಹಾಗೂ ವಿಜಯ್ ಕುಮಾರ್ ಈ ಆಕ್ಷನ್ ಕಮ್ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 'ಹಿರಣ್ಯ' ಸಿನಿಮಾಗೆ ಯೋಗೇಶ್ವರನ್ ಆರ್ ಛಾಯಾಗ್ರಹಣವಿದೆ. ಜ್ಯೂಡಾ ಸ್ಯಾಂಡಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. 'ಹಿರಣ್ಯ' ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇಡೀ ಸಿನಿಮಾ ತಂಡ ಬ್ಯುಸಿಯಾಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.

ಸ್ಯಾಂಡಲ್ವುಡ್ನಲ್ಲಿ ದೊಡ್ಡ ಬ್ರೇಕ್ಗಾಗಿ ರಾಜವರ್ಧನ್ ಎದುರು ನೋಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರನಾಗಿ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಈ ಸಿನಿಮಾ ಗೆಲ್ಲಲೇ ಬೇಕಿದೆ.


Click it and Unblock the Notifications











