ದರ್ಶನ್ ಮಾಡುತ್ತಿರುವ 'ಮದಕರಿ ನಾಯಕ' ಅಂದು ವಿಷ್ಣುವರ್ಧನ್ ಕೈತಪ್ಪಿದ್ದೇಕೆ?
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಗಂಡುಗಲಿ ಮದಕರಿ ನಾಯಕ ಸಿನಿಮಾಗೆ ಚಾಲನೆ ಸಿಕ್ಕಿದೆ. ಇತ್ತೀಚಿಗಷ್ಟೆ ಚಿತ್ರದುರ್ಗದಲ್ಲಿ ಮುಹೂರ್ತ ಮಾಡುವ ಮೂಲಕ ಚಿತ್ರತಂಡ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ದರ್ಶನ್ ಮದಕರಿ ನಾಯಕ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಹುಟ್ಟುಹಾಕಿದೆ.
'ಗಂಡುಗಲಿ ಮದಕರಿ ನಾಯಕ' ಹಿರಿಯ ನಿರ್ದೇಶಕ ವಿ ರಾಜೇಂದ್ರಸಿಂಗ್ ಬಾಬು ಅವರ ಕನಸಿನ ಸಿನಿಮಾ. ಅನೇಕ ವರ್ಷಗಳ ಕನಸು ಇಂದು ದರ್ಶನ್ ನಾಯಕನಾಗಿ ನಟಿಸುವ ಮೂಲಕ ನನಸಾಗುತ್ತಿದೆ. ಅಂದ್ಹಾಗೆ ಚಿತ್ರದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ದರ್ಶನ್ ಗೂ ಮೊದಲು ಮದಕರಿ ನಾಯಕನಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಕಾಣಿಸಿಕೊಳ್ಳಬೇಕಿತ್ತಂತೆ. ಆದರೆ ಅಂದು ಈ ಸಿನಿಮಾ ಸೆಟ್ಟೇರಲಿಲ್ಲ. ಮದಕರಿ ನಾಯಕ ವಿಷ್ಣುವರ್ಧನ್ ಕೈತಪ್ಪಿದ್ದೇಕೆ? ಎನ್ನುವ ವಿವರ ಇಲ್ಲಿದೆ.

ವರ್ಷಗಳ ಹಿಂದೆಯೇ ಸೆಟ್ಟೇರಬೇಕಿತ್ತು
ಎಲ್ಲಾ ಅಂದುಕೊಂಡಂತ್ತೆ ಆಗಿದ್ದರೆ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಅನೇಕ ವರ್ಷಗಳ ಹಿಂದೆಯೆ ಸೆಟ್ಟೇರಬೇಕಿತ್ತು. ಆಗಲೆ ಸ್ಕ್ರಿಪ್ಟ್ ಕೂಡ ಸಿದ್ಧ ಮಾಡಿ ಇಟ್ಟುಕೊಂಡಿದ್ದರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಆದರೆ ಸಿನಿಮಾ ಸೆಟ್ಟೇರಲಿಲ್ಲ. ಮದಕರಿ ನಾಯಕ ರಾಜೇಂದ್ರ ಸಿಂಗ್ ಬಾಬು ಅವರ ಕನಸಿನ ಸಿನಿಮಾ. ಅಂದು ಈಡೇರದ ಕನಸು ಈಗ ನನಸಾಗಿದೆ. ದರ್ಶನ್ ಗಂಡುಗಲಿ ಮದಕರಿ ನಾಯಕನಾಗಿ ಮಿಂಚುತ್ತಿದ್ದಾರೆ.

ಮದಕರಿ ನಾಯಕನಾಗಿ ವಿಷ್ಣು ಕಾಣಿಸಿಕೊಳ್ಳಬೇಕಿತ್ತು
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕನಸಿನ 'ಮದಕರಿ ನಾಯಕ' ಚಿತ್ರಕ್ಕೆ ಸಾಹಸಿಂಹ ವಿಷ್ಣುವರ್ಧನ್ ನಾಯಕನಾಗಿ ಅಬ್ಬರಿಸ ಬೇಕಿತ್ತು. ಆದರೆ ಈ ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಗಿದೆ. ದೊಡ್ಡ ಮಟ್ಟದ ಸಿನಿಮಾ ನಿಂತು ಹೋಗಲು ಕಾರಣ ಬಜೆಟ್ ಸಮಸ್ಯೆ. ಬಹು ಕೋಟಿ ವೆಚ್ಚ ಮಾಡುವುದು ಅಂದು ಬಾರಿ ದೊಡ್ಡ ಮೊತ್ತವಾಗಿತ್ತು. ಹಾಗಾಗಿ ಮದಕರಿ ನಾಯಕನ ಕನಸು ರಾಜೇಂದ್ರ ಸಿಂಗ್ ಬಾಬು ಅವರಿಗೆ ಕನಸಾಗಿಯೆ ಉಳಿದಿತ್ತು.

ಬಜೆಟ್ ಸಮಸ್ಯೆಯಿಂದ ನಿಂತ ಸಿನಿಮಾ
'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಾಜೇಂದ್ರ ಸಿಂಗ್ ಬಾಬು ಸುಮಾರು ಒಂದೂವರೆ ವರ್ಷ ಸ್ಕ್ರಿಪ್ಟ್ ಕೆಲಸ ಮಾಡಿದ್ದಾರಂತೆ. ಅಲ್ಲದೆ ಅಂದು ಪತ್ರಿಕೆಗಳಲ್ಲಿ ಜಾಹಿರಾತು ಕೂಡ ಪ್ರಸಾರವಾಗಿತ್ತು. ಚಿತ್ರ ಬಗ್ಗೆ ಎಲ್ಲಾ ಪ್ಲಾನ್ ಮಾಡಿ ನೋಡಿದ ನಂತರ ಬಜೆಟ್ ದೊಡ್ಡ ಸಮಸ್ಯೆಯಾಗಿತ್ತು. ಆ ಕಾಲಕ್ಕೆ ಚಿತ್ರಕ್ಕೆ ಸುಮಾರು 27 ರಿಂದ 30 ಕೋಟಿ ಆಗಿತ್ತಂತೆ. ಆ ಕಾಲಕ್ಕೆ ಅದು ಅತೀ ದೊಡ್ಡ ಬಜೆಟ್ ಆಗಿತ್ತು. ಹಾಗಾಗಿ ಸಿನಿಮಾ ಅಲ್ಲಿಗೆ ನಿಂತು ಹೋಗಿತ್ತು.

ರಾಜೇಂದ್ರ ಸಿಂಗ್ ಬಾಬು ಕನಸು ನನಸಾಗಿದೆ
ರಾಜೇಂದ್ರ ಸಿಂಗ್ ಬಾಬು ಅವರ ಅನೇಕ ವರ್ಷದ ಕನಸು ಈಗ ನನಸಾಗಿದೆ. ಚಿತ್ರಕ್ಕೆ ಈಗಾಗಲೆ ಮುಹೂರ್ತ ನೆರವೇರಿದೆ. ಬಹುಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿರುವ 'ಗಂಡುಗಲಿ ಮದಕರಿ ನಾಯಕ'ನಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ.

ಚಿತ್ರೀಕರಣಕ್ಕೆ ನಡೆಯುತ್ತಿದೆ ಭರ್ಜರಿ ಸಿದ್ದತೆ
ಈಗಾಗಲೆ ಚಿತ್ರೀಕರಣಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಚಿತ್ರೀಕರಣಕ್ಕೆ ಚಿತ್ರದುರ್ಗದಲ್ಲಿ ಕೋಟಿ ವೆಚ್ಚದ ಸೆಟ್ ನಿರ್ಮಾಣವಾಗುತ್ತಿದೆಯಂತೆ. ಚಿತ್ರದುರ್ಗ ಸೇರಿದಂತೆ ದೇಶದ ನಾನಾಭಾಗಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇನ್ನು ಕಲಾವಿದರ ಆಯ್ಕೆ ಕೂಡ ಚಾಲೆಂಜ್ ಆಗಿದೆ. ದರ್ಶನ್ ಗೆ ಯಾರು ನಾಯಕಿಯಾಗುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ.


Click it and Unblock the Notifications











