ರಾಜೇಶ್ ಗುಂಡೂರಾವ್ ಚಿತ್ರರಂಗಕ್ಕೆ ಪುನರಾಗಮನ

ಆದರೆ ಈ ಬಾರಿ ಅವರು ನಟರಾಗಿ ಬರುತ್ತಿಲ್ಲ, ಬದಲಿಗೆ ನಿರ್ಮಾಪಕರಾಗಲಿದ್ದಾರೆ. ಆಗಸ್ಟ್ 8, 2012 ರಂದು ತಮ್ಮ ಹುಟ್ಟುಹಬ್ಬದ ದಿನದಂದು ಅವರು ತಮ್ಮ ನಿರ್ಮಾಣದ ಹೊಸ ಚಿತ್ರವನ್ನು ಘೋಷಿಸಿಲಿದ್ದಾರೆ. ಚಿತ್ರದ ಹೆಸರು 'ಬೆಂಗಳೂರು ಕಾಲಿಂಗ್'. ಈ ಚಿತ್ರವನ್ನು ಕೆ ನಂಜುಂಡ ನಿರ್ದೇಶಿಸಲಿದ್ದಾರೆ. ಅವರು ಈ ಹಿಂದೆ, 2000 ದಲ್ಲಿ ಪ್ರಕಾಶ್ ರೈ ನಟನೆಯ 'ಕನಸಲೂ ನೀನೆ ಮನಸಲೂ ನೀನೆ' ಚಿತ್ರವನ್ನು ನಿರ್ದೇಶಿಸಿದ್ದರು.
ಹೀಗಾಗಿ ನಿರ್ದೇಶಕ ನಂಜುಂಡ ಅವರದೂ ಪುನರಾಗಮನ ಎನ್ನಬಹುದು. ಹೆಚ್ಚಾಗಿ ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ನಂಜುಂಡ ಅವರು ಕನಸಲೂ ನೀನೆ ಮನಸಲೂ ನೀನೆ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿರುವುದು ಕತೂಹಲಕಾರಿ ಅಂಶ ಎನಿಸಿದೆ. ಈ ಚಿತ್ರದಲ್ಲಿ ಮೂವರ ನಾಯಕನಟರಿದ್ದು ನಟ ಸುನಿಲ್ ರಾವ್ ಹಾಗೂ ವಿನಾಯಕ್ ಜೋಶಿ ಈಗಾಗಲೇ ಆಯ್ಕೆಯಾಗಿದ್ದಾರೆ. ಈ ಎಲ್ಲಾ ವಿಷಯಗಳು "ಬೆಂಗಳೂರು ಮಿರರ್'ನಲ್ಲಿ ವರದಿಯಾಗಿವೆ.
ನಟ ಸುನಿಲ್ 'ಎಕ್ಸ್ ಕ್ಯೂಸ್ ಮಿ' ಚಿತ್ರದಲ್ಲಿ ಸಾಕಷ್ಟು ಗಮನ ಸೆಳೆದವರು. ಆದರೆ ಇತ್ತೀಚಿಗೆ ಯಾಕೋ ಚಿತ್ರರಂಗದಿಂದ ಮರೆಯಾಗಿ ವಿದೇಶಗಳಲ್ಲಿ ಸಂಗೀತ ಸುಧೆ ಹರಿಸುವುದರಲ್ಲೇ ಬಿಜಿಯಾಗಿದ್ದರು. ಈಗ ಬರಲಿರುವ ಬೆಂಗಳೂರು ಕಾಲಿಂಗ್ ಚಿತ್ರದ ಮೂಲಕ ಮತ್ತೆ ರೀಎಂಟ್ರಿ ನೀಡುತ್ತಿದ್ದಾರೆ. ಇನ್ನು ವಿನಾಯಕ ಜೋಶಿ, ಇತ್ತೀಚಿನ 'ಗೋವಿಂದಾಯ ನಮಃ' ಚಿತ್ರದಲ್ಲಿ ಪಾತ್ರಮಾಡಿ ಗಮನಸೆಳೆದವರು.
ಪಟ್ಟಣಕ್ಕೆ ಬಂದ ಹುಡುಗರು ಇಲ್ಲಿನ ಹುಚ್ಚಿಗೆ ಬಿದ್ದು ಮರಳಿ ಹಳ್ಳಿಗೆ ಹೋಗಿ ಅಲ್ಲಿ ಜೀವನ ಮಾಡಲು ನಿರಾಕರಿಸುವುದೇ ಚಿತ್ರದ ಕಥೆ. "ಬರೋಬ್ಬರಿ 20 ವರ್ಷಗಳಷ್ಟು ದೀರ್ಘ ಕಾಲದಿಂದ ಚಿತ್ರರಂಗದಿಂದ ದೂರವಿದ್ದುದರಿಂದ ಈಗ ನಟರಾಗಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನನ್ನಲ್ಲಿರುವ ಸಿನಿಮಾ ಪ್ರೀತಿ ನಿರ್ಮಾಪಕನಾಗಿ ಬರುವಂತೆ ಮಾಡಿದೆ" ಎಂದಿದ್ದಾರೆ.
ಅಷ್ಟೇ ಅಲ್ಲ, ಅವರ ತಂದೆ ಆರ್ ಗುಂಡೂರಾವ್ ಕೂಡ ಸಿನಿಮಾ ಪ್ರಿಯರು ಎಂದು ತಿಳಿಸಿರುವ ಅವರು "ನಮ್ಮ ತಂದೆಗೆ ಕೂಡ ಸಿನಿಮಾದಲ್ಲಿ ನಟಿಸಲು ಭಾರೀ ಇಷ್ಟ. ಆದರೆ ಅವರ ಕೆಲಸದ ನಡುವೆ ವೇಳೆ ಸಿಗಲಿಲ್ಲ" ಎಂದಿದ್ದಾರೆ. ತಾವು ಇನ್ನು ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿ ಇರುವುದನ್ನು ಖಾತ್ರಿ ಪಡಿಸಿರುವ ರಾಜೇಶ್, ಇಡೀ ದೇಶವೇ ಕನ್ನಡ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡುವುದೇ ತಮ್ಮ ಗುರಿ ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











