ಅವರೇನು ನನಗೆ ಲಕ್ಷಾಂತರ ರೂಪಾಯಿ ಪೇಮೆಂಟ್ ಕೊಟ್ಟಿಲ್ಲ ; 'ಅಸುರನ ಕೈಯಲ್ಲಿ ಪಾರಿಜಾತ' ತಂಡದ ಆರೋಪಕ್ಕೆ ಕಿಡಿ ಕಾರಿದ ರಜಿನಿ
ಬದಲಾದ ಈ ಕಾಲದಲ್ಲಿ ಸಿನಿಮಾ ಮಾಡೋದು ಸುಲಭ. ಆದರೆ ಅದನ್ನು ತೆರೆಗೆ ತರುವುದು ಕಷ್ಟ. ಯಾಕೆಂದರೆ ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ಬಿಡುಗಡೆ ಮಾಡುವ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಆದರೂ ಕೂಡ ಬಣ್ಣದ ಮೇಲೀನ ವ್ಯಾಮೋಹ ಮತ್ತು ಲಾಭ ಮಾಡುವ ಆಸೆಯಿಂದ ಹಲವರು ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾರೆ. ವಾಸ್ತವದ ಅರಿವು ಆದ ಮೇಲೆ ವಿಲ ವಿಲ ಒದ್ದಾಡುತ್ತಾರೆ.
ಇನ್ನೂ ಮೊದಲಾದರೆ ಚಿತ್ರದಲ್ಲಿ ಅಭಿನಯಿಸಿರುವ ತಾರೆಯರು ಯಾರೇ ಇರಲಿ, ಕರೆದ ತಕ್ಷಣ ಪ್ರಚಾರಕ್ಕೆ ಓಡೋಡಿ ಬರುತ್ತಿದ್ದರು. ಅವರ ಪಾಲಿಗೆ ಅದು ವೃತ್ತಿ ಧರ್ಮವೂ ಆಗಿತ್ತು. ಆದರೆ ಈಗ ಹಾಗಿಲ್ಲ. ಚಿತ್ರವೊಂದರಲ್ಲಿ ಅಭಿನಯಿಸಿ ಆ ಚಿತ್ರದ ಕೆಲಸ ಪೂರ್ಣಗೊಳಿಸದ ನಂತರ ತಮ್ಮ ಚಿತ್ರದತ್ತ ಹಲವರು ತಿರುಗಿಯೂ ಕೂಡ ನೋಡುವುದಿಲ್ಲ. ಚಿತ್ರದ ಪ್ರಚಾರಕ್ಕೂ ಬರುವುದಿಲ್ಲ. ತಮ್ಮ ಸೋಶಿಯಲ್ ಮೀಡಿಯಾ ಮೂಲಕವೂ ಪ್ರಚಾರ ಮಾಡುವುದಿಲ್ಲ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ. ಈ ಸಾಲಿನಲ್ಲಿ ''ಅಮೃತವರ್ಷಿಣಿ'' ಧಾರಾವಾಹಿ ಖ್ಯಾತಿಯ ರಜಿನಿ ಕೂಡ ಇದ್ದಾರೆ ಎನ್ನುವುದು ''ಅಸುರನ ಕೈಯಲ್ಲಿ ಪಾರಿಜಾತ'' ಚಿತ್ರದ ನಿರ್ಮಾಪಕ ಕಾರ್ತಿಕ್ ಮತ್ತು ನಿರ್ದೇಶಕ ವಿಘ್ನೇಶ್ ಅವರ ಆರೋಪ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಬ್ಬರು ದೂರನ್ನು ಕೂಡ ನೀಡಿದ್ದಾರೆ. ಸದ್ಯ ಇದೇ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಕ್ಕೆ ರಜಿನಿ ಪ್ರತಿಕ್ರಿಯೆ ನೀಡಿದ್ದಾರೆ. 14 ವರ್ಷದ ವೃತ್ತಿ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದಿದ್ಧಾರೆ. ಅವರು ನನಗೇನು ಲಕ್ಷಾಂತರ ರೂಪಾಯಿ ಪೇಮೆಂಟ್ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ಧಾರೆ.
ಈ ಕುರಿತು ''ಸುಮನ್ ಟಿವಿ ಕನ್ನಡ''ಗೆ ಪ್ರತಿಕ್ರಿಯೆ ನೀಡಿರುವ ರಜಿನಿ ಅವರು ಕರೆದಾಗ ನನ್ನ ಬರ್ತ್ಡೇ ಇತ್ತು, ಹೀಗಾಗಿ ನಾನು ಆ ದಿನ ಬರಲು ಸಾಧ್ಯ ಇಲ್ಲ ಎಂದು ಹೇಳಿದ್ದೆ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಪ್ರಚಾರದ ಕಾರ್ಯಕ್ರಮಕ್ಕೆ ನಾನು ಬರಲ್ಲ ಅಂತ ಅವರಿಗೆ ನಾನು ಹೇಳಿಲ್ಲ ಎಂದಿದ್ದಾರೆ. ಅವರು ಯಾಕೆ ನನ್ನ ವಿರುದ್ದ ದೂರು ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಇಷ್ಟೇ ವಿಷಯ ಎಂದಿದ್ಧಾರೆ.
ಆರಂಭದಲ್ಲಿ ಈ ಚಿತ್ರದ ನಿರ್ಮಾಪಕರು ಬೇರೆ ಇದ್ದರು ಆ ನಂತರ ಇವರು ಟೇಕ್ ಓವರ್ ಮಾಡಿಕೊಂಡರು ಎಂದು ಹೇಳಿರುವ ರಜಿನಿ, ನಾನು ಈ ಸಿನಿಮಾ ಮಾಡಿ ಎರಡ್ಮೂರು ವರ್ಷ ಆಯ್ತು, ಅವರಿಗೆ ಈಗ ಬಿಡುಗಡೆ ಮಾಡಬೇಕೆಂಬ ಆತುರ, ಆದರೆ ಈಗ ನಾನು ಬ್ಯುಸಿ ಇರ್ತಿನಿ ಅಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಒಂದಷ್ಟು ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ

ನಾನು 14 ವರ್ಷ ಆಯ್ತು ಇಂಡಸ್ಟ್ರೀಗೆ ಬಂದು, ಯಾವತ್ತೂ ಯಾವುದು ಒಂದು ಕಪ್ಪುಚುಕ್ಕೆ ಇಲ್ಲ ಎಂದು ಹೇಳಿರುವ ರಜಿನಿ, ಕೆಲಸದ ವಿಚಾರದಲ್ಲಿ ನಾನು ಯಾವತ್ತೂ ಆ ರೀತಿ ನಡೆದುಕೊಂಡವಳಲ್ಲ ಎಂದಿದ್ಧಾರೆ. ನಮ್ಮ ಹಿನ್ನೆಲೆ ಹೀಗೆ ಇದ್ದಾಗ, ಇದು ಯಾಕೆ ಹೀಗಾಯ್ತು ಅಂತ ನನಗೆ ಗೊತ್ತಿಲ್ಲ ಎಂದು ಹೇಳಿರುವ ರಜಿನಿ ಅವರು ಹೊಸಬರು, ಬಹುಶಃ ಅವರು ಇದೊಂದೇ ಸಿನಿಮಾ ಕೊನೆ ಅಂದುಕೊಂಡಿದ್ದಾರೋ ಏನೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬರ್ತ್ಡೇ ದಿನ ಬರಲ್ಲ ಅಂತ ಹೇಳಿ ಪರಿಪರಿಯಾಗಿ ಬೇಡಿಕೊಂಡ ಮೇಲೂ ಸುಮಾರು ಜನರ ಹತ್ತಿರ ಅವರು ನನಗೆ ಕಾಲ್ ಮಾಡಿಸಿದರು ಎಂದು ಹೇಳಿರುವ ರಜಿನಿ, ಕೊನೆಗೆ ನನ್ನ ಗಂಡನ ನಂಬರ್ ಕೂಡ ಕಲೆಕ್ಟ್ ಮಾಡಿ, ಮೇಡಂನ ಬರೋಕೆ ಹೇಳಿ ಅಂತ ಅವರಿಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಫ್ಯಾಮಿಲಿಗೆಲ್ಲಾ ಡಿಸ್ಟರ್ಬ್ ಮಾಡಿದ್ರೆ, ಎಂಥವರಿಗೂ ಡಿಸ್ಟರ್ಬ್ ಆಗುತ್ತೆ ಅಲ್ವಾ? ಹಾಗಾಗಿ, ನಾನು ಅವರ ನಂಬರ್ನ ಬ್ಲಾಕ್ ಮಾಡಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಫಿಲ್ಮ್ ಚೇಂಬರ್ ನಲ್ಲಿ ದೂರು ಕೊಡ್ತಿರುವ ವಿಚಾರ ಅವರು ನನಗೆ ಹೇಳಿಲ್ಲ ಎಂದು ಹೇಳಿರುವ ರಜಿನಿ ನಾನು ಪ್ರಮೋಷನ್ಗೆ ಬರೋದೇ ಇಲ್ಲ ಅಂತ ಹೇಳಿದ್ರೆ ಅದು ಬೇರೆ ವಿಚಾರ, ಆದರೆ ನಾನು ಹಾಗೇ ಹೇಳೇ ಇಲ್ವಲ್ಲಾ ಎಂದಿದ್ಧಾರೆ.
ಇನ್ನು ಇವರೇನು ನನಗೆ ಲಕ್ಷಾಂತರ ರೂಪಾಯಿ ಸಂಭಾವನೆ ಕೊಟ್ಟಿಲ್ಲ. ನಾನು ಸಾವಿರಾರು ರೂಪಾಯಿಯಲ್ಲಿ ಪೇಮೆಂಟ್ ತಗೊಂಡಿದ್ದೇನೆ ಎಂದು ಕಿಡಿ ಕಾರಿರುವ ರಜಿನಿ ಹೀಗಿರುವಾಗ ಇವರು ಹೀಗೆಲ್ಲಾ ಮಾಡೋದು ತಪ್ಪು ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಚಾರಕ್ಕೆ ಕರೆದರೆ ಹೋಗ್ತೀನಿ ಆದರೆ ನನ್ನ ಬಿಡುವಿನ ಸಮಯದಲ್ಲಿ ಅವರು ಮಾಡಬೇಕು ಅಷ್ಟೇ ಎಂದು ತಮ್ಮ ವಾದವನ್ನು ರಜಿನಿ ಮಂಡಿಸಿದ್ದಾರೆ.


Click it and Unblock the Notifications