ರಜನಿಕಾಂತ್ ಓದಿದ ಕನ್ನಡ ಮಾಧ್ಯಮ ಶಾಲೆ ನವೀಕರಣ
ಶಾಲೆಯ ನವೀಕರಣ ಕೆಲಸ ಮುಗಿಗಲು ಆರು ತಿಂಗಳ ಸಮಯ ಹಿಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೂಲಗಳ ಪ್ರಕಾರ, ಶಿಕ್ಷಣ ಇಲಾಖೆ ರು.81.5 ಲಕ್ಷ, ಸಂಸದ ಅನಂತಕುಮಾರ್ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಅವರು ಕ್ರಮವಾಗಿ ರು. 25 ಲಕ್ಷ ಹಾಗೂ ರು. 20 ಲಕ್ಷ ನಿಧಿಯನ್ನು ಶಾಲೆಯ ನವೆಕರಣಕ್ಕೆ ನೀಡಿದ್ದಾರೆ.
1954ರಿಂದ 1959ರ ಅವಧಿಯಲ್ಲಿ ರಜನಿಕಾಂತ್ ಅವರು ಈ ಶಾಲೆಯಲ್ಲಿ 5ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಏಳನೇ ತರಗತಿವರೆಗೂ ಶಿಕ್ಷಣ ನೀಡುತ್ತಿದ್ದ ಈ ಶಾಲೆಯನ್ನು ಈಗ 10ನೇ ತರಗತಿವರೆಗೂ ವಿಸ್ತರಿಸಲಾಗುತ್ತಿದೆ.
ಶಾಲೆಯ ಕಟ್ಟಡ ಹಾಳಾಗಿದ್ದು ಇಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯಗಳು ಇರಲಿಲ್ಲ. ಐದು ವರ್ಷಗಳ ಹಿಂದೆಯೇ ಈ ಶಾಲೆಯ ನವೀಕರಣಕ್ಕಾಗಿ ಬೇಡಿಕೆ ಇಡಲಾಗಿತ್ತು. ಸರ್ಕಾರ ಈಗ ಗ್ರೀನ್ ಸಿಗ್ನಲ್ ಕೊಟ್ಟಿದೆ. ತಾನು ಓದಿದ ಶಾಲೆಗೆ ತಾವು ರು.25 ಲಕ್ಷಗಳನ್ನು ಉದಾರವಾಗಿ ನೀಡುವುದಾಗಿ ರಜನಿಕಾಂತ್ ಭರವಸೆ ನೀಡಿದ್ದರು.
ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದೆ. ಆದರೆ ಈ ಶಾಲೆಗೆ ಮೂಲ ಸೌಲಭ್ಯಗಳಿಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿತ್ತು. ಈ ಪಾಠಶಾಲೆಯನ್ನು ಅಭಿವೃದ್ಧಿ ಮಾಡಲು ರಜನಿ ಅಭಿಮಾನಿಗಳು ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ರಜನಿಜೀ ಸೇವಾ ಸಮಿತಿ ಸಹ ಮನವಿ ಮಾಡಿಕೊಂಡಿತ್ತು.
ಶಿಥಿಲಾವಸ್ಥೆಯಲ್ಲಿರುವ ಈ ಶಾಲೆಯ ಕೊಠಡಿಗಳು ವಿದ್ಯಾರ್ಥಿಗಳು ಕುಳಿತುಕೊಳ್ಳಲಾಗದಂತಹ ಸ್ಥಿತಿಯಲ್ಲಿವೆ. ರಜನಿಕಾಂತ್ ಈ ಶಾಲೆಯಲ್ಲಿ ಓದಿದ ಕಾರಣ ಈ ಶಾಲೆಗೆ ಒಂದು ಗೌರವ, ಘನತೆ ಬಂದಿತ್ತು. (ಏಜೆನ್ಸೀಸ್)


Click it and Unblock the Notifications












