ರಜನಿಕಾಂತ್ ಆಪ್ತಮಿತ್ರ, ಕನ್ನಡ ನಟ ದಿಲೀಪ್ ವಿಧಿವಶ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಮೂಲತಃ ಬೆಂಗಳೂರಿನವರಾದ ಅವರು ಮೈಸೂರಿನ ಶಾಂತಿನಗರದಲ್ಲಿ ನೆಲೆಸಿದ್ದರು.
ಕನ್ನಡದಲ್ಲಿ ಶೃತಿ, ಇಂದಿನ ರಾಮಾಯಣ ಹಾಗೂ ತೂಗುವೆಕೃಷ್ಣನಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಳಿಕ ಅವರು ತಮಿಳು ಚಿತ್ರಗಳಲ್ಲಿ ತಮ್ಮ ತೊಡಗಿಸಿಕೊಂಡಿದ್ದರು. ಸರಿಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ದಿಲೀಪ್ ಅವರಿಗೆ ಗಂಭೀರ ಪಾತ್ರಗಳು ಸಿಗದೆ ಇದ್ದ ಕಾರಣ ಅವರು ತಮಿಳು ಚಿತ್ರಗಳಿಗೆ ಮೊರೆಹೋಗಿದ್ದರು. ತಮಿಳು ಚಿತ್ರಗಳಲ್ಲಿ ಅವರಿಗೆ ಗಂಭೀರ ಪಾತ್ರಗಳ ಜೊತೆಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಕ್ಕಿದವು.
ದಿಲೀಪ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಅವರ ಅಂತ್ಯಕ್ರಿಯೆಯಲ್ಲಿ ಕನ್ನಡ, ತಮಿಳು ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿದ್ದರು. ಪತ್ನಿ ಹೇಮಾ ಹಾಗೂ ಮಕ್ಕಳಾದ ಮೌರ್ಯ, ಭವ್ಯಾ ಅವರನ್ನು ದಿಲೀಪ್ ಅಗಲಿದ್ದಾರೆ.
ರಜನಿಕಾಂತ್ ಮಾಲೀಕತ್ವದ ಸ್ಟುಡಿಯೋ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಅನಾರೋಗ್ಯದ ನಿಮಿತ್ತ ಇತ್ತೀಚೆಗೆ ಸ್ಟುಡಿಯೋಗೆ ಹೋಗುತ್ತಿರಲಿಲ್ಲ. ಸ್ಫುರದ್ರೂಪಿಯಾಗಿದ್ದ ಅವರು ಸರಳ, ಸೌಜನ್ಯದ ವ್ಯಕ್ತಿತ್ವ ಹೊಂದಿದ್ದರು. ಮೈಸೂರು ವಿದ್ಯಾರಣ್ಯಪುರದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. (ಏಜೆನ್ಸೀಸ್)


Click it and Unblock the Notifications











