ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮ: ಕನ್ನಡ ಚಿತ್ರರಂಗದಿಂದ ಒಬ್ಬರಿಗೆ ಸಿಕ್ತು ಆಹ್ವಾನ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ಜನವರಿ 22ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ 4 ಸಾವಿರ ಸಾಧುಗಳು ಹಾಜರಾಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಂದಾಗಿದೆ. ಜನವರಿ 22ರಂದು ಪ್ರಧಾನಿ ಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಅದಕ್ಕೂ ಒಂದು ವಾರ ಮುನ್ನ ಪ್ರಾಣ ಪ್ರತಿಷ್ಟಾಪನೆಯ ವಿಧಿ ವಿಧಾನಗಳು ಆರಂಭವಾಗಲಿದೆ.

ಇನ್ನು ಶ್ರೀರಾಮ ಮಂದಿರದ ಮೊದಲ ಮಹಡಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಮನ ಮೂರ್ತಿಯನ್ನು ನೆಲಮಹಡಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಆ ನೆಲಮಹಡಿ ನಿರ್ಮಾಣ ಬಹುತೇಕ ಪೂರ್ಣಗೊಂಡಿರುವುದರಿಂದ ವಿಗ್ರಹ ಪ್ರತಿಷ್ಠಾಪನೆಗೆ ಸರ್ವ ಸನ್ನದ್ಧವಾದಂತಾಗಿದೆ. ಈಗಾಗಲೇ ಮೂರ್ತಿಗಳ ಕೆತ್ತನೆ ಕಾರ್ಯವೂ ಮುಕ್ತಾಯದ ಹಂತ ತಲುಪಿದೆ. 3 ವಿಗ್ರಹಗಳ ಕೆತ್ತನೆ ಕಾರ್ಯದಲ್ಲಿ ಶಿಲ್ಪಿಗಳು ನಿರತರಾಗಿದ್ದಾರೆ.
ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತ್ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಟಾಪನೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೂ ಆಹ್ವಾನ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್, ಮಾಲಿವುಡ್ ತಾರೆಯರು ಈ ಶುಭಕಾರ್ಯಕ್ಕೆ ಸಾಕ್ಷಿ ಆಗಲಿದ್ದಾರೆ.

ಕನ್ನಡ ನಟ, ನಿರ್ದೇಶಕ ರಿಷಬ್ ಶೆಟ್ಟಿ, ತಮಿಳು ನಟರಾದ ರಜನಿಕಾಂತ್, ಧನುಷ್, ತೆಲುಗು ನಟ ಚಿರಂಜೀವಿ, ಮಲಯಾಳಂ ನಟ ಮೋಹನ್ ಲಾಲ್ಗೆ ಈಗಾಗಲೇ ಆಹ್ವಾನ ಸಿಕ್ಕಿದೆ ಎನ್ನಲಾಗುತ್ತಿದೆ. ಬಾಲಿವುಡ್ನಿಂದ ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ನಿರ್ದೇಶಕರಾದ ರಾಜ್ಕುಮಾರ್ ಹಿರಾನಿ, ರೋಹಿತ್ ಶೆಟ್ಟಿ ಈ ಲಿಸ್ಟ್ನಲ್ಲಿ ಇದ್ದಾರೆ.
ಇನ್ನು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾಗೂ ಆಹ್ವಾನ ಸಿಕ್ಕಿದೆಯಂತೆ. ಚಿತ್ರರಂಗದಿಂದ ಮತ್ತಷ್ಟು ತಾರೆಯರಿಗೆ ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ ಆಗುವ ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ.
'ಕಾಂತಾರ' ಸಿನಿಮಾ ಮಾಡಿ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಗೊತ್ತೇಯಿದೆ. ಚಿತ್ರವನ್ನು ನಿರ್ದೇಶಿಸಿ, ನಟಿಸಿ ರಿಷಬ್ ಸಕ್ಸಸ್ ಕಂಡಿದ್ದರು. ಬಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಬೆರಗಾಗಿದ್ದರು. ಸಾಕಷ್ಟು ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಗೋವಾ ಚಿತ್ರೋತ್ಸವದಲ್ಲಿ ಇತ್ತೀಚೆಗೆ ರಿಷಬ್ ಪ್ರಶಸ್ತಿ ಕೂಡ ಪಡೆದಿದ್ದರು. ಪರಭಾಷಿಕರ ಮೇಲೂ ಸಿನಿಮಾ ಇಂಪ್ಯಾಕ್ಟ್ ದೊಡ್ಡಮಟ್ಟದಲ್ಲಿದೆ. ಸದ್ಯ ಸಿನಿಮಾ ಪ್ರೀಕ್ವೆಲ್ ಕೆಲಸಗಳು ಭರದಿಂದ ಸಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ ಕಳೆದ ವರ್ಷ ದಸರಾ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಬಾಲಿವುಡ್ ಸ್ಟಾರ್ಗಳು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ರಜನಿಕಾಂತ್ ಸಿನಿಮಾ ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದರು. ವಿದೇಶಗಳಲ್ಲೂ ಜನ ಕ್ಯೂ ನಿಂತು ಸಿನಿಮಾ ನೋಡಿದ್ದರು. ಪಂಜುರ್ಲಿ, ಗುಳಿಗ ದೈವಗಳ ಆರಾಧನೆ ಸುತ್ತಾ ಮೂಡಿ ಬಂದಿದ್ದ ಸಿನಿಮಾ ಕಥೆ ತೆರೆಮೇಲೆ ಮ್ಯಾಜಿಕ್ ಮಾಡಿತ್ತು. ಕೊನೆಯ 10 ನಿಮಿಷ ಸಿನಿಮಾ ನೋಡುತ್ತಾ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು. ಈ ಸಿನಿಮಾ ರಿಷಬ್ ಶೆಟ್ಟಿಗೆ ಸಾಕಷ್ಟು ಗೌರವ, ಹೆಸರು ತಂದುಕೊಟ್ಟಿದೆ.


Click it and Unblock the Notifications











