"ಪ್ರಧಾನಿ ಮೋದಿಯವರನ್ನು ಹೊಗಳಿದ್ದ ಅಯೋಧ್ಯೆಗೂ ಹೋಗಿದ್ದ ರಜನಿ ಸಂಘಿ ಅಲ್ವೇ?; ಚೇತನ್ ಅಹಿಂಸಾ ಪ್ರಶ್ನೆ
ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೆ ಚರ್ಚೆಗೆ ಗ್ರಾಸವಾಗುತ್ತಾರೆ. ತಮ್ಮ ತಂದೆ ರಜನಿಕಾಂತ್ ಅವರನ್ನು ಸಂಘಿ ಎಂದು ಟೀಕಿಸುವವರ ಬಗ್ಗೆ ಇತ್ತೀಚೆಗೆ ಐಶ್ವರ್ಯ ರಜನಿಕಾಂತ್ ಗರಂ ಆಗಿದ್ದರು. ಇದೇ ವಿಚಾರದ ಬಗ್ಗೆ ಇತ್ತೀಚೆಗೆ ತಲೈವಾ ಕೂಡ ಸ್ಪಷ್ಟನೆ ನೀಡಿದ್ದರು. ಈ ವಿಚಾರದ ಬಗ್ಗೆ ಚೇತನ್ ಅಹಿಂಸಾ ಟ್ವೀಟ್ ಮಾಡಿದ್ದಾರೆ.
'ಲಾಲ್ ಸಲಾಂ' ಚಿತ್ರದ ಆಡಿಯೋ ಲಾಂಚ್ ವೇಳೆ ಮಾತನಾಡಿದ್ದ ಐಶ್ವರ್ಯಾ, ನನ್ನ ತಂದೆಯನ್ನು ಕೆಲವರು 'ಸಂಘಿ' ಎಂದು ಟೀಕಿಸುತ್ತಿದ್ದಾರೆ. ಆದರೆ ಅವರು ಸಂಘಿಯಲ್ಲ. ಅಪ್ಪ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಆಧ್ಯಾತ್ಮಿಕ ವ್ಯಕ್ತಿ ಮತ್ತು ಹೀಗಿರುವಾಗ ತಂದೆಯನ್ನು ಏಕೆ ಈ ರೀತಿ ಕರೆಯಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.

"ನಾನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಿಂದ ದೂರ ಇರ್ತೀನಿ. ಆದರೆ ನನ್ನ ತಂಡದವರು ಆಗಾಗ ಏನಾಗುತ್ತಿದೆ ಎಂದು ಹೇಳುತ್ತಾರೆ. ಕೆಲವು ಪೋಸ್ಟ್ಗಳನ್ನು ನನಗೆ ತೋರಿಸುತ್ತಾರೆ. ಅವುಗಳನ್ನು ನೋಡಿ ನನಗೆ ಕೋಪ ಬರುತ್ತಿತ್ತು. ನಾವೂ ಮನುಷ್ಯರು. ಇತ್ತೀಚಿನ ದಿನಗಳಲ್ಲಿ ಅನೇಕರು ನನ್ನ ತಂದೆಯನ್ನು 'ಸಂಘಿ' ಎಂದು ಕರೆಯುತ್ತಾರೆ. ಅದರ ಅರ್ಥ ಏನು ಅಂತ ನನಗೆ ಗೊತ್ತಿರಲಿಲ್ಲ. ಆಗ ನಾನು 'ಸಂಘಿ' ಎಂದರೆ ಏನು ಎಂದು ಕೇಳಿದೆ. ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ, ರಜನಿಕಾಂತ್ ಅವರು 'ಸಂಘಿ' ಅಲ್ಲ. ಅವರು ಅವರಾಗಿಯೇ ಇದ್ದಾರೆ. ಸಂಘಿ ಆಗಿದ್ದರೆ, 'ಲಾಲ್ ಸಲಾಂ' ಚಿತ್ರದಲ್ಲಿ ನಟಿಸುತ್ತಿರಲಿಲ್ಲ" ಎಂದು ಐಶ್ವರ್ಯ ವಿವರಿಸಿದ್ದರು.
ಐಶ್ವರ್ಯ ಹೇಳಿಕೆಯಲ್ಲೂ ಕೆಲವರು ತಪ್ಪು ಹುಡುಕಿದ್ದರು. 'ಸಂಘಿ' ಎನ್ನುವ ಪದ ವಿವಾದ ಸೃಷ್ಟಿಸಿತ್ತು. 'ಸಂಘಿ' ಎನ್ನುವುದು ಕೆಟ್ಟಪದವೇ? ಅದಕ್ಕೆ ಯಾಕೆ ಐಶ್ವರ್ಯ ಇಷ್ಟು ಗರಂ ಆಗುತ್ತಿದ್ದಾರೆ ಎಂದು ಕೇಳಿದ್ದರು. ಈ ಬಗ್ಗೆ ಸಖತ್ ಟ್ರೋಲ್ ಮಾಡಿದ್ದರು. ಕೊನೆಗೆ ಈ ಬಗ್ಗೆ ಖುದ್ದು ರಜನಿಕಾಂತ್ ಪ್ರತಿಕ್ರಿಯಿಸುವಂತಾಯಿತು. "ತಮ್ಮ ಪುತ್ರಿ ಐಶ್ವರ್ಯಾ 'ಸಂಘಿ' ಅನ್ನು 'ಕೆಟ್ಟ ಪದ' ಎಂದು ಹೇಳಿಲ್ಲ. ತನ್ನ ತಂದೆ ಆಧ್ಯಾತ್ಮಿಕತೆಯಲ್ಲಿ ಇರುವಾಗ ಅವರನ್ನು ಏಕೆ ಸಂಘಿ ಎಂದು ಏಕೆ ಬ್ರಾಂಡ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದರು ಅಷ್ಟೇ" ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.
'ಸಂಘಿ' ಎನ್ನುವ ವಿಚಾರದ ಬಗ್ಗೆ ರಜನಿಕಾಂತ್ ಹಾಗೂ ಪುತ್ರಿ ಐಶ್ವರ್ಯ ಹೇಳಿಕೆಗಳ ಬಗ್ಗೆ ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. "ನಟ ರಜನಿಕಾಂತ್ ಅವರ ಮಗಳು ತನ್ನ ತಂದೆ 'ಸಂಘಿ ಅಲ್ಲ' ಎಂದು ಹೇಳಿದ್ದಾರೆ; ಅಲ್ಲದೆ, ಆಕೆಯ 'ಲಾಲ್ ಸಲಾಮ್' ಚಿತ್ರದಲ್ಲಿ ರಜನಿಕಾಂತ್ ನಟನೆ ಮಾಡುತ್ತಿರುವುದು ಅವರು ಸಂಘಿ ಅಲ್ಲ ಅನ್ನೋದನ್ನ ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ.

ಅರ್ಥವಾಗದಿರುವುದು ಏನು ಅಂದ್ರೆ, ರಜನಿಕಾಂತ್ ಅವರು 2014, 2017, 2019, 2021ರಲ್ಲಿ ಹೀಗೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು, ಹೊಗಳಇ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅವರು 2023 ಮತ್ತು 2024 ರಲ್ಲಿ ರಾಮ ಮಂದಿರಕ್ಕೆ (ಅಯೋಧ್ಯೆ) ಭೇಟಿ ನೀಡಿದ್ದರು. ಇದು ಸಂಘಿಯಂತೆ ಕಾಣುತ್ತದೆ.ಅಲ್ಲದೇ, ಕಲಾವಿದರು ಹಣ ಮತ್ತು ದುಡಿಮೆಗಾಗಿ ಸಿನಿಮಾ ಮಾಡುತ್ತಾರೆ ರಜನಿಕಾಂತ್ಗೆ ಎಂದಾದರೂ ತೆರೆಮೇಲೆ ಸಿದ್ಧಾಂತ ಮುಖ್ಯವಾಗಿದೆಯೇ?" ಎಂದು ಚೇತನ್ ಪ್ರಶ್ನಿಸಿದ್ದಾರೆ.
ಸದ್ಯ ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಐಶ್ವರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿಕ್ರಾಂತ್, ವಿಷ್ಣು ಲೀಡ್ ರೋಲ್ಗಳಲ್ಲಿ ನಟಿಸಿದ್ದಾರೆ. ತಲೈವಾ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications











