Exclusive: ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ತಲೈವರ್170? "ಸುಳ್ಳೇ ಸುಳ್ಳು" ಎಂದಿದ್ಯಾರು?
ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಂಚಲನ ಸೃಷ್ಟಿಸಿದೆ. KGF ಸರಣಿ ಮತ್ತು 'ಕಾಂತಾರ' ಸಿನಿಮಾಗಳ ಮೂಲಕ ಸಂಸ್ಥೆ ಬಾಲಿವುಡ್ ಮಂದಿ ಕೂಡ ತಿರುಗಿ ನೋಡುವಂತೆ ಮಾಡಿದೆ. ಇದೀಗ ಹೊಂಬಾಳೆ ಸಂಸ್ಥೆಯ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟಿಸ್ತಾರೆ ಎನ್ನುವ ಸುದ್ದಿ ಹರಿದಾಡ್ತಿದೆ.
ದಶಕಗಳ ನಂತರ ಕನ್ನಡ ಚಿತ್ರದಲ್ಲಿ ತಲೈವಾ ನಟಿಸ್ತಾರೆ ಎನ್ನುವ ಸುದ್ದಿ ಭಾರೀ ಸದ್ದು ಮಾಡ್ತಿದೆ. ಇಂತಾದೊಂದು ಸುದ್ದಿ ಹರಡುವುದಕ್ಕೆ ಕಾರಣ ಕೂಡ ಇದೆ. ರಜನಿಕಾಂತ್ ಸಹ ಹಲವು ಬಾರಿ ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಹೊಂಬಾಳೆ ಸಂಸ್ಥೆ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ಬಂಡವಾಳವನ್ನು ಹೊಂಬಾಳೆ ಸಂಸ್ಥೆ ಚಿತ್ರರಂಗದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದೆ. ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆರಂಭವಾಗಿದೆ.
ಪ್ಯಾನ್ ಇಂಡಿಯಾ ಜಮಾನ ಆಗಿರುವುದರಿಂದ ತಮಿಳಿನಲ್ಲೇ ಹೊಂಬಾಳೆ ಸಂಸ್ಥೆ ರಜನಿಕಾಂತ್ ಸಿನಿಮಾ ನಿರ್ಮಾಣ ಮಾಡಬಹುದು. ಅದನ್ನು ಕನ್ನಡ ಸೇರಿದಂತೆ ಬೇರೆ ಭಾಷೆಗಳಿಗೆ ಡಬ್ ಮಾಡಬಹುದು. ಈಗಾಗಲೇ 'ರಘು ತಾತ'ಎನ್ನುವ ಮಹಿಳಾಪ್ರಧಾನ ಚಿತ್ರವನ್ನು ಕಾಲಿವುಡ್ನಲ್ಲಿ ಸಂಸ್ಥೆ ನಿರ್ಮಿಸ್ತಿದೆ.

ರಜನಿಕಾಂತ್ 170ನೇ ಸಿನಿಮಾ?
ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ 'ಜೈಲರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮಂಗಳೂರಿನಲ್ಲಿ ಸದ್ಯ ಚಿತ್ರದ ಕೆಲ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ಶಿವಣ್ಣ ಕೂಡ ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ. ಇನ್ನು ರಜನಿಕಾಂತ್ ನಟನೆಯ 170ನೇ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನಲಾಗ್ತಿದೆ. ಆದರೆ ರಜನಿಕಾಂತ್ ಲೈಕಾ ಪ್ರೊಡಕ್ಷನ್ ಸಂಸ್ಥೆ ಜೊತೆ 2 ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದರಲ್ಲಿ ಒಂದು ಚಿತ್ರಕ್ಕೆ ಸಿಬಿ ಚಕ್ರವರ್ತಿ ಆಕ್ಷನ್ ಕಟ್ ಹೇಳುವುದಾಗಿ ಹೇಳಲಾಗುತ್ತಿದೆ.

ಆಪ್ತರಿಂದಲೇ ಸಿಕ್ತು ಮಾಹಿತಿ
ಹೊಂಬಾಳೆ ಬ್ಯಾನರ್ನಲ್ಲಿ ರಜನಿಕಾಂತ್ ನಟಿಸ್ತಾರೆ ಎನ್ನುವುದು ಬರೀ ಅಂತೆ ಕಂತೆ ಸುದ್ದಿ ಅಷ್ಟೇ. ಸದ್ಯ ಆ ಬಗ್ಗೆ ಸೂಪರ್ ಸ್ಟಾರ್ ಜೊತೆ ಯಾವುದೇ ಚರ್ಚೆ ನಡೆದಿಲ್ಲ, ಇದೆಲ್ಲಾ ಸುಳ್ಳು ಎಂದು ವಿಜಯ್ ಕಿರಗಂದೂರ್ ಆಪ್ತರಿಂದಲೇ ಫಿಲ್ಮಿಬೀಟ್ಗೆ ಮಾಹಿತಿ ಸಿಕ್ಕಿದೆ. ಸದ್ಯ 'ವರಾಹ ರೂಪಂ' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ಕಿರಗಂದೂರ್ ಓಡಾಡುತ್ತಿದ್ದಾರೆ. ಇದು ಬಿಟ್ಟು ಬೇರೆ ಬೇರೆ ಸಿನಿಮಾಗಳ ಕೆಲಸಗಳು ನಡೀತಿದೆ. ರಜನಿಕಾಂತ್ ಸಿನಿಮಾ ನಿರ್ಮಾಣದ ಬಗ್ಗೆ ಇನ್ನು ಆಲೋಚಿಸಿಲ್ಲ ಎಂದು ತಿಳಿಸಿದ್ದಾರೆ.
ಈ ಗಾಸಿಪ್ ಹಬ್ಬಿದ್ದು ಹೇಗೆ?
ರಜನಿಕಾಂತ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿತ್ತು. ಅಲ್ಲಿಂದ ಇಂತಾದೊಂದು ಊಹಾಪೋಸ ಶುರುವಾಯಿತು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರಿಗೆ ಹೊಂಬಾಳೆ ಸಂಸ್ಥೆ ಹುಟ್ಟುಹಬ್ಬದ ಶುಭಾಶಯ ಕೋರುತ್ತದೆ. ತಲೈವಾಗೆ ವಿಶ್ ಮಾಡಿದ್ದು ನೋಡಿ ಅವರೊಟ್ಟಿಗೂ ಸಿನಿಮಾ ಮಾಡ್ತಿದ್ದಾರೆ ಎನ್ನುವ ಲೆಕ್ಕಾಚಾರಕ್ಕೆ ಕೆಲವರು ಬಂದಿದ್ದರು. ಆದರೆ ಹೊಂಬಾಳೆ ಸಂಸ್ಥೆಯಿಂದ ಈವರೆಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹೊಂಬಾಳೆಗೆ ತಲೈವಾ ಶಹಬ್ಬಾಶ್
ಸೂಪರ್ ಸ್ಟಾರ್ ರಜನಿಕಾಂತ್ ಯಾವುದೇ ಒಳ್ಳೆ ಸಿನಿಮಾ ಬಂದರೂ ನೋಡಿ ತಂಡದ ಬೆನ್ನು ತಟ್ಟುತ್ತಾರೆ. ಇತ್ತೀಚೆಗೆ KGF- 2 ಹಾಗೂ 'ಕಾಂತಾರ' ಸಿನಿಮಾಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದರು. ಚಿತ್ರತಂಡಕ್ಕೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದರು. ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆಗೂ ಫೋನ್ನಲ್ಲಿ ಸಂಭಾಷಣೆ ನಡೆಸಿದ್ದರು. ಸಂಸ್ಥೆಯ ಬಗ್ಗೆ ಸಿನಿಮಾಗಳ ಬಗ್ಗೆ ಮಾತನಾಡಿದ್ದರು. ಹಾಗಾಗಿ ಹೊಂಬಾಳೆ ಸಂಸ್ಥೆ ಚಿತ್ರದಲ್ಲಿ ರಜನಿಕಾಂತ್ ನಟಿಸ್ತಾರೆ ಎನ್ನುವ ಸುದ್ದಿ ಹುಟ್ಟಿಕೊಂಡಿದೆ. ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಬಂದರೂ ಅಚ್ಚರಿಪಡಬೇಕಿಲ್ಲ.


Click it and Unblock the Notifications











