ಕರ್ನಾಟಕದಲ್ಲಿ ರಜನಿಕಾಂತ್ 'ಕಾಲಾ' ಬಿಡುಗಡೆಯಾಗಲ್ಲ.!
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಜೂನ್ 7 ರಂದು ವರ್ಲ್ಡ್ ವೈಡ್ ತೆರೆಕಾಣಬೇಕಿದೆ. ಆದ್ರೆ, ಜಗತ್ತಿನಾದ್ಯಂತ ಅಬ್ಬರಿಸಲಿರುವ 'ಕಾಲಾ'ಗೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯ ಸಿಗಲ್ಲ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗ್ಗೆ ಹೇಳಿಕೆ ನೀಡಿ ಕರ್ನಾಟಕದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ರಜನಿಕಾಂತ್ ಅಭಿನಯದ ಯಾವುದೇ ಚಿತ್ರಗಳನ್ನ ಬಿಡುಗಡೆ ಮಾಡದಂತೆ ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದೆ. ರಜನಿಕಾಂತ್ ಮಾತ್ರವಲ್ಲ, ಕಮಲ್ ಹಾಸನ್ ಅಭಿನಯದ ಚಿತ್ರಗಳಿಗೂ ನಿಷೇಧ ಹೇರಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಪ್ರದರ್ಶಕ ಮತ್ತು ವಿತರಕರ ಜೊತೆ ಸಭೆ ಸೇರಿದೆ. ರಜನಿ ಮತ್ತು ಕಮಲ್ ಹಾಸನ್ ಸಿನಿಮಾವನ್ನ ಬಿಡುಗಡೆ ಮಾಡದಂತೆ ನಿರ್ಣಯ ಕೈಗೊಳ್ಳಲಿದೆ. ಹೀಗಾಗಿ, ಬಹುತೇಕ 'ಕಾಲ' ಸಿನಿಮಾ ಇಲ್ಲಿ ತೆರೆಕಾಣುವುದಿಲ್ಲ.

ಸದ್ಯ, ಗೋಲ್ಡ್ ಫಿಲ್ಮ್ಸ್ ನ ಸೌರಬ್ ಬಳಿ 'ಕಾಲಾ' ಚಿತ್ರದ ಕರ್ನಾಟಕದ ವಿತರಣೆಯ ಹಕ್ಕುಗಳಿವೆ. ಸೌರಬ್ ಅವರೇ ಮುಂದೆ ಬಂದು ಕರ್ನಾಟಕದ ಹಿತದೃಷ್ಟಿಯಿಂದ ವಿತರಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಅಂತ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಇದ್ದ ಒಂದೇ ಒಂದು ಭರವಸೆಯೂ ಕಮರಿದೆ.
ಈ ಹಿಂದೆ ರಜನಿಕಾಂತ್ ಅವರು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀಡಬೇಕು ಎಂದಿದ್ದರು. ಈ ಹೇಳಿಕೆ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಂಬೈನ ಅಂಡರ್ ವರ್ಲ್ಡ್ ನಲ್ಲಿ ತಮಿಳರ ಪರವಾಗಿ ಹೋರಾಡುವ ಗ್ಯಾಂಗ್ ಸ್ಟರ್ ಆಗಿ ತಲೈವಾ ಬಣ್ಣ ಹಚ್ಚಿದ್ದಾರೆ, 'ಕಬಾಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪಾ ರಂಜಿತ್ ಈ ಚಿತ್ರಕ್ಕೂ ಡೈರೆಕ್ಟರ್ ಆಗಿದ್ದು, ನಟ ಧನುಶ್ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಹುಮಾ ಖುರೇಷಿ , ಈಶ್ವರಿ ರಾವ್, ಧನುಷ್ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ.


Click it and Unblock the Notifications











