ಕೊಲೆ, ಅರೆಸ್ಟ್, ಬೇಲ್; 'ವೆಟ್ಟೆಯಾನ್' ಚಿತ್ರದಲ್ಲಿದೆ ದರ್ಶನ್ ಬಂಧನ ನೆನಪಿಸುವ ದೃಶ್ಯಗಳು
ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಮಿತಾಬ್ ಬಚ್ಚನ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಜ್ಞಾನವೇಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಬಂಧನ ನೆನಪಿಸುವ ಕೆಲ ಸನ್ನಿವೇಶಗಳಿವೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ 4 ತಿಂಗಲೂ ಕಳೆದಿದೆ. ಜೂನ್ 11ರಂದು ನಟ ದರ್ಶನ್ ಅವರನ್ನು ಪೊಲೀಸರು ಮೈಸೂರಿನ ಹೋಟೆಲ್ನಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ಬೆಂಗಳೂರಿಗೆ ಕರೆತಂದು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ಬಳಿಕ ಇನ್ನುಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬಳಿಕ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈಗಾಗಲೇ ಪ್ರಕರಣದಲ್ಲಿ ಮೂವರು ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ. ಸದ್ಯ ಬಿಡುಗಡೆ ಆಗಿರುವ 'ವೆಟ್ಟೆಯಾನ್' ಚಿತ್ರದಲ್ಲಿ ಕೂಡ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳಿವೆ.
ಎನ್ಕೌಂಟರ್ ಸರೀನಾ? ತಪ್ಪಾ? ಎನ್ನುವ ಬಗ್ಗೆ 'ವೆಟ್ಟೆಯಾನ್' ಚಿತ್ರದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಒಂದು ಹತ್ಯೆ ಬಳಿಕ ನಡೆಯುವ ಎನ್ಕೌಂಟರ್ ಸುತ್ತಾ ಇಡೀ ಸಿನಿಮಾ ಕಥ ಸುತ್ತುತ್ತದೆ. ಚಿತ್ರದಲ್ಲಿ ಎಸ್ಪಿ ಅಥಿಯಾನ್ IPS ಆಗಿ ರಜನಿಕಾಂತ್ ಅಬ್ಬರಿಸಿದ್ದಾರೆ. NAT ಅಕಾಡೆಮಿ ಎನ್ನುವ ಕೋಚಿಂಗ್ ಸೆಂಟರ್ ನಡೆಸುವ ಉದ್ಯಮಿ ನಟರಾಜ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಸೆಕೆಂಡ್ ಹಾಫ್ ಬಳಿಕ ರಾಣಾ ಎಂಟ್ರಿ ಆಗುತ್ತದೆ.

ಹಣ, ಅಧಿಕಾರ, ಪೊಲಿಟಿಕಲ್ ಪವರ್ ಇರುವವರು ವ್ಯವಸ್ಥೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಅಮಾಯಕರನ್ನು ಸಿಲುಕಿಸಿ ತಾವು ಅಪರಾಧ ಪ್ರಕರಣಗಳಲ್ಲಿ ತಪ್ಪಿಸಿಕೊಳ್ಳುತ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಖ್ಯಾತ ಉದ್ಯಮಿ ನಟರಾಜ್ನನ್ನು ಅಥಿಯಾನ್ ಬಂಧಿಸುವುದು ಅಷ್ಟು ಸುಲಭವಾಗುವುದಿಲ್ಲ. ಆತನ ಅಪರಾಧವನ್ನು ಸಾಬೀತು ಮಾಡುವುದು ಪೊಲೀಸರಿಗೆ ಬಹಳ ಕಷ್ಟವಾಗುತ್ತದೆ. ಪ್ರಬಲ ವ್ಯಕ್ತಿಗಳನ್ನು ಬಂಧಿಸುವುದು ಎಷ್ಟು ಕಷ್ಟ? ಅವರು ತಪ್ಪಿಸಿಕೊಳ್ಳಲು ಹೇಗೆಲ್ಲಾ ಪ್ರಯತ್ನಿಸುತ್ತಾರೆ ಎನ್ನುವುದನ್ನು ತೋರಿಸಲಾಗಿದೆ.
ನಟರಾಜ್ನನ್ನು ಅಥಿಯಾನ್ ವಶಕ್ಕೆ ಪಡೆದ ಕೆಲವೇ ನಿಮಿಷಗಳಲ್ಲಿ ಬಿಟ್ಟು ಬರಬೇಕಾಗುತ್ತದೆ. ಆ ರೀತಿ ಒತ್ತಡ ಬೀಳುತ್ತದೆ. ಮತ್ತೊಮ್ಮೆ ಕರಾರುವಕ್ಕಾಗಿ ಬೇಲ್ ಪಡೆಯಲು ಸಮಯ ಕೊಡದೇ ಅಥಿಯಾನ್ ಬಂಧಿಸುತ್ತಾನೆ. ಬಳಿಕ ಜಾಮೀನು ಪಡೆಯಲು ನಟರಾಜ್ ಏನೆಲ್ಲಾ ಕಸರತ್ತು ಮಾಡುತ್ತಾನೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ಎಸಿಪಿ ಚಂದನ್ ಸಹ ನಟ ದರ್ಶನ್ ಅವರನ್ನು ಬಂಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪಕ್ಕಾ ಆಧಾರಗಳ ಸಮೇತ ಚಂದನ್ ಅಂದು ಮೈಸೂರಿನ ಹೋಟೆಲ್ಗೆ ತೆರೆಳಿ ದರ್ಶನ್ ಅವರನ್ನು ಬಂಧಿಸಿದ್ದರು. ಯಾರ ಪ್ರಭಾವಕ್ಕೂ ಮಣಿಯದೇ ತಮ್ಮ ಕರ್ತವ್ಯ ನಿಭಾಯಿಸಿದ್ದರು ಎನ್ನುವ ಚರ್ಚೆ ನಡೆದಿತ್ತು. ಇವತ್ತಿಗೂ ದರ್ಶನ್ ಜೈಲಿನಲ್ಲಿದ್ದು ಜಾಮೀನು ಪಡೆಯಲು ವಕೀಲರ ಮೂಲಕ ಕಸರತ್ತು ನಡೆಸುತ್ತಿದ್ದಾರೆ.
ಸೇಮ್ ಟು ಸೇಮ್ ರೇಣುಕಾಸ್ವಾಮಿ ಪ್ರಕರಣದಂತೆ 'ವೆಟ್ಟೆಯಾನ್' ಚಿತ್ರದ ದೃಶ್ಯಗಳು ಇಲ್ಲದೇ ಇದ್ದರೂ ಅದರ ಛಾಯೆ ಇರುವಂತೆ ಕಾಣುತ್ತದೆ. ಚಿತ್ರದಲ್ಲಿ ಕೂಡ ಜಾಮೀನು ಪಡೆಯಲು ಆರೋಪಿ ಪರ ವಕೀಲರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಕೋರ್ಟ್ನಲ್ಲಿ ವಾದ ಮಾಡುವ ಸನ್ನಿವೇಶ ಇದೆ. ಸದ್ಯ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೂತೂಹಲದ ಘಟ್ಟ ತಲುಪಿದೆ. ದರ್ಶನ್ ಪರ ಸಿವಿ ನಾಗೇಶ್ ವಾದ ಮಂಡಿಸಿದ್ದರೆ ಅದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದಾರೆ. ಎರಡು ವಾದವನ್ನು ಆಲಿಸಿ ಅಕ್ಟೋಬರ್ 14ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.
ಸದ್ಯ 'ವೆಟ್ಟೆಯಾನ್' ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸಾಧ್ಯತೆಯಿದೆ. ಮೊದಲ ದಿನ ಭಾರತದಲ್ಲಿ 30 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವ ಅಂದಾಜಿದೆ.


Click it and Unblock the Notifications











