ಪಿಸ್ತೂಲು ತೋರಿಸಿ ಜೀವ ಬೆದರಿಕೆ: ದೂರು ನೀಡಿದ ರಾಜು ತಾಳಿಕೋಟೆ
'ಮನಸಾರೆ' ಸಿನಿಮಾ ಮೂಲಕ ಖ್ಯಾತಿ ಗಳಿಸಿ ಆ ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
''ನನ್ನ ಮೇಲೆ ಸನಾ ಎಂಬುವರ ಸಂಬಂಧಿ ಎಸ್.ಕೆ.ಮೋದಿ ಹಲ್ಲೆ ನಡೆಸಿದ್ದು, ಪಿಸ್ತೂಲು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ'' ಎಂದು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ಮಾಧ್ಯಮಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ತಮ್ಮ ಅಕ್ಕನ ಮಗ ಫಯಾಜ್ ಕರಜಗಿ ಮತ್ತು ಪತ್ನಿ ಸನಾ ಕರಜಗಿ ಅವರ ದಾಂಪತ್ಯದ ಕಲಹದಲ್ಲಿ ರಾಜು ತಾಳಿಕೋಟೆ ಮಧ್ಯ ಪ್ರವೇಶ ಮಾಡಿದ್ದರು. ರಾಜು ತಾಳಿಕೋಟೆ ಹಾಗೂ ಅವರ ಪತ್ನಿ ಪ್ರೇಮ ತಾಳಿಕೋಟೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈಗಾಗಲೇ ಸನಾ ಕರಜಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕೆ ದೂರು ನೀಡಿದ ಬೆನ್ನಲ್ಲೆ ರಾಜು ತಾಳಿಕೋಟೆ ಪ್ರತಿದೂರು ನೀಡಿದ್ದಾರೆ.

ರಾಜು ತಾಳಿಕೋಟೆ ಹೇಳಿರುವ ಪ್ರಕಾರ, ''ಸನಾ ಹಾಗೂ ಎಸ್ಕೆ ಮೋದಿ ಬಡುವೆ ಸಂಬಂಧವಿತ್ತು. ಅದು ಹೇಗೋ ಆಕೆಯ ಗಂಡನಿಗೆ ಗೊತ್ತಾಗಿ ಆಕೆಗೆ ವಿಚ್ಛೇಧನ ನೀಡುತ್ತೇನೆಂದು ಪಟ್ಟು ಹಿಡಿದಿದ್ದ, ಆಗ ಆಕೆ ವಿಷ ಕುಡಿದಳು, ವಿಷ ಕುಡಿದಾಗ ಆಸ್ಪತ್ರೆಯಲ್ಲಿ ಕೊಡುವ ಮತ್ತಿನ ಔಷಧದಿಂದಾಗಿ ಆಕೆ ತಾನು ಮಾಡಿದ ಮೋಸವನ್ನೆಲ್ಲ ಗಂಡನ ಎದುರಿಗೆ ಹೇಳಿದರು. ಅದನ್ನು ರೆಕಾರ್ಡ್ ಮಾಡಿಕೊಂಡ ಫಯಾಜ್ ಆಕೆಯನ್ನು ದೂರ ಇಟ್ಟಿದ್ದ'' ಎಂದು ವಿವರಿಸಿದರು.
''ನಾನು ಮುಂದೆ ನಿಂತು ಇಬ್ಬರಿಗೂ ಬುದ್ಧಿ ಹೇಳಿ ಹೀಗೆ ಮಾಡಬಾರದು ಎಂದು ಹೇಳಲು ಹೊರಟೆ ಆದರೆ ಆ ಎಸ್.ಕೆ.ಮೋದಿ ರೌಡಿಸಂ ಮಾಡುತ್ತಾನೆ. ಕೆಲವರು ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಾನೆ. ಅವನು ಪಿಸ್ತೂಲು ತೋರಿಸಿ ನನಗೆ ಬೆದರಿಕೆ ಹಾಕಿದ ಅಲ್ಲದೆ ಹಲ್ಲೆಯನ್ನೂ ಮಾಡಿದ್ದಾನೆ'' ಎಂದು ಹೇಳಿದ್ದಾರೆ. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿಯೂ ಹೇಳಿದ್ದಾರೆ ರಾಜು ತಾಳಿಕೋಟೆ.
ಬೆಳಿಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸನಾ ಕರಜಗಿ, ''ರಾಜು ತಾಳಿಕೋಟೆ ಮನೆಯವರು ನನ್ನ ಮೇಲೆ ಹಲ್ಲೆ ಮಾಡಿದರು. ಬಹಳ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದರು. ರಾಜು ತಾಳಿಕೋಟೆ ಪತ್ನಿ ಪ್ರೇಮ ತಾಳಿಕೋಟೆ ನನಗೆ ಬಲವಂತದಿಂದ ವಿಷ ಕುಡಿಸಿದರು. ನನ್ನನ್ನು ಸಾಯಿಸಲು ಯತ್ನಿಸಿದರು. ನನ್ನ ಮಕ್ಕಳನ್ನೂ ಹಿಂಸಿಸಿದರು'' ಎಂದು ಆರೋಪ ಮಾಡಿದ್ದಾರೆ. ರಾಜು ತಾಳಿಕೋಟೆ, ಪ್ರೇಮ ತಾಳಿಕೋಟೆ ವಿರುದ್ಧ ದೂರನ್ನೂ ನೀಡಿದ್ದಾರೆ ಸನಾ ಕರಜಗಿ.


Click it and Unblock the Notifications











