ರಾಖಿ ಕಟ್ಟಿಸಿಕೊಂಡು ಪ್ರೀತಿ ಹಂಚಿದ ನಟ ದರ್ಶನ್
ನಟ ದರ್ಶನ್ ಮನೆ ಮುಂದೆ ನಿನ್ನೆ ಸಾಲು-ಸಾಲು ಮಹಿಳಾಮಣಿಗಳು. ಎಲ್ಲರ ಕೈಲೂ ರಾಖಿ. ರಕ್ಷಾಬಂಧನ ಪ್ರಯುಕ್ತ ದರ್ಶನ್ ಕೈಗೆ ರಾಖಿ ಕಟ್ಟಲು ಹಲವು ಹೆಣ್ಣುಮಕ್ಕಳು ಮನೆಯ ಬಳಿ ಜಮಾಯಿಸಿದ್ದರು. ಮಹಿಳೆಯರು ಮಾತ್ರವೇ ಅಲ್ಲದೆ ಉತ್ತರ ಕರ್ನಾಟಕದಿಂದ ಸಾಕಷ್ಟು ಅಭಿಮಾನಿಗಳು ಸಹ ಆಗಮಿಸಿದ್ದರು.
ಯಾರನ್ನೂ ಬೇಸರಪಡಿಸದೆ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಬಂದಿದ್ದ ಹೆಂಗೆಳೆಯರಿಂದ ರಾಖಿ ಕಟ್ಟಿಸಿಕೊಂಡು ಅವರಿಗೆ ಸಿಹಿ ತಿನಿಸಿ ಎಲ್ಲರೊಟ್ಟಿಗೆ ಫೊಟೊ ತೆಗೆಸಿಕೊಂಡು ಬೀಳ್ಕೊಟ್ಟಿದ್ದಾರೆ ನಟ ದರ್ಶನ್.
ಉತ್ತರ ಕರ್ನಾಟಕದಿಂದ ಸಾಕಷ್ಟು ದೊಡ್ಡ ಸಂಖ್ಯೆಯ ಅಭಿಮಾನಿಗಳು ದರ್ಶನ್ ಅವರನ್ನು ಕಾಣಲು ನಿನ್ನೆ ಬಂದಿದ್ದರು. ದೊಡ್ಡ ಹೂವಿನ ಹಾರಗಳು, ಬೊಕೆ, ಕೇಕ್ಗಳು, ಕಟ್ಟಲು ರಾಖಿ ಹಿಡಿದು ಸಾಲಿನಲ್ಲಿ ನಿಂತು ದರ್ಶನ್ ಭೇಟಿಗೆ ಕಾಯುತ್ತಿದ್ದರು.
ಮಹಿಳೆಯರು ದರ್ಶನ್ಗೆ ಆರತಿ ಬೆಳಗಿ ರಾಖಿ ಕಟ್ಟುತ್ತಿರುವ ಹಲವು ಚಿತ್ರಗಳನ್ನು ಅವರ ಅಭಿಮಾನಿಗಳು ತಮ್ಮ ಪೇಜ್ಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳು ಸಖತ್ ವೈರಲ್ ಸಹ ಆಗಿವೆ.
ಕಳೆದ ಹತ್ತು ವರ್ಷಗಳಿಂದ ನಟ ದರ್ಶನ್ಗೆ ರಾಖಿ ಕಟ್ಟುತ್ತಿರುವ ಕವಿತಾ ಸಹ ದರ್ಶನ್ ನಿವಾಸಕ್ಕೆ ಭೇಟಿ ನೀಡಿ ರಾಖಿ ಕಟ್ಟಿದರು. ರಾಮನಗರ ನಿವಾಸಿಯಾಗಿರುವ ಕವಿತಾ ಕಳೆದ ಹತ್ತು ವರ್ಷಗಳಿಂದ ಒಂದು ವರ್ಷವೂ ತಪ್ಪಿಸದೆ ನಟ ದರ್ಶನ್ಗೆ ರಾಖಿ ಕಟ್ಟುತ್ತಿದ್ದಾರೆ.

ಹಲವು ಮಹಿಳೆಯರು ಪ್ರತಿವರ್ಷ ರಾಖಿ ಕಟ್ಟುತ್ತಾರೆ
ಕವಿತಾ ಮಾತ್ರವೇ ಅಲ್ಲದೆ ಹಲವಾರು ಹೆಣ್ಣುಮಕ್ಕಳು ಪ್ರತಿವರ್ಷವೂ ರಕ್ಷಾಬಂಧನದಂದು ನಟ ದರ್ಶನ್ಗೆ ಆರತಿ ಮಾಡಿ ರಾಖಿ ಕಟ್ಟಿ, ಸಿಹಿ ತಿನ್ನಿಸುತ್ತಾ ಬಂದಿದ್ದಾರೆ. ದರ್ಶನ್ ಸಹ ಅವರಿಗೆ ಸೂಕ್ತ ಉಡುಗೊರೆ ನೀಡಿ ಪ್ರೀತಿ ಪೂರ್ವಕವಾಗಿ ಹಾರೈಸಿ ಕಳಿಸುತ್ತಾರೆ.

ಪ್ರತಿವರ್ಷವೂ ರಕ್ಷಾಬಂಧನದಂದು ಜನ ಜಾತ್ರೆ
ಪ್ರತಿ ವರ್ಷವೂ ರಕ್ಷಾ ಬಂಧನದಂದು ದರ್ಶನ್ ಮನೆ ಮುಂದೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸಾಲುಗಟ್ಟುತ್ತಾರೆ. ಅಂದು ಎಲ್ಲ ಕೆಲವಗಳನ್ನು ಬದಿಗೆ ಸರಿಸಿ ತಮ್ಮನ್ನು ಕಾಣಲು ಬಂದ ಮಹಿಳಾ ಅಭಿಮಾನಿಗಳನ್ನು ಮಾತನಾಡಿಸಿ, ಅವರಿಂದ ರಾಖಿ ಕಟ್ಟಿಸಿಕೊಂಡು, ಚಿತ್ರ ತೆಗೆಸಿಕೊಂಡು ಬೀಳ್ಕೊಡುತ್ತಾರೆ ನಟ ದರ್ಶನ್.

ಚಿತ್ರರಂಗದಲ್ಲೂ ಸೋದರಿ ಸಮಾನರಿದ್ದಾರೆ
ನಟ ದರ್ಶನ್ಗೆ ಚಿತ್ರರಂಗದಲ್ಲೂ ಸಾಕಷ್ಟು ಗೆಳೆಯರು, ಸಹೋದರಿ ಸಮಾನರು ಇದ್ದಾರೆ. ನಿರ್ಮಾಪಕ ರಮೇಶ್ ಮಗಳು, ನಿರ್ಮಾಪಕ ಚೇತನ್ ರಾಜ್ ಪತ್ನಿ ಸಹ ದರ್ಶನ್ಗೆ ಸಹೋದರಿ ಸಮಾನರು. ಈ ಇಬ್ಬರ ನಡುವೆ ಬಹಳ ಆತ್ಮೀಯ ಬಂಧವಿದೆ. ದರ್ಶನ್ ಹಾಗೂ ರಮೇಶ್ ಮಗಳು ಒಟ್ಟಿಗೆ ಊಟ ಮಾಡುತ್ತಿರುವ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅವರು ಮಾತ್ರವೇ ಅಲ್ಲದೆ ನಟಿ ಅಮೂಲ್ಯ ಸಹ ದರ್ಶನ್ಗೆ ಸಹೋದರಿ ಸಮಾನರು. ಅವರೊಟ್ಟಿಗೂ ಬಹಳ ಒಳ್ಳೆಯ ಬಾಂಧವ್ಯವನ್ನು ದರ್ಶನ್ ಹೊಂದಿದ್ದಾರೆ.

ದರ್ಶನ್ ನಟಿಸುತ್ತಿರುವ ಸಿನಿಮಾಗಳು
ನಟ ದರ್ಶನ್ ಇದೀಗ 'ರಾಜ ವೀರ ಮದಕರಿ ನಾಯಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಆ ಸಿನಿಮಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆ ಸಿನಿಮಾದ ಬಳಿಕ ಶೈಲಜಾ ನಾಗ್-ಬಿ ಸುರೇಶ್ ನಿರ್ಮಾಣದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ದರ್ಶನ್ರ 55ನೇ ಸಿನಿಮಾ ಇದಾಗಲಿದ್ದು ಈ ಸಿನಿಮಾವನ್ನು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ನಿರ್ದೇಶನ ಮಾಡಲಿದ್ದಾರೆ. ದರ್ಶನ್ ನಟನೆಯ 'ಯಜಮಾನ' ಸಿನಿಮಾವನ್ನು ಇದೇ ನಿರ್ಮಾಪಕರು ನಿರ್ಮಿಸಿ, ವಿ.ಹರಿಕೃಷ್ಣ ಅವರೇ ನಿರ್ದೇಶನ ಮಾಡಿದ್ದರು. ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ದೊಡ್ಡ ಹಿಟ್ ಆಗಿದೆ. ಆದರೆ ಆ ನಂತರ ಎದ್ದ ವಿವಾದಗಳಿಂದಾಗಿ ನಟ ದರ್ಶನ್ ಸಿನಿಮಾ ಚಿತ್ರೀಕರಣಗಳಲ್ಲಿ, ಕತೆ ಕೇಳುವ ಕಾರ್ಯದಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ.


Click it and Unblock the Notifications











