ರಕ್ಷಿತ್ ಶೆಟ್ಟಿ ಘೋಷಿಸಿದ್ದಾಯ್ತು: ಕನ್ನಡದಲ್ಲಿ ಬರಲಿದೆ 'RRR'
ರಾಮ್ ಚರಣ್ ತೇಜ, ರಾಜಮೌಳಿ ಹಾಗೂ ಜೂ ಎನ್ಟಿಆರ್ ಮೂವರು ಸೇರಿ ಮಾಡಿದ RRR ಸಿನಿಮಾ ದಾಖಲೆಗಳನ್ನು ಸೃಷ್ಟಿಸಿದೆ. ವೈಭವಪೂರ್ಣ, ಆಕ್ಷನ್ ಹಾಗೂ ಹಲವು ಎಮೋಷನ್ಗಳನ್ನು ಹೊಂದಿದ್ದ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡಿದ್ದಾರೆ.
ಯಾವ ನಿರ್ದೇಶಕನಾದರೂ ಇಂಥಹದ್ದೊಂದು ಸಿನಿಮಾ ಮಾಡಬೇಕು ಎಂದುಕೊಳ್ಳುವಂತೆ RRR ಸಿನಿಮಾ ಮೂಡಿಬಂದಿದೆ. ಅಂತೆಯೇ ಇದೀಗ ತೆಲುಗಿನ RRR ಗೆ ಸೆಡ್ಡು ಹೊಡೆವಂತೆ ಕನ್ನಡದಲ್ಲಿ ಒಂದು RRR ಬರುತ್ತಿದೆ!
ಹೌದು, ಕನ್ನಡದಲ್ಲಿಯೂ ಒಂದು RRR ಸಿನಿಮಾ ತೆರೆಗೆ ಬರುತ್ತಿದೆ. ಇದು ಗಾಳಿ ಸುದ್ದಿಯಲ್ಲ ನಿಜ. ಕನ್ನಡದಲ್ಲಿ RRR ಸಿನಿಮಾ ಘೋಷಣೆ ಮಾಡಿರುವುದು ಪ್ರತಿಭಾವಂತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ!
'777 ಚಾರ್ಲಿ' ಗೆದ್ದಿರುವ ಖುಷಿಯಲ್ಲಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ರಕ್ಷಿತ್ ಶೆಟ್ಟಿಗೆ ಕನ್ನಡದಲ್ಲಿ RRR ಯಾವಾಗ ಬರಲಿದೆ? ಎಂದು ಸಂದರ್ಶಕ ಕೇಳಿದ್ದಾರೆ. ಕನ್ನಡದ RRR ಎಂದರೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸುವುದು ಯಾವಾಗ ಎಂಬುದು ಅವರ ಪ್ರಶ್ನೆ. ಅದಕ್ಕೆ ಉತ್ತರಿಸಿರುವ ರಕ್ಷಿತ್ ಶೆಟ್ಟಿ ಖಂಡಿತ ಬರುತ್ತದೆ. ನನ್ನ ಬಳಿ ಈಗಾಗಲೇ ಒಂದು ಚಿತ್ರಕತೆ ಇದೆ. ಅದನ್ನು ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂದಿದ್ದಾರೆ.

ಪುಣ್ಯಕೋಟಿ ಸಿನಿಮಾಕ್ಕೆ ಮುಂಚೆ ಬರಲಿದೆ: ರಕ್ಷಿತ್
''ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ನಾನು ಹಾಗೂ ಪ್ರಮೋದ್ ಶೆಟ್ಟಿ ಒಟ್ಟಿಗೆ ನಟಿಸಬಹುದಾದ ಸಿನಿಮಾದ ಚಿತ್ರಕತೆ ನಾನೀಗಾಲೇ ಬರೆದುಕೊಂಡಿದ್ದೇನೆ. ಆ ಸಿನಿಮಾವನ್ನು ಚಿತ್ರೀಕರಣ ಮಾಡುವ ಯೋಚನೆ ಇದೆ. 'ಪುಣ್ಯಕೋಟಿ' ಸಿನಿಮಾದ ಹಿಂದೆ ಅಥವಾ ಮುಂದೆ ಆ ಸಿನಿಮಾ ತೆರೆಗೆ ಬರಲಿದೆ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಮುಂದುವರೆದು, ಅಷ್ಟರಲ್ಲಿ ರಾಜ್ ಏನಾದರೂ ಚಿತ್ರಕತೆ ಬರೆದರೆ ನಾನು ನಟಿಸಲು ತಯಾರಿದ್ದೀನಿ'' ಎಂದಿದ್ದಾರೆ.

ತಮಾಷೆ ಮಾಡಿದ ರಾಜ್ ಬಿ ಶೆಟ್ಟಿ
ರಕ್ಷಿತ್ ಶೆಟ್ಟಿಯ ಮಾತಿಗೆ ತಮಾಷೆ ಮಾಡಿದ ರಾಜ್ ಬಿ ಶೆಟ್ಟಿ, ''ಏನೋ ಬಾರಿ ಫ್ರೀ ಇರುವ ಹಾಗೆ ಹೇಳ್ತಾರೆ. ನಾಳೆ ನಾನು ಸ್ಕ್ರಿಪ್ಟ್ ಬರೀತೀನಿ ನಾಡಿದ್ದು ಇವರು ಆಕ್ಟ್ ಮಾಡ್ತಾರಾ ಕೇಳಿ. ಸುಮ್ಮನೆ ನಟಿಸ್ತೀನಿ ಅಂತ ಹೇಳ್ತಾರೆ ಆದರೆ ಇವರ ಬಳಿ ಡೇಟ್ಸ್ ಇರಬೇಕಲ್ಲ. ಈಗ '777 ಚಾರ್ಲಿ ಮುಗಿದಿದೆ. ಇದರ ಬಳಿಕ 'ಸಪ್ತಸಾಗರದಾಚೆ ಯೆಲ್ಲೊ', 'ರಿಚರ್ಡ್ ಆಂಟೊನಿ' ಅಂತೆ ಅದಾದ ಬಳಿಕ 'ಕಿರಿಕ್ ಪಾರ್ಟಿ 2' ಅದರ ಬಳಿಕ 'ಪುಣ್ಯಕೋಟಿ' ಅಂತೆ ಇದೆಲ್ಲ ಮುಗಿವ ವೇಳೆಗೆ ನನಗೆ 60 ವರ್ಷ ವಯಸ್ಸಾಗಿರ್ತದೆ ಅಷ್ಟೆ'' ಎಂದು ತಮಾಷೆ ಮಾಡಿದ್ದಾರೆ ರಾಜ್.

ಮೊದಲು RRR ಮಾಡುವುದು ಯಾರು?
ಹಾಗಿದ್ದರೆ ಇಬ್ಬರಲ್ಲಿ ಮೊದಲು RRR ಯಾರು ಮಾಡ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ಖಂಡಿತ ನಾನೇ ಮಾಡ್ತೀನಿ ಎಂದರು. ಆದರೆ ಇದನ್ನು ಒಪ್ಪದ ರಾಜ್ ಬಿ ಶೆಟ್ಟಿ, ಅವರೊಬ್ಬರು ಇದ್ದಾರಲ್ಲ, ರಿಷಬ್ ಶೆಟ್ಟಿ ಅವರನ್ನು ಕೇಳಿದರೆ ನಾನೇ ಮೊದಲು RRR ಮಾಡ್ತೀನಿ ಅಂತಾರೆ. ಅವರು ಯಾವುದನ್ನು ಕೇಳಿದರೂ ನಾನೇ ಮೊದಲು ಮಾಡ್ತೀನಿ ಅಂತಾರೆ. ನಾನು ಹಾಗಲ್ಲ ನೀವು ಯಾರಾದರೂ ಮಾಡಿ ನಾನು ಮಧ್ಯದಲ್ಲಿ ಇರ್ತೀನಿ ಎಂದು ಹೇಳ್ತೇನೆ ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ಮೂವರು ಸಹ ಬ್ಯುಸಿಯಾಗಿದ್ದಾರೆ
ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಮೂವರು ಕನ್ನಡ ಚಿತ್ರರಂಗದ ಓಡುವ ಕುದುರೆಗಳಾಗಿದ್ದಾರೆ. ಮೂವರು ಸಹ ಭಿನ್ನವಾದ, ಕಂಟೆಂಟ್ ಆಧರಿತ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿಯ 'ಕಾಂತಾರ' ಬಿಡುಗಡೆಗೆ ತಯಾರಾಗಿದೆ. ಆ ನಂತರ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ರಾಜ್ ಬಿ ಶೆಟ್ಟಿ 'ಗರಡು ಗಮನ ವೃಷಭ ವಾಹನ' ಸಿನಿಮಾ ಮುಗಿಸಿದ್ದು, ಮುಂದಿನ ಸಿನಿಮಾ ಇನ್ನಷ್ಟೆ ಘೋಷಿಸಬೇಕಿದೆ. ಇನ್ನು ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೊನಿ' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಬಳಿಕ 'ಪುಣ್ಯಕೋಟಿ' ಸಿನಿಮಾ ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











