ಕೊನೆಗೂ 'ಕಾಂತಾರ'- 1 ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ; ಸ್ನೇಹಿತನ ಸಿನಿಮಾ ಬಗ್ಗೆ ಮಾತು
ಸ್ಯಾಂಡಲ್ವುಡ್ನಲ್ಲಿ ಈಗ ಶೆಟ್ರ ಕಾರುಬಾರು ಜೋರಾಗಿದೆ. ರಾಜ್ ಬಿ. ಶೆಟ್ಟಿ ನಿರ್ಮಿಸಿ ನಟಿಸಿದ್ದ 'ಸು ಫ್ರಮ್ ಸೋ' ಚಿತ್ರದ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಇದೀಗ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ- 1' ಆರ್ಭಟ ಜೋರಾಗಿದೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ ಮೌನಕ್ಕೆ ಜಾರಿದ್ದಾರೆ.
ರಿಷಬ್, ರಾಜ್ ಬಿ ಶೆಟ್ಟಿಗಿಂತ ಬೇಗ ನೇಮು, ಫೇಮು ಸಂಪಾದಿಸಿದವರು ರಕ್ಷಿತ್ ಶೆಟ್ಟಿ. ಸದ್ಯ 'ರಿಚರ್ಡ್ ಆಂಟನಿ' ಸಿನಿಮಾ ಕೆಲಸಗಳಲ್ಲಿ ಮುಳುಗಿದ್ದಾರೆ. ಆದಷ್ಟು ಬೇಗ ಸಿನಿಮಾ ಮಾಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಕನ್ನಡ ಚಿತ್ರರಂಗ 'RRR' ಎಂದೇ ಇವರು ಮೂವರನ್ನು ಕರೆಯುತ್ತಾರೆ. ರಾಜ್, ರಿಷಬ್ ಸರದಿ ಆಯ್ತು. ರಕ್ಷಿತ್ ಶೆಟ್ಟಿ ಬಂದು ಯಾವಾಗ ಬ್ಲಾಕ್ಬಸ್ಟರ್ ಕೊಡುವುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

'ಕಾಂತಾರ -1' ಚಿತ್ರದ ಬಗ್ಗೆ ಪರಭಾಷಾ ಪ್ರೇಕ್ಷಕರು, ಸ್ಟಾರ್ ಫಿಲ್ಮ್ ಮೇಕರ್ಸ್ ಮಾತನಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಪ್ರತಿಭೆಗೆ ಬಹುಪರಾಕ್ ಎನ್ನುತ್ತಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ ಇನ್ನು ಸಿನಿಮಾ ನೋಡಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಕಾಂತಾರ' ಸಿನಿಮಾ ನೋಡಿ ಓಡಿ ಬಂದು ರಿಷಬ್ ಶೆಟ್ಟಿಯನ್ನು ರಕ್ಷಿತ್ ಅಪ್ಪಿಕೊಂಡಿದ್ದು ಅಭಿಮಾನಿಗಳು ಮರೆತ್ತಿಲ್ಲ. ಆದರೆ ಈ ಬಾರಿ ಸುಳಿವೇ ಇಲ್ಲ ಎಂದು ಕೆಲವರು ಕೇಳುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿದ '777 ಚಾರ್ಲಿ' ಚಿತ್ರಕ್ಕೆ 4 ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ. ಅತ್ಯುತ್ತಮ ನಟ ಪ್ರಶಸ್ತಿ ರಕ್ಷಿತ್ ಶೆಟ್ಟಿ ಮುಡಿಗೇರಿದೆ. ಇದೇ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಸ್ನೇಹಿತನಿಗೆ ಅಭಿನಂದನೆ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ.
"ಅತ್ಯುತ್ತಮ ನಟನಿಗೆ ರಾಜ್ಯ ಸರ್ಕಾರದಿಂದ ಗೌರವ. ಅಭಿನಂದನೆ ಮಗಾ" ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿ "ಥ್ಯಾಂಕ್ಸ್ ಮಗಾ. ಕಾಂತಾರ- 1 ಚಿತ್ರದ ಅದ್ಭುತ ಯಶಸ್ಸಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ಬರೆದುಕೊಂಡಿದ್ದಾರೆ. ಇದು ಸಖತ್ ವೈರಲ್ ಆಗುತ್ತಿದೆ. ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಇಬ್ಬರೂ ಚಿತ್ರರಂಗಕ್ಕೆ ಬಂದವರು. ಒಬ್ಬರ ಬೆನ್ನಿಗೆ ಒಬ್ಬರು ನಿಂತವರು. ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಿದ್ದಾರೆ.
ಇನ್ನು '777 ಚಾರ್ಲಿ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕ ಬಗ್ಗೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ "ಕೃತಜ್ಞತೆ ಮತ್ತು ವಿನಮ್ರ ಭಾವನೆ. 777 ಚಾರ್ಲಿ 4 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದೆ.. 2ನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಗೀತರಚನೆಕಾರ. ತೀರ್ಪುಗಾರರಿಗೆ, ನಮ್ಮ ಅದ್ಭುತ ಪ್ರೇಕ್ಷಕರಿಗೆ ಮತ್ತು ಈ ಅದ್ಭುತ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿರ್ದೇಶಕ ಕಿರಣ್ ರಾಜ್ ವಿಷನ್, ಪ್ರತೀಕ್ ಒಳ್ಳೆ ಸಂಕಲನ, ಹೃದಯ ಮುಟ್ಟಿದ ನಾಗಾರ್ಜುನ ಶರ್ಮಾ ಸಾಹಿತ್ಯ ಮರೆಯುವಂತಿಲ್ಲ" ಎಂದು ಬರೆದುಕೊಂಡಿದ್ದಾರೆ.
2021ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಕನ್ನಡ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಸರ್ಕಾರ ಪ್ರಶಸ್ತಿಗಳನ್ನು ಘೋಷಿಸಿದೆ. 'ಮ್ಯೂಟ್' ಚಿತ್ರದ ನಟನೆಗಾಗಿ ಅರ್ಚನಾ ಜೋಯಿಸ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಆ ವರ್ಷ ಕಡಿಮೆ ಸಂಖ್ಯೆಯ ಚಿತ್ರಗಳು ಬಿಡುಗಡೆ ಆಗಿತ್ತು. 58 ಚಿತ್ರಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು.
'ದೊಡ್ಡಹಟ್ಟಿ ಬೋರೇಗೌಡ' ಚಿತ್ರಕ್ಕೆ ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. 'ರತ್ನನ್ ಪ್ರಪಂಚ' ಚಿತ್ರದ ನಟನೆಗಾಗಿ ಉಮಾಶ್ರೀಗೆ ಅತ್ಯುತ್ತಮ ಪೋಷಕ ನಟಿ, ಪ್ರಮೋದ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಘೋಷಣೆಯಾಗಿದೆ.


Click it and Unblock the Notifications











