Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಧತ್ವವನ್ನು ಮೆಟ್ಟಿ ನಿಂತ ಸಾಧಕಿಗೆ ವಿಡಿಯೋ ಕಾಲ್ ಮೂಲಕ ಶುಭ ಕೋರಿದ ರಕ್ಷಿತ್ ಶೆಟ್ಟಿ
ಆಕೆ ಅಂಧತ್ವಕ್ಕೇ ಸವಾಲು ಹಾಕಿ ಜೀವನದಲ್ಲಿ ಬೆಳಕು ಕಂಡ ದಿಟ್ಟೆ. ಕಣ್ಣು ಕಾಣದಿದ್ದರೂ ಮೂರು ಕಾದಂಬರಿ ಬರೆದ ಛಲದಂಕ ಮಲ್ಲೆ. ದೃಷ್ಟಿ ಹೀನವಾಗಿದ್ದರೂ ಕುಗ್ಗದೆ ಬಗ್ಗದೇ ವಿದೇಶಿ ಕಂಪೆನಿಯೊಂದರಲ್ಲಿ ದುಡಿಯುತ್ತಿರುವ ಸ್ವಾಭಿಮಾನಿ ಹೆಣ್ಣಿನ ಕುಟುಂಬದವರಿಗೆ ಅಗಸ್ಟ್ 14 ಬಹಳ ವಿಶೇಷ ದಿನ. ಯಾಕೆಂದರೆ ಆ ಸಬಲೆಯು ಹುಟ್ಟಿದ ದಿನ. ಆದರೆ ಈ ಸಲದ ಹುಟ್ಟು ಹಬ್ಬ ಮಾತ್ರ ಬಹಳ ವಿಶೇಷವಾಗಿತ್ತು. ಸಿಂಪಲ್ ಸ್ಟಾರ್ನ ಒಂದು ಸಣ್ಣ ಕರೆ ಹುಟ್ಟು ಹಬ್ಬದ ಸಂಭ್ರಮಕ್ಕೇ ಅದ್ಧೂರಿ ವೈಭವ ನೀಡಿತ್ತು.
ಸಾಮಾನ್ಯರಲ್ಲಿ ಅಸಾಮಾನ್ಯವಾಗಿ ಬೆಳೆದು, ಅಂಧತ್ವವನ್ನೇ ವರವೆಂದು ಭಾವಿಸಿ ಸಾಧಿಸಿದ ಆ ಹೆಣ್ಣುಮಗಳ ಹೆಸರೇ ಸೌಮ್ಯ. ನಮ್ಮ ರಾಜ್ಯದ ಕೃಷ್ಣನಗರಿ ಉಡುಪಿ ಜಿಲ್ಲೆಯ ಗುಂಡಿಬೈಲು ನಿವಾಸಿ. ಹಾಗಂತ ಸೌಮ್ಯ ಹುಟ್ಟಿನಿಂದಲೇ ಕುರುಡಳಾದವರಲ್ಲ. ಸ್ನಾತಕೋತ್ತರ ಪದವಿ ಓದುತ್ತಿರುವಾಗ ಸೌಮ್ಯಗೇ ಮ್ಯಾಕ್ಯೂಲರ್ ಡಿ ಜನರೇಷನ್ ಎಂಬ ಕಣ್ಣಿನ ಸಮಸ್ಯೆಗೆ ತುತ್ತಾಗಿ ಕಣ್ಣಿನ ದೃಷ್ಟಿಯೇ ಕಳೆದುಕೊಂಡಿದ್ದಾರೆ.
ಈ ಖಾಯಿಲೆ ತಂದೊಡ್ಡಿರುವ ಸಮಸ್ಯೆ ಎಷ್ಟರ ಮಟ್ಟಿಗೆ ಗಂಭೀರ ಅಂದರೆ ಎದುರು ನಿಂತವರು ಯಾರೂ ಕಾಣೋದಿಲ್ಲ. ಅಕ್ಕಪಕ್ಕದಲ್ಲಿರುವ ವಸ್ತುವೂ ಬಹಳ ಮಂಜು-ಮಂಜಾಗಿ ಕಾಣುತ್ತದೆ. ರಾತ್ರಿ ಸಂಪೂರ್ಣ ಕುರುಡುತನ ಆವರಿಸಿಬಿಡುತ್ತದೆ. ಸಾಧನೆಯ ಹಾದಿಯಲ್ಲಿದ್ದರವರಿಗೆ ಇಷ್ಟು ಸಮಸ್ಯೆ ಸಾಕಲ್ವಾ ಕುಸಿದು ಬೀಳೋಕೆ. ಆದರೆ ಸೌಮ್ಯ ಕುಸಿದು ಬಿದ್ದಿಲ್ಲ. ಈ ಅಪರೂಪದ ಖಾಯಿಲೆಗೆ ಮದ್ದಿಲ್ಲ ಅಂತಾ ಮೂಲೆ ಸೇರಲಿಲ್ಲ. ಜೀವನವೇ ಮುಗಿದು ಹೋಯಿತು ಅಂತಾ ಕುಗ್ಗಿ ಹೋಗಲಿಲ್ಲ. ಸೌಮ್ಯಳ ಒಳಗೆ ಪುಟಿಯುತ್ತಿದ್ದ ಆತ್ಮವಿಶ್ವಾಸ ಹೊಸ ಬಾಳಿನ ಬಾಗಿಲನ್ನೇ ತೆರೆದು ಬಿಟ್ಟಿತ್ತು.
ಮೂರು ಕಾದಂಬರಿ ಬರೆದಿರುವ ಸೌಮ್ಯಾ
ಸಕಲ ಸಮಸ್ಯೆಗಳಿಗೆ ಆತ್ಮವಿಶ್ವಾಸ ಒಂದೇ ಮದ್ದು ಎಂದು ಸೌಮ್ಯ ನಿರೂಪಿಸಿದ್ದಾರೆ. ತನ್ನ ಆಸಕ್ತಿಯ ಕ್ಷೇತ್ರ ಕನ್ನಡ ಸಾಹಿತ್ಯ ಕಡೆಗೆ ಸಂಪೂರ್ಣ ವಾಲಿಕೊಳ್ಳುತ್ತಾರೆ. ಸಾಹಿತ್ಯದ ಗುಂಗಿನಲ್ಲೇ ಬದುಕಿನ ಯಶಸ್ಸು ಕಂಡ ಸೌಮ್ಯರ ಕೈಯಿಂದ ಮೂರು ಅದ್ಭುತ ಕಾದಂಬರಿಗಳು ಪ್ರಕಟವಾಗಿದೆ. 'ಹಿರಿಮನೆ ಎಸ್ಟೇಟ್', 'ಆಗ ಸಂಜೆಯಾಗಿತ್ತು', 'ಕತ್ತಲೆಯಲ್ಲೊಂದು ಕಿರಣ' ಎಂಬ ಕಾದಂಬರಿಯನ್ನು ಪ್ರಕಟ ಮಾಡಿದ್ದಾರೆ. ಕಣ್ಣು ಕಾಣದಿದ್ದರೂ ಸ್ನೇಹಿತೆಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯದಿಂದ ಮೂರು ಕಾದಂಬರಿ ಸೌಮ್ಯ ಬರೆದಿದ್ದಾರೆ.
ಖಾಸಗಿ ಸಂಸ್ಥೆಯೊಂದಕ್ಕಾಗಿ ಕೆಲಸ ಮಾಡುತ್ತಿದ್ದಾರೆ
ಸೌಮ್ಯ ಅವರಿಗೆ ಅಂಧತ್ವ ಕಾಡುತ್ತಿದ್ದರೂ ವಿದೇಶಿ ಕಂಪೆನಿಯೊಂದಕ್ಕೆ ಪ್ರಾಜೆಕ್ಟ್ ವರ್ಕ್ ನ್ನು ಮನೆಯಲ್ಲಿಯೇ ಮಾಡುತ್ತಿದ್ದಾರೆ. ಅದ್ಭುತ ವಾಕ್ ಚಾತುರ್ಯ ಹೊಂದಿರುವ ಈಕೆ, ಹಲವು ಕಡೆಗಳಿಗೆ ಹೋಗಿ ಜೀವನದ ಸ್ಫೂರ್ತಿ ತುಂಬಿಸುವ ಭಾಷಣ ಮಾಡುತ್ತಾರೆ. ಸಮಸ್ಯೆಗಳಿಂದ ಕುಗ್ಗಿ ಹೋದ ಜೀವಗಳಿಗೆ ಸೌಮ್ಯ ಆತ್ಮವಿಶ್ವಾಸವೆಂಬ ಟಾನಿಕ್ ನೀಡುತ್ತಿದ್ದಾರೆ. ಜೀವನದಲ್ಲಿ ಸೋತೆವು ಎಂದು ಕೊಂಡವರಿಗೆ ತಮ್ಮದೇ ಉದಾಹರಣೆ ಮೂಲಕ ಹೊಸ ಆತ್ಮವಿಶ್ವಾಸವನ್ನು ಸೌಮ್ಯಾ ತುಂಬುತ್ತಾರೆ.
ಉಡುಪಿಗೆ ಬಂದಾಗ ಮನೆಗೆ ಬರುವೆ: ರಕ್ಷಿತ್ ಶೆಟ್ಟಿ
ಇಂತಹ ಅದ್ಭುತ ಸಾಧಕಿಗೆ ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕರೆ ಮಾಡಿದ್ದಾರೆ. ಸಾಧಕಿಯ ಸಾಧನೆ ಗುರುತಿಸಿ ವಿಡಿಯೋ ಕಾಲ್ ಮಾಡಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ. ಮುಂದಿನ ತಿಂಗಳು ಉಡುಪಿಗೆ ಬಂದಾಗ ಮನೆಗೆ ಬಂದು ಭೇಟಿಯಾಗೋದಾಗಿ ಹೇಳಿದ್ದಾರೆ ರಕ್ಷಿತ್ ಶೆಟ್ಟಿ. ಶೆಟ್ರ ಶುಭಾಶಯ ಸೌಮ್ಯರವರಿಗೆ ಡಬಲ್ ಖುಷಿ ತಂದಿದೆ. ರಕ್ಷಿತ್ ಶೆಟ್ಟಿಯವರನ್ನು ಭೇಟಿಯಾದ ಸಂಧರ್ಭದಲ್ಲಿ ತನ್ನ ಕಾದಂಬರಿಯನ್ನು ಸಿನಿಮಾ ಮಾಡುವ ಬಯಕೆಯನ್ನು ಶೆಟ್ರ ಬಳಿ ಕೇಳಿಕೊಳ್ಳಲಿದ್ದಾರಂತೆ ಸೌಮ್ಯಾ.
ಇದಕ್ಕೆ ಹೇಳೊದಾ ಸಿಂಪಲ್ ಸ್ಟಾರ್ ಅಂತಾ
ಒಟ್ಟಿನಲ್ಲಿ ಸುಂದರವಾದ ಜೀವನವನ್ನು ಕುಂಟು ನೆಪಕ್ಕೆ ಹಾಳು ಮಾಡುವವರಿಗೆ ಸೌಮ್ಯ ಮಾದರಿಯಾಗಿದ್ದಾರೆ. ಯಾರೂ ಗುರುತಿಸದ ಸಾಧಕಿಯನ್ನು ಗುರುತಿಸಿ, ಆಕೆಯ ಹುಟ್ಟು ಹಬ್ಬಕ್ಕೆ ವಿಡಿಯೋ ಕಾಲ್ ಮಾಡಿ ಶುಭ ಕೋರಿದ ರಕ್ಷಿತ್ ಶೆಟ್ಟರಿಗೆ ಇದಕ್ಕೇ ಕರೆಯೋದಾ ಸಿಂಪಲ್ ಸ್ಟಾರ್ ಅಂತಾ!