ಪಬ್ಲಿಕ್ ಟಿವಿ ಕಚೇರಿ ಮುಂದೆ ರಕ್ಷಿತ್ ಅಭಿಮಾನಿಗಳಿಂದ ಪ್ರತಿಭಟನೆ
ನಟ ರಕ್ಷಿತ್ ಶೆಟ್ಟಿ ಅವರನ್ನು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಕಚೇರಿ ಎದುರು ಅಭಿಮಾನಿಗಳು ಹಾಗೂ ನಟನ ಬೆಂಬಲಿಗರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಪಬ್ಲಿಕ್ ಟಿವಿ ಸಿನಿಮಾ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿಯ ಸಿನಿಮಾ, ವೈಯಕ್ತಿಕ ವಿಚಾರಗಳ ಬಗ್ಗೆ ಹೀಯಾಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸ್ವತಃ ರಕ್ಷಿತ್ ಶೆಟ್ಟಿ ಪತ್ರದ ಮೂಲಕ ಪಬ್ಲಿಕ್ ಟಿವಿ ವಿರುದ್ಧ ಸಮರ ಸಾರಿದ್ದರು.
ಇದೇ ವಿಚಾರವಾಗಿ ಯಶವಂತಪುರದಲ್ಲಿರುವ ಪಬ್ಲಿಕ್ ಟಿವಿ ಕಚೇರಿ ಬಳಿ ಜಮಾಯಿಸಿದ ಅಭಿಮಾನಿಗಳು, ರಕ್ಷಿತ್ ಆಪ್ತರು ''ಯಾವುದೇ ದಾಖಲೆಗಳಿಲ್ಲದೆ ಒಬ್ಬ ನಟನ ಹೆಸರಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದೀರಾ, ನೀವು ಪ್ರಸಾರ ಮಾಡಿದ ವಿಷಯಕ್ಕೆ ಸೂಕ್ತ ದಾಖಲೆಗಳನ್ನು ಕೊಡಿ'' ಎಂದು ಆಗ್ರಹಿಸಿದರು.
ಪಬ್ಲಿಕ್ ಟಿವಿಗೆ ಪತ್ರದ ಮೂಲಕ ಮನವಿಯೊಂದನ್ನು ನೀಡಿದ್ದಾರೆ.

1 ರಕ್ಷಿತ್ ಶೆಟ್ಟಿ 20 ಕೋಟಿ ರೂಪಾಯಿ ನುಂಗಿದ್ದಾರೆ.
2 ಅವನಿಗೆ ಅಭಿನಯ ಗೊತ್ತಿಲ್ಲ.
3 ಅವರ ವೈಯಕ್ತಿಕ ಜೀವನದ ಬಗ್ಗೆ ನಿಂದನೆ.
4 ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಕಾರ್ಮಿಕರಿಗೆ ದುಡ್ಡ ಕೊಟ್ಟಿಲ್ಲ, ಎನ್ನುವ ಆರೋಪಗಳನ್ನು ಮಾಡಲಾಗಿದೆ. ಈ ವಿಷಯಗಳಿಗೆ ಸೂಕ್ತ ದಾಖಲೆ ಕೊಡಿ ಎಂದು ರಕ್ಷಿತ್ ಶೆಟ್ಟಿ ಬೆಂಬಲಿಗರು ಆಗ್ರಹಿಸಿದರು.
ಈ ವೇಳೆ ಪಬ್ಲಿಕ್ ಟಿವಿ ಸಿಬ್ಬಂದಿ ರಕ್ಷಿತ್ ಬೆಂಬಲಿಗರನ್ನು ಸಮಾಧಾನಪಡಿಸುವ ಕೆಲಸವೂ ಆಯಿತು. ಇದೀಗ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ವಾಹಿನಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ಕಲಾವಿದರು
ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಲಾದ ಕಾರ್ಯಕ್ರಮವನ್ನು ರಕ್ಷಿತ್ ಶೆಟ್ಟಿ ಮಾತ್ರವಲ್ಲದೇ ಹಲವು ಕಲಾವಿದ, ತಂತ್ರಜ್ಞರು ಖಂಡಿಸಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ, ಅನೀಶ್ ತೇಜೇಶ್ವರ್, ಪುಷ್ಕರ್ ಮಲ್ಲಿಕಾರ್ಜುನಯ್ಯ, ಸಿಂಪಲ್ ಸುನಿ ಸೇರಿದಂತೆ ಹಲವು ರಕ್ಷಿತ್ ಪರ ಬೆಂಬಲಕ್ಕೆ ನಿಂತಿದ್ದಾರೆ.


Click it and Unblock the Notifications











