twitter
    For Quick Alerts
    ALLOW NOTIFICATIONS  
    For Daily Alerts

    100 ಬೀದಿ ನಾಯಿಗಳ ಮಾರಣಹೋಮ: ನ್ಯಾಯಕ್ಕಾಗಿ ಬೇಡಿಕೆಯಿಟ್ಟ ಐಂದ್ರಿತಾ, ರಕ್ಷಿತ್ ಶೆಟ್ಟಿ

    |

    ಹಾಸನದಲ್ಲಿ 50ಕ್ಕೂ ಅಧಿಕ ಕೋತಿಗಳನ್ನು ಕೊಲ್ಲಲಾಗಿತ್ತು. ಈಗ 100ಕ್ಕೂ ಹೆಚ್ಚು ಬೀದಿ ನಾಯಿಗಳ ಹತ್ಯೆ ಮಾಡಲಾಗಿದೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ವಿಶೇಷವಾಗಿ ಪ್ರಾಣಿಪ್ರಿಯರು ಕೋತಿ ಮತ್ತು ನಾಯಿಗಳ ಮಾರಣಹೋಮವನ್ನು ತೀವ್ರವಾಗಿ ಟೀಕಿಸಿದ್ದಾರೆ. ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಐಂದ್ರಿತಾ ರೇ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

    ಶಿವಮೊಗ್ಗದ ಭದ್ರಾವತಿ ಬಳಿ 100ಕ್ಕೂ ಹೆಚ್ಚು ನಾಯಿಗಳನ್ನು ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ಕಂಬದಾಳು-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಂಗನಾಥಪುರದಲ್ಲಿ ನಾಯಿಗಳಿಗೆ ವಿಷ ಹಾಕಿ ಕೊಲ್ಲಲಾಗಿದ್ದು, ಬಳಿಕ ಅವುಗಳನ್ನು ಹೂತು ಹಾಕಲಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಕೆಲವು ನಾಯಿಗಳನ್ನು ಜೀವಂತವಾಗಿ ಮಣ್ಣಿನಲ್ಲಿ ಹೂತುಹಾಕಲಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.

    ಭದ್ರಾವತಿಯಲ್ಲಿ ಬೀದಿ ನಾಯಿಗಳ ಹತ್ಯೆ; ದೂರು ದಾಖಲು

    ಗ್ರಾಮದಲ್ಲಿದ್ದ ಬೀದಿನಾಯಿಗಳು ಏಕಾಏಕಿ ಕಣ್ಮರೆಯಾಗಿದ್ದವು. ಗ್ರಾಮಸ್ಥರು ಈ ಕುರಿತು ಶಿವಮೊಗ್ಗದ ಪ್ರಾಣಿ ರಕ್ಷಣಾ ಕ್ಲಬ್‌ಗೆ ಮಾಹಿತಿ ಕೊಟ್ಟಿದ್ದರು. ಕ್ಲಬ್ ಸದಸ್ಯರು ಪೊಲೀಸರು ಮತ್ತು ಪಶು ವೈದ್ಯಾಧಿಕಾರಿಗಳ ಜೊತೆಗೆ ಗ್ರಾಮಕ್ಕೆ ಆಗಮಿಸಿದ್ದರು. ಪರಿಶೀಲನೆ ನಡೆಸಿದಾಗ ಬೀದಿನಾಯಿಗಳನ್ನು ಹೂತುಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಗ್ರಾಮ ಪಂಚಾಯಿತಿ ಅಧಿಕಾರಿಗಳು ನಾಯಿಗಳನ್ನು ಕೊಂದು ಅವುಗಳನ್ನು ಹೂತು ಹಾಕಿದ್ದಾರೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ" ಎಂದು ಹೇಳಿದ್ದಾರೆ.

    Rakshit Shetty Fight for Justice to 100 Street Dogs Killed in Shivamogga

    ನಾಯಿಗಳ ಮಾರಣಹೋಮ ಘಟನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಐಂದ್ರಿತಾ ರೇ, ''ಕಾನೂನಿನ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವುದು ಮತ್ತು ಸ್ಥಳಾಂತರಿಸುವಂತಿಲ್ಲ. ಆದರೂ ಇಂತಹ ಘಟನೆ ಹೇಗೆ ಸಂಭವಿಸಿತು? ಈ ಬಡ ಆತ್ಮಗಳಿಗೆ ನ್ಯಾಯ ಬೇಕಾಗಿದೆ'' ಎಂದು ಆಗ್ರಹಿಸಿದ್ದಾರೆ.

    ಧ್ವನಿಯಿಲ್ಲದ ಈ ಮೂಕಪ್ರಾಣಿಗಳಿಗೆ ಧ್ವನಿಯಾಗಿ ಎಂದು ಚಲನಚಿತ್ರ ನಟ-ನಟಿಯರಿಗೆ ಐಂದ್ರಿತಾ ಮನವಿ ಮಾಡಿದ್ದಾರೆ. ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಮ್ಯಾ, ದಿಗಂತ್, ಪ್ರಿಯಾಂಕಾ ಉಪೇಂದ್ರ, ಸಂಯುಕ್ತ ಹೊರನಾಡು, ಗಣೇಶ್ ಅವರನ್ನು ಟ್ಯಾಗ್ ಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಸಿಎಂ ಬಳಿ ಮನವಿ ಮಾಡಲು ಕೇಳಿಕೊಂಡಿದ್ದಾರೆ.

    ಐಂದ್ರಿತಾ ರೇ ಅವರ ಟ್ವೀಟ್ ಹಿನ್ನೆಲೆ ಸ್ಪಂದಿಸಿರುವ ರಕ್ಷಿತ್ ಶೆಟ್ಟಿ, ''ಇಂತಹ ದುರಂತ ಅಮಾನವೀಯ ಕೃತ್ಯ! ಇದು ಹೇಗೆ ಮತ್ತು ಏಕೆ ನಡೆಯುತ್ತಿದೆ! ನ್ಯಾಯಕ್ಕಾಗಿ ಈ ಹೋರಾಟದಲ್ಲಿ ನಿಮ್ಮೊಂದಿಗೆ ನಿಂತಿದ್ದೇನೆ. ಉದ್ದೇಶಪೂರ್ವಕವಾಗಿ ಮಾಡಿದ ಎಲ್ಲದಕ್ಕೂ ಸರಿಯಾದ ಶಿಕ್ಷೆಯಾಗಬೇಕು ಮತ್ತು ಅಂತಹ ವಿಷಮ ಕಾರ್ಯಗಳು ಪುನರಾವರ್ತನೆಯಾಗುವುದನ್ನು ತಡೆಯಬೇಕು'' ಎಂದು ರಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕಳೆದ ಜುಲೈ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ 50 ಮಂಗಗಳನ್ನು ಹತ್ಯೆ ಮಾಡಲಾಗಿತ್ತು. ಮಂಗಗಳು ಬೆಳೆಗಳನ್ನು ಹಾನಿ ಮಾಡುತ್ತಿವೆ ಎಂದು ದಂಪತಿಗಳು 40 ಸಾವಿರ ರೂ. ನೀಡಿ ಮಂಗಳನ್ನು ಹಿಡಿಯಲು ಸೂಚಿಸಿದ್ದರು. ಚೀಲದಲ್ಲಿ ಮಂಗಗಳನ್ನು ತುಂಬಿ ತಂದು ರಸ್ತೆ ಬದಿಯಲ್ಲಿ ಎಸೆಯಲಾಗಿತ್ತು. ಕೆಲವು ಮಂಗಗಳು ಜೀವಂತವಾಗಿದ್ದವು. ಮಂಗಗಳನ್ನು ಹಿಡಿಯಲು ಸೂಚಿಸಿದ ದಂಪತಿ ಹಾಗೂ ಮಂಗಗಳನ್ನು ಹಿಡಿದ ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಈ ಸಂಬಂಧ ಕರ್ನಾಟಕ ಹೈ ಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿತ್ತು. ಮಂಗಗಳನ್ನು ಹತ್ಯೆ ಮಾಡಿರುವವರ ವಿರುದ್ದ ಅ.ಕ್ರ.ನಂ. 93/21 ರಲ್ಲಿ ಕಲಂ 429 ಐಪಿಸಿ ಜೊತೆಗೆ 11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ರೀತ್ಯಾ ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

    English summary
    Kannada Actor Rakshit Shetty Fight for Justice to 100 Street Dogs Killed in Shivamogga.
    Tuesday, September 14, 2021, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X