'ಬ್ಯಾಚುಲರ್ ಪಾರ್ಟಿ' ಕಾಪಿರೈಟ್ಸ್ ವಿವಾದ; ಬಹಿರಂಗ ಪತ್ರ ಬರೆದು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ
ಸ್ಯಾಂಡಲ್ವುಡ್ನಲ್ಲಿ ಹೊಸದೊಂದು ವಿವಾದ ಶುರುವಾಗಿದೆ. ಅದು ರಕ್ಷಿತ್ ಶೆಟ್ಟ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಕಾಪಿರೈಟ್ಸ್ ವಿವಾದ. ತಮ್ಮ ಅನುಮತಿ ಇಲ್ಲದೇ ಎರಡು ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಂಡಿರುವ ಬಗ್ಗೆ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಎಂಆರ್ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ಈ ವಿಚಾರ ಸಂಬಂಧ ಪರಂವಃ ಸ್ಟುಡಿಯೋಸ್ ಹಾಗೂ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ಯಶವಂತಪುರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ 'ಗಾಳಿಮಾತು' ಚಿತ್ರದ 'ಒಮ್ಮೆ ನಿನ್ನನ್ನು ಕಣ್ತುಂಬ' ಹಾಗೂ 'ನ್ಯಾಯ ಎಲ್ಲಿದೆ' ಚಿತ್ರದ ಹಾಡುಗಳನ್ನು ಬಳಸಿಕೊಂಡಿರುವ ಬಗ್ಗೆ ನವೀನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಮ್ಮ ಅನುಮತಿ ಇಲ್ಲದೇ ನಮ್ಮ ಸಂಸ್ಥೆ ರೈಟ್ಸ್ ಹೊಂದಿರುವ ಹಾಡುಗಳನ್ನು 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಮೊದಲಿಗೆ ಈ ಬಗ್ಗೆ ಚಿತ್ರತಂಡ ನಮ್ಮ ಜೊತೆ ಚರ್ಚಿಸಿತ್ತು. ಆದರೆ ಮಾತುಕತೆ ಯಶಸ್ವಿ ಆಗಿರಲಿಲ್ಲ. ನಗೆ ಗೊತ್ತಿಲ್ಲದೇ ಅನುಮತಿ ಇಲ್ಲದೇ ಚಿತ್ರದಲ್ಲಿ ಹಾಡುಗಳನ್ನು ಬಳಸಿಸಿದ್ದಾರೆ. ಓಟಿಟಿಯಲ್ಲಿ ಸಿನಿಮಾ ನೋಡಿದ ಬಳಿಕ ಇದು ನಮ್ಮ ಗಮನಕ್ಕೆ ಬಂದಿದೆ ಎಂದು ನವೀನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಪ್ರಕರಣದ ಸಂಬಂಧ ಪರಂವಃ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿ ಬಹಿರಂಗ ಪತ್ರ ಬರೆಯಲಾಗಿದೆ. ಇದನ್ನು ರಕ್ಷಿತ್ ಶೆಟ್ಟಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಏನಾಯ್ತು? ಚಿತ್ರದಲ್ಲಿ ಯಾವ ರೀತಿಯಲ್ಲಿ ಆ ಎರಡೂ ಹಾಡುಗಳನ್ನು ಬಳಸಿಕೊಂಡಿದ್ದೇವೆ? ಇದು ಹೇಗೆ ಹಕ್ಕು ಉಲ್ಲಂಘನೆ ಆಗುತ್ತದೆ? ಮುಂದಿನ ತಮ್ಮ ನಡೆಯೇನು? ಎನ್ನುವ ಬಗ್ಗೆ ತಿಳಿಸಿದ್ದಾರೆ.
"ಪ್ರೀತಿಯ ಪ್ರೇಕ್ಷಕರೆ ಹಾಗೂ ಮಾಧ್ಯಮ ಮಿತ್ರರೆ,
ನಾವು ಈ ಬಹಿರಂಗ ಪತ್ರವನ್ನು ಎಂ ಆರ್ ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ ಎರಡು ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ.
ಮೊದಲಿಗೆ ಸ್ಪಷ್ಟಿಕರಿಸಲು, ಚಿತ್ರದಲ್ಲಿ ಬಳಕೆಯಾಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕಾರಣ, ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು, ಹಾಗು ಬಳಕೆಯ ರೂಪವನ್ನು ನಿಮ್ಮ ಗಮನಕ್ಕೆ ತರಲು.
ಬಳಕೆಯ ವಿವರ:
1. ತರಗತಿಯೊಂದಲ್ಲಿ ಶಾಲಾಬಾಲಕಿ "ಒಮ್ಮೆ ನಿನ್ನನ್ನು" ಹಾಡನ್ನು ಸಹಪಾಠಿಗಳ ಮುಂದೆ ಹಾಡುವುದು.
2. ಮನೆಯ ಟಿವಿಯಲ್ಲಿ - "ನ್ಯಾಯ ಎಲ್ಲಿದೆ" ಹಾಡಿನ ಪ್ರಸಾರ.
ಈ ಮುಂಚೆ, ಅಂದರೆ, ಬ್ಯಾಚುಲರ್ ಪಾರ್ಟಿ ಸಿನಿಮ ತೆರೆಕಾಣುವುದಕ್ಕೂ ಮುನ್ನವೆ ನಾವು ಎಂ ಆರ್ ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತು ಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂ ಆರ್ ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರುಮಾತುಕತೆಗೆ ತಯಾರಿರರಿಲ್ಲ. ಈಗ, ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಬಂದಿದ್ದು, ಎಫ್ ಐ ಆರ್ ದಾಖಲಾಗಿದೆ.
ಇದು ನಿಜವಾಗಿಯು ಹಾಡಿನ ಹಕ್ಕು ಉಲ್ಲಂಘನೆಯೆ? ಹೌದಾಗಿದ್ದೇ ಆದಲ್ಲಿ, ನಾವು ತರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂ ಆರ್ ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ, ಈ ತರಹದ ಆರೋಪವನ್ನು ಈಗಾಗಲಿ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು! ಇದೊಂದು ಯಕ್ಷ ಪ್ರಶ್ನೆ! ಇದಕ್ಕೆ ಉತ್ತರ ನಾವು ಹುಡುಕ ಬಯಸುತ್ತೇವೆ.
ಹಾಗಾಗಿ, ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಿಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ. ಇದರಿಂದ ಇನ್ನು ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿನಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು, ನಮ್ಮ ಈ ಪ್ರಾಮಾಣಿಕ ಪ್ರಯತ್ನ" ಎಂದು ಪತ್ರದಲ್ಲಿ ಬರೆಯಲಾಗಿದೆ. ಈ ಮೂಲಕ ಕಾನೂನು ಹೋರಾಟಕ್ಕೆ ಚಿತ್ರತಂಡ ಮುಂದಾಗಿರುವುದಾಗಿ ತಿಳಿಸಿದೆ.


Click it and Unblock the Notifications











