ಸ್ಯಾಂಡಲ್ವುಡ್ ಎಂದರೆ ವಿಚಿತ್ರ ಅಲ್ವಾ ಎಂದ ನಿರೂಪಕನಿಗೆ ರಕ್ಷಿತ್ ಸ್ವೀಟ್ ಟಾಂಗ್!
ರಕ್ಷಿತ್ ಶೆಟ್ಟಿ.. ಕನ್ನಡ ಚಿತ್ರರಂಗ ಕಂಡ ಅತಿ ಅಪರೂಪಕ ಪ್ರತಿಭೆ. ನಟನೆ ಜತೆಗೆ ಅಚ್ಚುಕಟ್ಟಾದ ನಿರ್ದೇಶನ ಬಲ್ಲ ಕಲಾವಿದ. ನಟನೆ ಜತೆಗೆ ನಿರ್ದೇಶನ ಬಲ್ಲ ಹಲವಾರು ಕಲಾವಿದರಿದ್ದರೂ ಇದರಲ್ಲಿ ಯಶಸ್ವಿಯಾಗಿ ಗಟ್ಟಿಯಾಗಿ ನೆಲೆಯೂರಿದ್ದು ಕೆಲವರು ಮಾತ್ರ.
ಅಂತಹ ಕೆಲ ಕಲಾವಿದರಲ್ಲಿ ಒಬ್ಬರು ಈ ರಕ್ಷಿತ್ ಶೆಟ್ಟಿ. ಕರಾವಳಿ ಪ್ರತಿಭೆ ರಕ್ಷಿತ್ ಶೆಟ್ಟಿಗೆ ಅವಕಾಶ ಸಿಕ್ಕಿದ್ದು 2010ರಲ್ಲಿ ತೆರೆಗೆ ಬಂದ ನಮ್ ಏರಿಯಾಲ್ ಒಂದ್ ದಿನ ಎಂಬ ಚಿತ್ರದ ಮೂಲಕ. ಬಳಿಕ 2012ರಲ್ಲಿ ತೆರೆಗೆ ಬಂದ ತುಗಲಕ್ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಪರಿಪೂರ್ಣ ನಾಯಕನಾಗಿ ವೃತ್ತಿ ಜೀವನ ಆರಂಭಿಸಿದರು.

ಮೊದಲೆರಡು ಚಿತ್ರಗಳಲ್ಲಿ ಪಟ್ಟಿದ್ದ ಶ್ರಮಕ್ಕೆ ಬಾರದ ಪ್ರತಿಫಲ ರಕ್ಷಿತ್ ಶೆಟ್ಟಿಗೆ ಸಿಕ್ಕಿದ್ದು 2013ರಲ್ಲಿ ತೆರೆಗೆ ಬಂದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದ ಮೂಲಕ. ಈ ಚಿತ್ರದ ಮೂಲಕ ಯಶಸ್ಸಿನೊಂದಿಗೆ ಖ್ಯಾತಿಯನ್ನು ಪಡೆದುಕೊಂಡ ರಕ್ಷಿತ್ ಶೆಟ್ಟಿ ಕನ್ನಡ ಸಿನಿ ರಸಿಕರ ಮನ ಗೆದ್ದು ನೆಲೆಯೂರಿದರು.
ಬಳಿಕ 2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶಕನ ಕ್ಯಾಪ್ ತೊಟ್ಟು ಉಳಿದವರು ಕಂಡಂತೆ ಎಂಬ ಚಿತ್ರವನ್ನು ನಿರ್ದೇಶಿಸಿದರು. ವಿಭಿನ್ನ ಕಥಾಹಂದರ, ಕಥೆ ಹೇಳುವ ರೀತಿಯನ್ನು ಒಳಗೊಂಡಿದ್ದ ಈ ಚಿತ್ರಕ್ಕೆ ಇಂದಿಗೂ ಸಹ ದೊಡ್ಡಮಟ್ಟದ ಕ್ರೇಜ್ ಇದೆ ಹಾಗೂ ಅಭಿಮಾನಿ ಬಳಗವಿದೆ.
ಹೀಗೆ ನಟನಾಗಿ, ನಿರ್ದೇಶಕನಾಗಿ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ರಕ್ಷಿತ್ ಶೆಟ್ಟಿ ಇದೀಗ ತಮ್ಮ ನಟನೆಯ ಮುಂದಿನ ಚಿತ್ರ 'ಸಪ್ತದಾಗರದಾಚೆ ಎಲ್ಲೋ' ಹಾಗೂ ನಿರ್ದೇಶನದ 'ರಿಚರ್ಡ್ ಆಂಟನಿ' ಚಿತ್ರಗಳಿಗೆ ಸಿನಿ ರಸಿಕರು ಕಾಯುವ ಮಟ್ಟಿಗಿನ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.
ಇಷ್ಟರ ಮಟ್ಟಿಗೆ ಖ್ಯಾತಿ ಪಡೆದುಕೊಂಡಿರುವ ರಕ್ಷಿತ್ ಶೆಟ್ಟಿಗೆ ನಿನ್ನೆ ( ಜೂನ್ 6 ) 40ನೇ ಹುಟ್ಟುಹಬ್ಬದ ಸಂಭ್ರಮ. ರಕ್ಷಿತ್ ಹುಟ್ಟುಹಬ್ಬದ ವಿಶೇಷದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಶುಭಾಶಯದ ಪೋಸ್ಟ್ಗಳು ಹರಿದಾಡಿವೆ.
ಜತೆಗೆ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಬಗ್ಗೆ ನೀಡಿದ ಒಳ್ಳೆಯ ಹೇಳಿಕೆಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಹೀಗೆ ವೈರಲ್ ಆದ ವಿಡಿಯೊ ಪೈಕಿ ಗಲ್ಲಾಟ ಪ್ಲಸ್ ಯುಟ್ಯೂಬ್ ಚಾನೆಲ್ ಜತೆ ಕಳೆದ ವರ್ಷ ನಡೆದಿದ್ದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ನೀಡಿದ ಹೇಳಿಕೆ ಸಹ ಒಂದಾಗಿದೆ.
ಈ ಸಂದರ್ಶನದಲ್ಲಿ ಕನ್ನಡ ಚಿತ್ರರಂಗವನ್ನು ಸ್ಯಾಂಡಲ್ವುಡ್ ಎಂದು ಕರೆಯುವುದರ ಬಗ್ಗೆ ನಿರೂಪಕರು ಮಾತನಾಡಿದ್ದರು. ಕನ್ನಡ ಚಿತ್ರರಂಗವನ್ನು ಸ್ಯಾಂಡಲ್ವುಡ್ ಎಂದು ಕರೆಯುವುದು ಒಂಥರ ಮುಜುಗರ ಎಸಿಸುತ್ತೆ ಅಲ್ವಾ ಎಂದು ಪ್ರಶ್ನೆಯನ್ನು ಕೇಳಿದಾಗ ಉತ್ತರಿಸಿದ ರಕ್ಷಿತ್ ಶೆಟ್ಟಿ "ನನಗೆ ನಿಜ ಹೇಳಬೇಕೆಂದರೆ ಯಾವ ವುಡ್ ಸಹ ಇಷ್ಟವಾಗುವುದಿಲ್ಲ. ಹಾಲಿವುಡ್ ಅಂದ್ರೆ ಹಾಲಿವುಡ್ ಎನ್ನುತ್ತಾರೆ. ನಮ್ಮ ಚಿತ್ರರಂಗಕ್ಕೆ ನಮ್ಮದೇ ಆದ ಸ್ವಂತ ಗುರುತಿಸುವಿಕೆ ಇರಬೇಕು. ಬೇರೆ ಇಂಡಸ್ಟ್ರಿಗಳಿಂದ ಸ್ಪೂರ್ತಿ ಪಡೆದುಕೊಂಡಿರಬಾರದು. ಎಲ್ಲಾ ವುಡ್ಗಳೂ ಹೊಂದಿರುವ ಹೆಸರುಗಳನ್ನು ನೋಡಿದರೆ, ಕನ್ನಡ ಚಿತ್ರರಂಗದ ಹೆಸರೇ ಉತ್ತಮ ಹೆಸರನ್ನು ಹೊಂದಿದೆ ಎಂದು ಹೇಳಬಹುದು. ಏಕೆಂದರೆ ಕರ್ನಾಟಕವೆಂದರೆ ಗಂಧದ ಮರಗಳಿಂದ ಕೂಡಿದ ರಾಜ್ಯ. ಅದನ್ನು ಗಂಧದ ಗುಡಿ ಎಂದೂ ಸಹ ಕರೆಯುತ್ತಾರೆ. ಆದ್ದರಿಂದ ಜನರಿಗೆ ಸ್ಯಾಂಡಡ್ವುಡ್ ಎನ್ನುವುದು ಹತ್ತಿರವಾಗಿದೆ" ಎಂದು ಹೇಳಿಕೆ ನೀಡಿ ಸ್ಯಾಂಡಲ್ವುಡ್ ವಿಚಿತ್ರ ಎಂದ ನಿರೂಪಕನಿಗೆ ಪರೋಕ್ಷವಾಗಿ ಸ್ವೀಟ್ ಟಾಂಗ್ ನೀಡಿದ್ದರು.


Click it and Unblock the Notifications











