ರಕ್ಷಿತ್ ಶೆಟ್ಟಿ ಹಾಗೂ ನನ್ನ ನಡುವೆ ಸಣ್ಣ ಭಿನ್ನಾಭಿಪ್ರಾಯಗಳಿವೆ: ನಟ ಸುದೀಪ್
ಸುದೀಪ್ ಇದೀಗ 'ವಿಕ್ರಾಂತ್ ರೋಣ'ನ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಮೊದಲ ದಿನವೇ ಸಿನಿಮಾ 35 ಕೋಟಿ ಕಲೆಕ್ಷನ್ ಮಾಡಿದ್ದು, ಸುದೀಪ್ ವೃತ್ತಿ ಜೀವನದಲ್ಲಿಯೇ ಇದು ಅತಿದೊಡ್ಡ ಮೊದಲ ದಿನದ ಕಲೆಕ್ಷನ್ ಆಗಿದೆ.
'ವಿಕ್ರಾಂತ್ ರೋಣ' ಸಿನಿಮಾ ಯಶಸ್ಸಿನೆಡೆಗೆ ಸಾಗುತ್ತಿದೆ ಈ ನಡುವೆ ಸುದೀಪ್ ಅವರ ಮುಂದಿನ ಸಿನಿಮಾದ ಬಗ್ಗೆಯೂ ಈಗಿನಿಂದಲೇ ಚರ್ಚೆಗಳು ಶುರುವಾಗಿವೆ.
ಸುದೀಪ್ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡುವಾಗೆಲ್ಲ ರಕ್ಷಿತ್ ಶೆಟ್ಟಿಯ ಚರ್ಚೆ ಖಂಡಿತ ಆಗುತ್ತದೆ. ರಕ್ಷಿತ್ ಶೆಟ್ಟಿ, ಸುದೀಪ್ಗಾಗಿ ತಾವೊಂದು ಸಿನಿಮಾ ಮಾಡುವುದಾಗಿ ಬಹಳ ಹಿಂದೆ ಘೋಷಿಸಿದ್ದರು. ಆದರೆ ಯಾಕೋ ಏನೋ ಆ ಸಿನಿಮಾ ಶುರುವಾಗಲೇ ಇಲ್ಲ. ಆ ಬಗ್ಗೆ ಇದೀಗ ಮಾತನಾಡಿರುವ ಸುದೀಪ್, ಸಿನಿಮಾ ವಿಷಯವಾಗಿ ರಕ್ಷಿತ್ ಶೆಟ್ಟಿ ತಮ್ಮೊಂದಿಗೆ ಜಗಳವಾಡಿದ್ದಾಗಿಯೂ ಹೇಳಿದ್ದಾರೆ.
ಹಿಂದಿ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುದೀಪ್, ''ರಕ್ಷಿತ್ ಶೆಟ್ಟಿ ಬಹಳ ಒಳ್ಳೆಯ ಹುಡುಗ. ಸಿನಿಮಾ ಕುರಿತಂತೆ ನನ್ನ ಜೊತೆ ಕೆಲವು ಅಸಮಾಧಾನಗಳು ಅವರಿಗಿವೆ (ಕೋಲ್ಡ್ ಫೈಟ್) ಆದರೆ ಆತ ಅದನ್ನು ತೋರಿಸಿಕೊಳ್ಳುವುದಿಲ್ಲ. ನನಗೂ ಕೆಲವು ಅಭಿಪ್ರಾಯ ಬೇಧಗಳಿವೆ. ನನಗೆ ಅವರ ಬರವಣಿಗೆ ಬಗ್ಗೆ ಹೆಮ್ಮೆ ಇದೆ, '777 ಚಾರ್ಲಿ' ಸಿನಿಮಾದ ಬಳಿಕ ಅವರ ನಟನೆಯ ಬಗ್ಗೆಯೂ ಖುಷಿ ಎನಿಸುತ್ತದೆ'' ಎಂದು ಹೊಗಳಿದ್ದಾರೆ ನಟ ಸುದೀಪ್.

''ಸಮಯ ಬಂದಾಗ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಆಗುತ್ತದೆ''
''ಅವರಿಗೆ ಕತೆ ಹೇಳುವ ದೊಡ್ಡ ಬಯಕೆ ಇದೆ. ಒಳ್ಳೆ-ಒಳ್ಳೆ ಕತೆಗಳನ್ನು ಹೇಳಲು ಕಾತರರಾಗಿದ್ದಾರೆ. ಒಂದು ಸಿನಿಮಾ ಮುಗಿದ ಕೂಡಲೇ ಇನ್ನೊಂದು ಸಿನಿಮಾದ ಕಡೆಗೆ ಅವರು ಓಡುತ್ತಿದ್ದಾರೆ. ಅದು ಸರಿ ಸಹ. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾವನ್ನು ಅವರು ಮಾಡುತ್ತಾರೆ. ಅವರಿಗೆ ಅನುಕೂಲವಾದಾಗ ಮಾಡಲಿ. ಎಲ್ಲದಕ್ಕೂ ಸಮಯವೆಂಬುದು ಇದೆ, ಸಮಯ ಬಂದಾಗ ಆ ಸಿನಿಮಾ ಖಂಡಿತ ಆಗುತ್ತದೆ'' ಎಂದಿದ್ದಾರೆ ಸುದೀಪ್.

''ರಕ್ಷಿತ್ ಶೆಟ್ಟಿ ಪ್ರತಿಭೆ ಬಗ್ಗೆ ಅನುಮಾನಪಟ್ಟವರನ್ನು ಗದರಿದ್ದೇನೆ''
''ಸಿನಿಮಾದ ಒನ್ಲೈನರ್ ಅನ್ನು ನಾನು ಕೇಳಿದ್ದೇನೆ. ಅದೊಂದು ಅದ್ಭುತವಾದ ಐಡಿಯಾ. ಖಂಡಿತ ಒಳ್ಳೆಯ ಸಿನಿಮಾ ಅದಾಗುತ್ತದೆ. ಅವರೊಬ್ಬ ಒಳ್ಳೆಯ ಸಿನಿಮಾ ಪ್ರೇಮಿ, ರಕ್ಷಿತ್ ಶೆಟ್ಟಿಯ ಪ್ರತಿಭೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರನ್ನು ನಾನು ಗದರಿಸಿದ ಸಂದರ್ಭಗಳೂ ಇವೆ'' ಎಂದು ರಕ್ಷಿತ್ ಶೆಟ್ಟಿಯನ್ನು ಸುದೀಪ್ ಹೊಗಳಿದ್ದಾರೆ.

ಥಗ್ಸ್ ಆಫ್ ಮಾಲ್ಗುಡಿ ಘೋಷಿಸಿದ್ದ ರಕ್ಷಿತ್ ಶೆಟ್ಟಿ
ಕೆಲ ವರ್ಷಗಳ ಹಿಂದೆ ತಾವು, ಸುದೀಪ್ಗಾಗಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ನಿರ್ದೇಶನ ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದರು. ಆದರೆ ಸಿನಿಮಾ ಪ್ರಾರಂಭವಾಗಲೇ ಇಲ್ಲ. ರಕ್ಷಿತ್ ಶೆಟ್ಟಿ ಸಹ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದ ಕತೆಯ ಬಗ್ಗೆ ಒಂದು ಸಮಾನ ಅಭಿಪ್ರಾಯಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಸುದೀಪ್ ಇಬ್ಬರೂ ಬರಲಾಗಲಿಲ್ಲ ಎಂಬ ಮಾತುಗಳು ಕೇಳಿ ಬಂದವು.

ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ
ರಕ್ಷಿತ್ ಶೆಟ್ಟಿ ಇದೀಗ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದೆ. ಅದರ ಬಳಿಕ 'ರಿಚರ್ಡ್ ಆಂಟೊನಿ' ಸಿನಿಮಾದಲ್ಲಿ ತೊಡಗಿಕೊಳ್ಳುತ್ತಾರೆ. ಆ ಬಳಿಕ 'ಕಿರಿಕ್ ಪಾರ್ಟಿ 2' ಬರಲಿದೆ. ಇನ್ನು ಸುದೀಪ್ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ವಿಕ್ರಾಂತ್ ರೋಣ' ಬಳಿಕ ತಮಿಳಿನ ವೆಂಕಟ್ ಪ್ರಭು ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಬಳಿಕ ಮತ್ತೆ ಅನುಪ್ ಭಂಡಾರಿ ಜೊತೆ 'ಬಿಲ್ಲಾ ರಂಗ ಭಾಷಾ' ಸಿನಿಮಾದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಖಾನ್ಗಾಗಿ ಹೊಸ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ.


Click it and Unblock the Notifications











