'ರಿಚರ್ಡ್ ಆಂಟನಿ'ಯಲ್ಲಿ ಕರಾವಳಿ ಕಲಾವಿದರಿಗೆ ಮಾತ್ರ ಅವಕಾಶ ಎಂದಿದ್ದೇಕೆ ರಕ್ಷಿತ್ ಶೆಟ್ಟಿ?
ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಲಿರುವ 'ರಿಚರ್ಡ್ ಆಂಟನಿ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ತಡವಾಗುತ್ತಿದೆ. 2 ವರ್ಷಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನಿಮಾ ಘೋಷಣೆ ಆಗಿತ್ತು. ಸದ್ಯ ಸಿನಿಮಾ ನಿರ್ಮಾಣ ಕೆಲಸಗಳು ಎಲ್ಲಿಗೆ ಬಂತು ಎನ್ನುವ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.
ಹುಟ್ಟೂರಿನಲ್ಲಿ ರಕ್ಷಿತ್ ಶೆಟ್ಟಿ ಮತದಾನ ಮಾಡಿದರು. ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಸಿಂಪಲ್ ಸ್ಟಾರ್ ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದರು. 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆಯೂ ಪ್ರತಿಕ್ರಿಯಿಸಿದರು. ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ ಎಂದಿದ್ದಾರೆ.

"ನಾನು ವೋಟ್ ಮಾಡುವುದಕ್ಕಾಗಿ ಉಡುಪಿಗೆ ಬಂದೆ. ಆದರೆ ಶೀಘ್ರದಲ್ಲೇ ನನ್ನ ಇಡೀ ತಂಡ ಇಲ್ಲಿಗೆ ಶಿಫ್ಟ್ ಆಗಲಿದೆ. ಮೇ 1ರಿಂದ ಕೆಲಸಗಳು ಶುರುವಾಗುತ್ತದೆ. ಒಂದು ವರ್ಷನ್ ಸ್ಕ್ರಿಪ್ಟ್ ಬಹುತೇಕ ಸಿದ್ಧವಾಗಿದೆ. ಬಹುತೇಕ 'ರಿಚರ್ಡ್ ಆಂಟನಿ' ಚಿತ್ರೀಕರಣ ಕರಾವಳಿ ಭಾಗದಲ್ಲೇ ನಡೆಯುತ್ತದೆ. 60, 70 ದಶಕದ ಕಾಲಘಟ್ಟವನ್ನು ಕಟ್ಟಿಕೊಡಬೇಕು. ಹಾಗಾಗಿ ಕೇರಳದಲ್ಲೂ ಚಿತ್ರೀಕರಣ ನಡೆಸುವ ಆಲೋಚನೆ ಇದೆ" ಎಂದಿದ್ದಾರೆ
10 ವರ್ಷಗಳ ಹಿಂದಿನ ಉಡುಪಿಗೂ ಈಗಿನ ಉಡುಪಿಗೂ ಬಹಳ ವ್ಯತ್ಯಾಸವಿದೆ. ಹಾಗಾಗಿ ಉಡುಪಿ ಚಿತ್ರಣ ಕಟ್ಟಿಕೊಡಲು ಬೇರೆ ಬೇರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಬೇಕಿದೆ. ಉಳಿದವರು ಕಂಡಂತೆ ಒಂದೇ ಕಡೆ ಶೂಟ್ ಮಾಡಿದ್ವಿ. ಆದರೆ ಈಗ ಅದು ಸಾಧ್ಯವಿಲ್ಲ. ಉಡುಪಿ ಸಂಪೂರ್ಣ ಸಿಟಿಯಾಗಿದೆ. ಮುಂಬೈಗೂ ಉಡುಪಿಗೂ ವ್ಯತ್ಯಾಸ ಇಲ್ಲ ಎನ್ನುವಂತಾಗಿದೆ"

"ಬಹುತೇಕ ಕರಾವಳಿ ಭಾಗದ ಕಲಾವಿದರೇ ಚಿತ್ರದಲ್ಲಿ ನಟಿಸುತ್ತಾರೆ. ಬೆಂಗಳೂರು ಕಲಾವಿದರು ಕೇಳುತ್ತಿದ್ದಾರೆ. ಆದರೆ ಅವರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಉಡುಪಿ ಮಾತನಾಡುವ ಶೈಲಿ ಬಹಳ ಮುಖ್ಯ. ಇಲ್ಲಿನ ಕನ್ನಡ ಶೈಲಿಯನ್ನು ಬೇರೆಯವರು ಬಂದು ಮಾತನಾಡಿದರೆ ನೈಜತೆ ಇರಲ್ಲ. ಹಾಗಾಗಿ ಪ್ರತಿ ಕಲಾವಿದನು ಕರಾವಳಿ ಭಾಗದವರೇ ಆಗಿರುತ್ತಾರೆ" ಎಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.
10 ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಉಳಿದವರು ಕಂಡಂತೆ' ಬಂದಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೋತರೂ ಬಳಿಕ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಸದ್ಯ ಆ ಚಿತ್ರದ ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಕಟ್ಟಿಕೊಡಲು ರಕ್ಷಿತ್ ಶೆಟ್ಟಿ ಮತ್ತವರ ತಂಡ ಮುಂದಾಗಿದೆ. ಅಚ್ಯುತ್ ಕುಮಾರ್ ಕೂಡ ಚಿತ್ರದ ತಾರಾಗಣದಲ್ಲಿ ಇರಲಿದ್ದಾರೆ.
'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮಾಡಿದ್ದ ರಿಚ್ಚಿ(ರಿಚರ್ಡ್ ಆಂಟನಿ) ಪಾತ್ರ ಹಿಟ್ ಆಗಿತ್ತು. ಹಾಗಾಗಿ ಆ ಪಾತ್ರದ ಸುತ್ತ ಮುಂದಿನ ಸಿನಿಮಾ ಮೂಡಿ ಬರಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸುವ ಪ್ರಯತ್ನ ನಡೀತಿದೆ. ಈ ಬಾರಿ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲಾಗುತ್ತಿದೆ. 'ಸಪ್ತಸಾಗರದಾಚೆ ಎಲ್ಲೋ' ಬಳಿಕ ಸಿಂಪಲ್ ಸ್ಟಾರ್ ಸಂಪೂರ್ಣವಾಗಿ ತಮ್ಮನ್ನು 'ರಿಚರ್ಡ್ ಆಂಟನಿ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೇರೆ ನಿರ್ದೇಶಕರ ನಿರ್ದೇಶನದಲ್ಲಿ ನಟಿಸುವುದು ಕೈಬಿಟ್ಟು ತಮ್ಮದೇ ಕಥೆಗಳನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. 'ರಿಚರ್ಡ್ ಆಂಟನಿ' ನಂತರ 'ಪುಣ್ಯಕೋಟಿ' ಸರಣಿ ಸಿನಿಮಾಗಳನ್ನು ಆರಂಭಿಸುವ ಪ್ರಯತ್ನ ಮಾಡುತ್ತಿದ್ದಾರೆ. 'ಮಿಡ್ವೇ ಟು ಮೋಕ್ಷ' ಎನ್ನುವ ಕಥೆಯೂ ಸಿಂಪಲ್ ಸ್ಟಾರ್ ತಲೆಯಲ್ಲಿದೆ. ಅದನ್ನು ದೃಶ್ಯ ರೂಪಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೀತಿವೆ.


Click it and Unblock the Notifications











