ಮತ್ತೆ ನಟ ರಕ್ಷಿತ್ ಶೆಟ್ಟಿ ಟ್ರೋಲ್ ಮಾಡಿ ಹುಬ್ಬಳ್ಳಿ - ಧಾರವಾಡ ಪೊಲೀಸರ ಸಂಚಾರ ಜಾಗೃತಿ
ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದೆ. ರಕ್ಷಿತ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ಬಿಡುಗಡೆಯಾಗಿ 12 ವರ್ಷಗಳು ಕಳೆದರೂ, 'ಉಳಿದವರು ಕಂಡಂತೆ' ಚಿತ್ರವನ್ನು ಸಂಭ್ರಮಿಸಲು ಇನ್ನೂ ಬಾಕಿಯಿದೆ" ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳು 'ರಿಚರ್ಡ್ ಆಂಟನಿ' ಸಿನಿಮಾ ಅಪ್ಡೇಟ್ ಕೇಳುತ್ತಿದ್ದಾರೆ. 4 ವರ್ಷಗಳ ಹಿಂದೆಯೇ ಟೀಸರ್ ಬಿಟ್ಟು ಸಿನಿಮಾ ಘೋಷಿಸಿದ್ದ ರಕ್ಷಿತ್ ಶೆಟ್ಟಿ ಇನ್ನು ಸ್ಕ್ರಿಪ್ಟ್ ಕೆಲಸಗಳಲ್ಲೇ ಬ್ಯುಸಿಯಾಗಿದ್ದಾರೆ. ಸಿನಿಮಾ ಶುರು ಮಾಡಿ ಬಿಡುಗಡೆ ಮಾಡುವುದು ಯಾವಾಗ ಎಂದು ಅಭಿಮಾನಿಗಳು ಕೇಳಿ ಕೇಳಿ ಸುಸ್ತಾಗಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ಪೋಸ್ಟ್ ಅನ್ನು ಹುಬ್ಬಳ್ಳಿ - ಧಾರವಾಡ ಪೊಲೀಸ್ ಇಲಾಖೆ ಸಂಚಾರ ನಿಯಮ ಜಾಗೃತಿಗೆ ಬಳಸಿಕೊಂಡಿದೆ. ಈ ಹಿಂದೆ ಕೂಡ ಇಲಾಖೆ ಇದೇ ರೀತಿ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ಅವರರನ್ನು ಟ್ರೋಲ್ ಮಾಡಿತ್ತು.

ವಾಹನ ಸವಾರರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಲ್ಲ. ಇದು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ. ಹಾಗಾಗಿ ಸಂಚಾರ ಜಾಗೃತಿ ಹಾಗೂ ಸುರಕ್ಷತೆ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಲೇ ಇರುತ್ತದೆ. ಅದಕ್ಕಾಗಿ ರಸ್ತೆಗಳಲ್ಲಿ ನಾಮಫಲಕಗಳನ್ನು ಹಾಕುವುದು ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರಯತ್ನಿಸುತ್ತಲೇ ಇರುತ್ತದೆ. 'ರಿಚರ್ಡ್ ಆಂಟನಿ' ಚಿತ್ರಕ್ಕಾಗಿ ಜನ ಕಾಯುವಂತಾಗಿದೆ. ರಕ್ಷಿತ್ ಶೆಟ್ಟಿ ಮತ್ತಷ್ಟು ತಾಳ್ಮೆ ಇರಲಿ ಎನ್ನುವಂತೆ ಸುಮ್ಮನಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅದನ್ನು ಹುಬ್ಬಳ್ಳಿ - ಧಾರಾವಾಡ ಪೊಲೀಸ್ ಇಲಾಖೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ರೀ-ಟ್ವೀಟ್ ಮಾಡಿ "ತಾಳ್ಮೆಯಿಂದಿರಿ; ಸಿನಿಮಾಗಳಿಗಾಗಿ ಮತ್ತು ರಸ್ತೆಗಳಲ್ಲಿ ಓವರ್ಟೇಕ್ ಮಾಡುವಾಗಲೂ" ಎಂದು ಬರೆಯಲಾಗಿದೆ.
ಅಯ್ಯೋ ಪೊಲೀಸ್ ಇಲಾಖೆ ಕೂಡ ಟ್ರೋಲ್ ಮಾಡುವಂತಾಯಿತು ಆದಷ್ಟು ಬೇಗ 'ರಿಚರ್ಡ್ ಆಂಟನಿ' ಸಿನಿಮಾ ಅಪ್ಡೇಟ್ ಕೊಡಿ. ಬೇಗ ಸಿನಿಮಾ ಶುರು ಮಾಡಿ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಿ ಎಂದು ನೆಟ್ಟಿಗರು ಪ್ರೀತಿಯಿಂದಲೇ ರಕ್ಷಿತ್ ಶೆಟ್ಟಿಗೆ ಗದರಿದ್ದಾರೆ. 2014ರಲ್ಲಿ ಬಿಡುಗಡೆ ಆಗಿದ್ದ 'ಉಳಿದರವರು ಕಂಡಂತೆ' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಬಾಕ್ಸಾಫೀಸ್ನಲ್ಲಿ ಸಿನಿಮಾ ಸೋತರೂ ಕೆಲವರ ಹಾಟ್ ಫೇವರಿಟ್ ಎನಿಸಿಕೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆಯಾಗಿದೆ. ಸದ್ಯಕ್ಕೆ ರಕ್ಷಿತ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.. ಹೊಂಬಾಳೆ ಫಿಲ್ಮ್ಸ್ ಜೊತೆಗೂ ಸಂಪರ್ಕದಲ್ಲಿ ಇಲ್ಲ ಎನ್ನಲಾಗ್ತಿದೆ. ಹಾಗಾಗಿ ಬೇರೆ ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಾ ಎನ್ನುವುದು ಊಹಾಪೋಹ ಶುರುವಾಗಿದೆ. ರಕ್ಷಿತ್ ತಾವೇ ಸಿನಿಮಾ ನಿರ್ಮಿಸಿ ನಿರ್ದೇಶಿಸಿ ನಟಿಸಬಹುದು ಎಂದು ಕೆಲವರು ಭಾವಿಸಿದ್ದಾರೆ. ರಿಚ್ಚಿ ಹಿನ್ನಲೆ ಜೊತೆಗೆ ಆತನ ಮುಂದಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲು ಸಿಂಪಲ್ ಸ್ಟಾರ್ ಮನಸ್ಸು ಮಾಡಿದ್ದಾರೆ.
'ರಿಚರ್ಡ್ ಆಂಟನಿ' ಜೊತೆಗೆ 'ಪುಣ್ಯಕೋಟಿ' ಸಿನಿಮಾ ಕಥೆಯನ್ನು ಫೈನಲ್ ಮಾಡುತ್ತಿದ್ದಾರಂತೆ. ಎರಡೂ ಸಿನಿಮಾ ಕೆಲಸಗಳನ್ನು ಒಟ್ಟಿಗೆ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕೂ ಇರಲಿದೆ. ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಸಿನಿಮಾ ಸೆಟ್ಟೇರಲಿದೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳ ಮೂಲಕ ಕೊನೆಯದಾಗಿ ರಕ್ಷಿತ್ ತೆರೆಮೇಲೆ ಬಂದಿದ್ದರು. ಸ್ಟಾರ್ ನಟರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎನ್ನುವ ಬೇಡಿಕೆಯಿದೆ. ಆದರೆ ಅದನ್ನು ಕೆಲವರು ಗಂಭೀರವಾಗಿ ಪರಿಗಣಿಸಿದಂತೆ ಕಾಣ್ತಿಲ್ಲ. ರಕ್ಷಿತ್ ಶೆಟ್ಟಿ ನಾನು ಇರುವುದೇ ಹೀಗೆ, ನಾನು ಸಿನಿಮಾ ಮಾಡುವ ಶೈಲಿ ಹೀಗೆ ಎನ್ನುತ್ತಿದ್ದಾರೆ.


Click it and Unblock the Notifications











