ಸ್ಪರ್ಶ್ ಮಸಾಲಾ ಕಂಪನಿ ಮಾಲೀಕನ ಬಯೋಪಿಕ್ನಲ್ಲಿ ರಕ್ಷಿತ್ ಶೆಟ್ಟಿ? ಇಲ್ಲಿದೆ ಎಕ್ಸ್ಕ್ಲೂಸಿವ್ ಮಾಹಿತಿ
ಕನ್ನಡದಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಕಮ್ಮಿ. ಅದರಲ್ಲೂ ಸ್ಟಾರ್ ನಟರು ಅಂತಹ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಆದರೆ ರಕ್ಷಿತ್ ಶೆಟ್ಟಿ ಸ್ಪರ್ಶ್ ಮಸಾಲಾ ಕಂಪನಿ ಮಾಲೀಕ ಶಿವಕುಮಾರಯ್ಯ ಬಯೋಪಿಕ್ನಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಶಿವಕುಮಾರಯ್ಯ ಬಯೋಪಿಕ್ನಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಪ್ರಮೋದ್ ಶೆಟ್ಟಿ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಸದ್ಯ 'ರಿಚರ್ಡ್ ಆಂಟನಿ' ಸಿನಿಮಾ ಕೆಲಸಗಳಲ್ಲೇ ರಕ್ಷಿತ್ ಶೆಟ್ಟಿ ಮುಳುಗಿದ್ದಾರೆ. ಬೇರೆ ಯಾವುದೇ ಸಿನಿಮಾ ಮಾಡುವ ಆಲೋಚನೆ ಅವರಿಗೆ ಇಲ್ಲ. ಈ ವರ್ಷವೇ 'ರಿಚರ್ಡ್ ಆಂಟನಿ' ಚಿತ್ರ ಸೆಟ್ಟೇರುತ್ತದೆ ಎಂದು ಪ್ರಮೋದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಕೆಲ ವರ್ಷಗಳಿಂದ ಮಾಧ್ಯಮಗಳ ಸಂಪರ್ಕಕ್ಕೆ ಸಿಗುತ್ತಿಲ್ಲ. 'ರಿಚರ್ಡ್ ಆಂಟನಿ' ಸಿನಿಮಾ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. 'ಉಳಿದವರು ಕಂಡಂತೆ' ಸೀಕ್ವೆಲ್ 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿ ಬಹಳ ದಿನಗಳಾಯಿತು. ಅಭಿಮಾನಿಗಳು ಚಿತ್ರದ ಅಪ್ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಒಂದು ಸಿನಿಮಾ ಮಾಡಲು ಇಷ್ಟು ತಡ ಮಾಡಿದರೆ ಹೇಗೆ ಎಂದು ಕೇಳುತ್ತಲೇ ಇದ್ದಾರೆ. ತಡ ಆದರೂ ಪರವಾಗಿಲ್ಲ, ಒಂದೊಳ್ಳೆ ಸಿನಿಮಾ ಮಾಡಬೇಕು ಎನ್ನುವುದು ರಕ್ಷಿತ್ ಶೆಟ್ಟಿ ಲೆಕ್ಕಾಚಾರ.
ಸ್ಪರ್ಶ ಮಸಾಲಾ ಬ್ರ್ಯಾಂಡ್ನ ಸ್ಥಾಪಕರಾಗಿ ಯಶಸ್ಸು ಕಂಡ ಮಾಜಿ ಸೈನಿಕ ಶಿವಕುಮಾರಯ್ಯ ಅವರ ಜೀವನವನ್ನಾಧರಿಸಿ ಸಿನಿಮಾ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಅವರೊಟ್ಟಿಗೆ ಚರ್ಚಿಸಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಬಳಿಕ ನಾಗರೀಕ ಜೀವನಕ್ಕೆ ಮರಳಿದವರು ಶಿವಕುಮಾರಯ್ಯ. ಸ್ವಯಂ ನಿವೃತ್ತಿ ಪಡೆದು ಬಂದ ಬಳಿಕ ಏನಾದರೂ ಸಾಧನೆ ಮಾಡಬೇಕು ಎಂದು ಹೊರಟು ಸ್ಪರ್ಶ ಮಸಾಲಾ ಬ್ರ್ಯಾಂಡ್ ಹುಟ್ಟುಹಾಕಿದ್ದರು. ಮುಂದೆ ಅದು ದೊಡ್ಡ ಸಂಸ್ಥೆಯಾಗಿ ಬೆಳೆಯಿತು. ಈ ಸಾಧನೆಯ ಕಥೆಯನ್ನು ಸಿನಿಮಾ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ರಿಚರ್ಡ್ ಆಂಟನಿ ಸಿನಿಮಾ ಬಿಟ್ಟು ರಕ್ಷಿತ್ ಈ ಬಯೋಪಿಕ್ ಮಾಡ್ತಾರಾ? ಅಥವಾ ಮುಂದೆ ಇಂತಾದೊಂದು ಸಿನಿಮಾ ಬರುತ್ತಾ ಎನ್ನುವ ಬಗ್ಗೆ ರಕ್ಷಿತ್ ಶೆಟ್ಟಿ ಆಪ್ತ ಪ್ರಮೋದ್ ಶೆಟ್ಟಿ ಅವರನ್ನು ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿತ್ತು. ಈ ಬಗ್ಗೆ ಮಾತನಾಡಿದ ಪ್ರಮೋದ್ "ಅಂತಹ ಯಾವುದೇ ಚರ್ಚೆ ನಡೆದಿಲ್ಲ. 4 ವರ್ಷದಿಂದ ತೆಲುಗು, ತಮಿಳಿನಿಂದ ಕೂಡ ಸಾಕಷ್ಟು ಅವಕಾಶಗಳು ಬಂದಿವೆ. ಅದನ್ನೇ ಮಾಡಲಿಲ್ಲ. 'ರಿಚರ್ಡ್ ಆಂಟನಿ' ಬಿಟ್ಟು ಬೇರೆ ಆಲೋಚನೆ ರಕ್ಷಿತ್ ಶೆಟ್ಟಿ ಮುಂದೆ ಇಲ್ಲ" ಎಂದಿದ್ದಾರೆ.
'ರಿಚರ್ಡ್ ಆಂಟನಿ' ಸಿನಿಮಾ ಯಾವಾಗ ಶುರುವಾಗುತ್ತದೆ ಎನ್ನುವ ಪ್ರಶ್ನೆಗೆ "ಇನ್ನೆರಡು ತಿಂಗಳಲ್ಲಿ ಪ್ರೀ-ಪ್ರೊಡಕ್ಷನ್ ವರ್ಕ್ ಶುರುವಾಗುತ್ತದೆ. ಬಹುತೇಕ ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಐದಾರು ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಈ ವರ್ಷವೇ ಸಿನಿಮಾ ಶುರುವಾಗುತ್ತದೆ" ಎಂದು ಪ್ರಮೋದ್ ಶೆಟ್ಟಿ ಮಾಹಿತಿ ನೀಡಿದ್ದಾರೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳ ಬಳಿಕ ಯಾವುದೇ ಚಿತ್ರವನ್ನು ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿಲ್ಲ.
'ರಿಚರ್ಡ್ ಆಂಟನಿ' ಬಳಿಕ 'ಪುಣ್ಯಕೋಟಿ' ಭಾಗ-1 ಹಾಗೂ ಭಾಗ-2, 'ಮಿಡ್ವೇ ಟು ಮೋಕ್ಷ' ಸಿನಿಮಾಗಳನ್ನು ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಚಿತ್ರಗಳಿಗೆ ತಾವೇ ಕಥೆ, ಚಿತ್ರಕಥೆ ಬರೆಯಲಿದ್ದಾರೆ. 'ಮಿಡ್ವೇ ಟು ಮೋಕ್ಷ' ಚಿತ್ರದಲ್ಲಿ ರಕ್ಷಿತ್ ಜೊತೆ ರಿಷಬ್ ಹಾಗೂ ರಾಜ್. ಬಿ ಶೆಟ್ಟಿ ಕೂಡ ಕೆಲಸ ಮಾಡುವ ಸಾಧ್ಯತೆಯಿದೆ.


Click it and Unblock the Notifications











