ಗುರುಪೌರ್ಣಿಮೆ ಸುಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ', 'ಪುಣ್ಯಕೋಟಿ' ಕನವರಿಕೆ
'ಸಪ್ತಸಾಗರದಾಚೆ ಎಲ್ಲೋ' ಮನು ಆಗಿ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲು ರಕ್ಷಿತ್ ಶೆಟ್ಟಿ ರೆಡಿಯಾಗಿದ್ದಾರೆ. ಇದರ ನಡುವೆ 'ರಿಚರ್ಡ್ ಆಂಟನಿ', 'ಪುಣ್ಯಕೋಟಿ' ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಗುರುಪೌರ್ಣಿಮೆ ವಿಶೇಷವಾಗಿ ಸ್ಪೆಷಲ್ ವಿಡಿಯೋ ಮಾಡಿ ತಮ್ಮ ಮುಂದಿನ 2 ಸಿನಿಮಾಗಳ ಬಗ್ಗೆ ಸಿಂಪಲ್ ಸ್ಟಾರ್ ಮಾತನಾಡಿದ್ದಾರೆ. ಅದ್ಭುತ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವ ಸಂಕಲ್ಪ ಮಾಡಿದ್ದಾರೆ.
ಉಡುಪಿಯಲ್ಲಿ ಹುಟ್ಟಿಬೆಳೆದ ರಕ್ಷಿತ್ ಶೆಟ್ಟಿ ತನ್ನೂರಿನಲ್ಲಿ ನೋಡಿದ, ಬಾಲ್ಯದಿಂದಲೂ ಪ್ರೇರಣೆಗೊಂಡ ವಿಚಾರಗಳನ್ನು ಸಿನಿಮಾಗಳಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. 10 ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಚಿತ್ರದಲ್ಲಿ ಅದೇ ಪ್ರಯತ್ನ ಮಾಡಿದ್ದರು. ಬಾಕ್ಸಾಫೀಸ್ನಲ್ಲಿ ಸಿನಿಮಾ ಗೆಲ್ಲದೇ ಇದ್ದರೂ ಪ್ರೇಕ್ಷಕರ ಮನಗೆದ್ದಿತ್ತು. ಕಲ್ಟ್ ಸಿನಿಮಾ ಎನಿಸಿಕೊಂಡಿತ್ತು. ಸದ್ಯ ತಾವು ಹಾದಿಬಂದ ದಾರಿ ಹಾಗೂ ಮುಂದಿನ ಕನಸುಗಳ ಬಗ್ಗೆ ರಕ್ಷಿತ್ ಶೆಟ್ಟಿ ಅಂತರಾಳ ಬಿಚ್ಚಿಟ್ಟಿದ್ದಾರೆ.

10 ವರ್ಷಗಳ ನಂತರ ಮತ್ತೆ 'ರಿಚರ್ಡ್ ಆಂಟನಿ' ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿರುವ ವಿಚಾರವನ್ನು ಸಿಂಪಲ್ ಸ್ಟಾರ್ ಹಂಚಿಕೊಂಡಿದ್ದಾರೆ. ಬರಹಗಾರನಾಗಿ, ನಟನಾಗಿ, ನಿರ್ಮಾಪಕನಾಗಿ ಸಿನಿಮಾಗಳನ್ನು ಮಾಡಿದರೂ ನಿರ್ದೇಶಕನ ಜವಾಬ್ದಾರಿ ಹೆಚ್ಚು ಇಷ್ಟ, ತೃಪ್ತಿಕೊಟ್ಟಿತ್ತು ಎಂದಿದ್ದಾರೆ. ಮತ್ತೆ ನಿರ್ದೇಶಕನ ಸೀಟ್ನಲ್ಲಿ ಕೂರುತ್ತಿರುವುದಕ್ಕೆ ರಕ್ಷಿತ್ ಖುಷಿಯಾಗಿದ್ದಾರೆ.
2 ಸಿನಿಮಾಗಳಿಗೆ ಅದೇ ಸ್ಪೂರ್ತಿ
ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಸೀಕ್ವೆಲ್ ಮಾತ್ರವಲ್ಲ 'ಪುಣ್ಯಕೋಟಿ' ಸಿನಿಮಾ ಬಗ್ಗೆ ಕೂಡ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಈ ಎರಡು ಸಿನಿಮಾಗಳಿಗಾಗಿ ನಾನು 2 ವರ್ಷ ವ್ಯಯಿಸಿದ್ದೇನೆ. ಇನ್ನು 2 ವರ್ಷ ವ್ಯಯಿಸಬೇಕಿದೆ ಎಂದಿದ್ದಾರೆ. ಪುರಾಣದ ಪ್ರಕಾರ, ಪರಶುರಾಮ ಕೊಡಲಿ ಎಸೆದು ನಿರ್ಮಿಸಿದ ಕರಾವಳಿ ಭೂಮಿ ಸೃಷ್ಟಿಯಾಯಿತು ಎನ್ನುವ ನಂಬಿಕೆ ಇದೆ. ರಕ್ಷಿತ್ ಶೆಟ್ಟಿ ಮಾತನಾಡಿ "ಪರಶುರಾಮ ಹಾಗೂ ಆತನ ಕೊಡಲಿ, ನನ್ನ ಮುಂದಿನ ಎರಡು ಸಿನಿಮಾಗಳಿಗೆ ಸ್ಫೂರ್ತಿ ಎಂದಿದ್ದಾರೆ.
'ರಿಚರ್ಡ್ ಆಂಟನಿ' ಟೀಸರ್ ಮೇಕಿಂಗ್
3 ವರ್ಷಗಳ ಹಿಂದೆ 'ರಿಚರ್ಡ್ ಆಂಟನಿ' ಟೀಸರ್ ಚಿತ್ರೀಕರಣ ನಡೆದಿತ್ತು. ಬಹಳ ದಿನಗಳ ನಂತರ ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶಕರ ಸೀಟ್ನಲ್ಲಿ ಕೂತು ಮೈಕ್ ಹಿಡಿದು ಆಕ್ಷನ್ ಕಟ್ ಹೇಳಿದ್ದರು. ಅದರ ಸಣ್ಣ ಝಲಕ್ ಜೊತೆಗೆ ತಮ್ಮ ಅಂತರಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಆ ಮೂಲಕ ನಿರ್ದೇಶನದ ಮೇಲಿನ ಪ್ರೀತಿಯನ್ನು ಸಿಂಪಲ್ ಸ್ಟಾರ್ ತೆರೆದಿಟ್ಟಿದ್ದಾರೆ.

ಬಾಲ್ಯ ನೆನೆದ ಸಿಂಪಲ್ ಸ್ಟಾರ್
'ನಾ ಕಂಡಂತೆ' ವಿಡಿಯೋ ಜೊತೆ ಸುದೀರ್ಘವಾದ ಸಂದೇಶವನ್ನು ಕೂಡ ಬರೆದುಕೊಂಡಿದ್ದಾರೆ. ಎಲ್ಲರಿಗೂ ಗುರುಪೂರ್ಣಿಮಾ ಶುಭಾಶಯಗಳು. ಬಾಲ್ಯದಲ್ಲಿ, ಪ್ರತಿ ಸೋಮವಾರ ನನ್ನ ತಾಯಿ ನಮ್ಮನ್ನು ಶಾಲೆಯಿಂದ ಕರೆದುಕೊಂಡು ಕಾರ್ ಸ್ಟ್ರೀಟ್ನಲ್ಲಿರುವ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅನಂತೇಶ್ವರ ದೇವಸ್ಥಾನ, ನಂತರ ಕೃಷ್ಣ ದೇವಸ್ಥಾನ ಮತ್ತು ಗುರು ರಾಘವೇಂದ್ರ ದೇವಸ್ಥಾನಕ್ಕೆ ಭೇಟಿ ನೀಡುವುದು ನಮ್ಮ ದಿನಚರಿಯಾಗಿತ್ತು. ಸಂಪೂರ್ಣ ಸ್ಟೋರ್ನಲ್ಲಿ 5-ಸ್ಟಾರ್ ಚಾಕೊಲೇಟ್ ವಾರದ ಟ್ರೀಟ್ ಇರುತ್ತಿತ್ತು. ಪ್ರತಿ ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೂ ಅವುಗಳ ಹಿಂದಿನ ಕಥೆಗಳನ್ನು ತಿಳಿದುಕೊಳ್ಳುವುದು ನನ್ನ ಕುತೂಹಲವಾಗಿತ್ತು."
ಶಿವ ನನಗೆ ಬಹಳ ಪ್ರಿಯ
"ಅಮ್ಮ ನನಗೆ ಕೆಲವು ಕಥೆಗಳನ್ನು ಹೇಳುತ್ತಿದ್ದರು ಮತ್ತು ಉಳಿದವುಗಳಿಗೆ, ನನ್ನ ಕಲ್ಪನೆಗೆ ಉತ್ತೇಜಿಸುವಂತಹ ಜನರನ್ನು ನಾನು ದೇವಸ್ಥಾನದಲ್ಲಿ ಕಾಣುತ್ತಿದ್ದೆ. ಎಲ್ಲಾ ದೇವಸ್ಥಾನಗಳಲ್ಲಿ ಅನಂತೇಶ್ವರ ದೇವಸ್ಥಾನ ನನ್ನನ್ನು ಹೆಚ್ಚು ಆಕರ್ಷಿಸಿತು. ಕಾರಣ, ಶಿವ ನನಗೆ ಬಹಳ ಪ್ರಿಯನಾಗಿದ್ದನು. ಆದರೆ ನನ್ನ ಸ್ವಾಮಿಗೆ ಸಮರ್ಪಿತವಾದ ದೇವಾಲಯವು ಸಾಕ್ಷಾತ್ ಪರಶುರಾಮ ಲಿಂಗ ಸ್ವರೂಪಿ ಎಂದು ತಿಳಿದುಕೊಂಡ ದಿನ ನಾನು ದಿಗ್ಭ್ರಮೆಗೊಂಡೆ. ನನ್ನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಅದು 1000ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಕಾರಣವಾಯಿತು ಮತ್ತು ನಾನು ಇನ್ನೂ ಅದಕ್ಕೆಲ್ಲಾ ಉತ್ತರಗಳನ್ನು ಹುಡುಕುತ್ತಿದ್ದೇನೆ. ನಾನು ಕಥೆಗಾರನಾಗಲು ಇದೇ ಕಾರಣ ಎಂದು ನಾನು ನಂಬುತ್ತೇನೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











