ವಿಶೇಷ ಚೇತನ ಅಕ್ಕನ ಜೊತೆ ಹುಟ್ಟೂರಲ್ಲಿ ಮತ ಚಲಾಯಿಸಿದ ಧನು; ಕೆರಾಡಿ ಸರ್ಕಾರಿ ಶಾಲೆಯಲ್ಲಿ ರಿಷಬ್ ಹಕ್ಕು ಚಲಾವಣೆ
ರಾಜ್ಯಾದ್ಯಂತ ಪ್ರಜಾಪ್ರಭುತ್ವ ಹಬ್ಬ ಆಚರಣೆ ಜೋರಾಗಿದೆ. ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಿ ಬರುತ್ತಿದ್ದಾರೆ. ಸಿನಿಮಾ ತಾರೆಯರು ಕೂಡ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಪ್ರಕಾಶ್ ರಾಜ್, ಜಗ್ಗೇಶ್, ಅಮೂಲ್ಯ, ರಾಘವೇಂದ್ರ ರಾಜ್ಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ಗಣೇಶ್, ಸಪ್ತಮಿ ಗೌಡ, ಸೇರಿದಂತೆ ಹಲವರು ಈಗಾಗಲೇ ಮತ ಚಲಾಯಿಸಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಸಿನಿಮಾ ತಾರೆಯರು ಹಕ್ಕು ಚಲಾಯಿಸಬೇಕು. ಯಾಕಂದರೆ ತಾರೆಯರು ಒಂದಷ್ಟು ಜನರ ಮೇಲೆ ಪರಿಣಾಮ ಬೀರಬಲ್ಲರು. ನೆಚ್ಚಿನ ನಟನಟಿಯರನ್ನು ನೋಡಿ ಮತದಾರರು ಮತ ಚಲಾಯಿಸಲು ಬರುತ್ತಾರೆ. ಆ ಜವಾಬ್ದಾರಿಯನ್ನು ಕನ್ನಡ ಸಿನಿಮಾ ತಾರೆಯರು ನಿಬಾಯಿಸುತ್ತಿದ್ದಾರೆ. ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಕೆಲವರು ಚುನಾವಣೆ ಪ್ರಚಾರದಲ್ಲೂ ಭಾಗಿ ಆಗಿದ್ದರು. ಕಳೆದ ಕೆಲ ದಿನಗಳಿಂದ ಕೆಲವರು ಸಿನಿಮಾ ಕೆಲಸಗಳಿಗೂ ಬ್ರೇಕ್ ನೀಡಿದ್ದರು.

ಬಹುತೇಕ ತಾರೆಯರು ಬೆಂಗಳೂರಿನಲ್ಲೇ ಸೆಟ್ಲ್ ಆಗಿದ್ದಾರೆ. ಹಾಗಾಗಿ ಇಲ್ಲೇ ಮತದಾನ ಮಾಡುತ್ತಿದ್ದಾರೆ. ತಡವಾದರೂ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯರಂತೆ ಹಕ್ಕು ಚಲಾಯಿಸಿದ್ದಾರೆ. ಕೆಲವರು ಮಾತ್ರ ತಮ್ಮ ಹುಟ್ಟೂರಿಗೆ ಹೋಗಿ ಮತ ಚಲಾಯಿಸಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ಧನಂಜಯ್ ಈ ಸಾಲಿನಲ್ಲಿ ಮುಂದಿದ್ದಾರೆ. ಇನ್ನು ನಟ, ರಾಜಕೀಯ ಮುಖಂಡ ನಿಖಿಲ್ ಕುಮಾರ್ ತಮ್ಮ ತಂದೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿಯವರ ಜೊತೆ ರಾಮನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕಾಳೇನಹಳ್ಳಿಯಲ್ಲಿ ಧನಂಜಯ್ ಮತ ಚಲಾವಣೆ
ನಟ ಡಾಲಿ ಧನಂಜಯ್ ಕುಟುಂಬ ಸಮೇತ ಹುಟ್ಟೂರು ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಮತ ಚಲಾಯಿಸಿದ್ದಾರೆ. ತಂದೆ, ತಾಯಿ, ಅಜ್ಜಿ ಜೊತೆಗೆ ವಿಶೇಷ ಚೇತನ ಅಕ್ಕನನ್ನು ಕರೆದುಕೊಂಡು ಹೋಗಿ ಮತ ಚಲಾಯಿಸಿ ಬಂದಿದ್ದಾರೆ. "ನಾವೆಲ್ಲ Vote ಮಾಡುದ್ವಿ, ನೀವು Vote ಮಾಡಿ. Vote ಮಾಡುವವರೆ Dare Devil. ನಾನ್ ಬಿಡಿ ಡೇರ್ ಡೆವಿಲ್, ನೀವು..?" ಎಂದು ಟ್ವೀಟ್ ಮಾಡಿದ್ಧಾರೆ.

ಕೆರಾಡಿಯಲ್ಲಿ ರಿಷಬ್ ಶೆಟ್ಟಿ ಮತದಾನ
'ಕಾಂತಾರ' ಸಿನಿಮಾ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಚಿತ್ರದ ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಷಬ್ ಶೆಟ್ಟಿ ಬೆಂಗಳೂರಿನಲ್ಲೇ ಮನೆ ಮಾಡಿ ಮಡದಿ ಮಕ್ಕಳ ಜೊತೆ ವಾಸವಾಗಿದ್ದಾರೆ. ಆದರೆ ಹುಟ್ಟೂರಿ ಕುಂದಾಪುರದ ಕೆರಾಡಿಯಲ್ಲಿ ಅವರ ವೋಟ್ ಇದೆ. ಹಾಗಾಗಿ ಅಲ್ಲಿಗೆ ಹೋಗಿ ಹಕ್ಕು ಚಲಾಯಿಸಿದ್ದಾರೆ. "ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ" ಎಂದು ಟ್ವೀಟ್ ಮಾಡಿದ್ದಾರೆ.
ಉಡುಪಿಯಲ್ಲಿ ರಕ್ಷಿತ್ ಮತ ಚಲಾವಣೆ
ಇನ್ನು ರಿಷಬ್ ಶೆಟ್ಟಿ ತಾವು ಹುಟ್ಟಿ ಬೆಳೆದ ಉಡುಪಿಯಲ್ಲಿ ಮತ ಚಲಾಯಿಸಿದರು. ಇಂದು ರಾತ್ರಿ ಯೂಎಸ್ಗೆ ಪ್ರಯಾಣ ಬೆಳೆಸಿರುವ ಸಿಂಪಲ್ ಸ್ಟಾರ್ ಅದಕ್ಕು ಮುನ್ನ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಿತ್ "ಮತ ಚಲಾಯಿಸುವುದು ಬಹಳ ಮುಖ್ಯ. ಇದು ನಮ್ಮ ಜವಾಬ್ದಾರಿ. ಪಕ್ಷಕ್ಕಿಂತ ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ನಾವು ಚಿಕ್ಕವರಾಗಿ ಇದ್ದಾಗ ಉಡುಪಿ ಬೆಳೆಯಬೇಕು ಎನ್ನುವ ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ಮೂಲಭೂತ ಸೌಕರ್ಯ ಬಗ್ಗೆ ಒದಗಿಸುವ ಬಗ್ಗೆ ರಾಜಕೀಯ ನಾಯಕರು ಕೆಲಸ ಮಾಡಬೇಕು. ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದ್ದಾರೆ.


Click it and Unblock the Notifications











