ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ದೆಹಲಿ ಹೈಕೋರ್ಟ್ ಬಿಗ್ ಶಾಕ್
ಕಾಪಿರೈಟ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಸಂಸ್ಥೆ ಪದೇ ಪದೆ ಸಂಕಷ್ಟ ಎದುರಿಸುತ್ತಿದೆ. 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಅನುಮತಿ ಇಲ್ಲದೇ 'ನ್ಯಾಯ ಎಲ್ಲಿದೆ' ಮತ್ತು 'ಒಮ್ಮೆ ನಿನ್ನನ್ನು' ಹಾಡುಗಳನ್ನು ಬಳಸಿಕೊಂಡ ಪ್ರಕರಣ ಸಂಬಂಧ 25 ಲಕ್ಷ ರೂ. ದಂಡ ಪಾವತಿಸುವಂತಾಗಿದೆ. ದೆಹಲಿ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಎರಡು ವರ್ಷಗಳ ಹಿಂದೆ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆ ಆಗಿತ್ತು. ಅಭಿಜಿತ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದರು. ಈ ಎರಡು ಹಾಡುಗಳ ಕಾಪಿರೈಟ್ಸ್ ಎಂಆರ್ಟಿ ಮ್ಯೂಸಿಕ್ ಸಂಸ್ಥೆ ಬಳಿಯಿದೆ. ಚಿತ್ರದಲ್ಲಿ ಈ ಹಾಡುಗಳ ಬಳಕೆ ಬಗ್ಗೆ ಎಂಆರ್ಟಿ ಮ್ಯೂಸಿಕ್ ಪಾಲುದಾರರಾಗಿದ್ದ ನವೀನ್ ಕುಮಾರ್ ಎಂಬುವವರ ಜೊತೆ ಮಾತುಕತೆ ನಡೆಸಿದ್ದರು. ಮಾತುಕತೆ ಯಾಕೋ ಸರಿಹೊಂದಿರಲಿಲ್ಲ. ಆದರೂ ಚಿತ್ರದಲ್ಲಿ ಹಾಡುಗಳನ್ನು ಬಳಸಿಕೊಂಡಿದ್ದರು.

ಸಿನಿಮಾ ಅಮೆಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆದ ಬಳಿಕವೇ ಈ ವಿಚಾರ ನವೀನ್ ಕುಮಾರ್ ಗಮನಕ್ಕೆ ಬಂದತ್ತು. ರೈಟ್ಸ್ ಖರೀದಿಸದೇ 'ನ್ಯಾಯ ಎಲ್ಲಿದೆ' ಚಿತ್ರದ ಟೈಟಲ್ ಸಾಂಗ್ ಹಾಗೂ 'ಗಾಳಿ ಮಾತು' ಚಿತ್ರದ 'ಒಮ್ಮೆ ನಿನ್ನನ್ನು ಕಣ್ತುಂಬ' ಹಾಡುಗಳನ್ನು ಬಳಸಿಕೊಂಡಿದ್ದರು. ಹಾಗಾಗಿ ನವೀನ್ ಯಶವಂತಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಸೆಕ್ಷನ್ 63ರ ಅಡಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಸಮನ್ಸ್ ನೀಡಿದರೂ ರಕ್ಷಿತ್ ಶೆಟ್ಟಿ ದೆಹಲಿ ಕೋರ್ಟ್ಗೆ ಹಾಜರಾಗಿರಲಿಲ್ಲ. ಹಾಗಾಗಿ ಪರಂವಾ ಸ್ಟುಡಿಯೋಗೆ 20 ಲಕ್ಷ ರೂ. ಠೇವಣಿ ಇರುವಂತೆ ಆದೇಶ ನೀಡಿತ್ತು. ಇದೀಗ 20 ಲಕ್ಷ ರೂ. ಜೊತೆಗೆ 5 ಲಕ್ಷ ರೂ. ದಂಡ ಸೇರಿಸಿ 25 ಲಕ್ಷ ರೂ. ಪಾವತಿಸುವಂತೆ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ ಆದೇಶಿಸಿದೆ.
ಕೆಲವೇ ಸೆಕೆಂಡ್ಗಳ(30 ಸೆಕೆಂಡ್) ಕಾಲ ಹಾಡುಗಳನ್ನು 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿ ಕಾಪಿ ರೈಟ್ಸ್ ಉಲ್ಲಂಘನೆ ಆಗಲ್ಲ ಎಂದು ಪರಂವಾ ಸ್ಟುಡಿಯೋಸ್ ಪರ ವಕೀಲರು ವಾದಿಸಿದ್ದರು. ಆದರೆ ಈ ವಾದವನ್ನು ನ್ಯಾಯಾಧೀಶರು ಒಪ್ಪಲಿಲ್ಲ. "ಚಿತ್ರದ ಸಂದರ್ಭಕ್ಕೆ ತಕ್ಕಂತೆ ಉದ್ದೇಶ ಪೂರ್ವಕರವಾಗಿಯೇ ಈ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಕಾಪಿರೈಟ್ ಕಾಯ್ದೆಯ ಪ್ರಕಾರ ಒಂದು ಸೆಕೆಂಡ್ ಅಥವಾ ಒಂದು ಫ್ರೇಮ್ ಅನುಮತಿ ಇಲ್ಲದೇ ಬಳಸಿಕೊಂಡರೂ ಅದಕ್ಕೆ ಅನುಮತಿ ಪಡೆಯಲೇಬೇಕು" ಎಂದಿದ್ದಾರೆ.
ಈ ಪ್ರಕರಣದಲ್ಲಿ ರಕ್ಷಿತ್ ಶೆಟ್ಟಿಗೆ ಜೈಲು ಶಿಕ್ಷೆ ಆಗುವ ಸಾಧ್ಯತೆಯಿತ್ತು. ನೀಡಿದ್ದ ಗಡುವಿನ ಅವಧಿ ಒಳಗೆ 20 ಲಕ್ಷ ರೂ. ಠೇವಣಿ ಇಡಲು ಅವರು ವಿಫಲರಾಗಿದ್ದರು. ಆದರೆ ರಕ್ಷಿತ್ ಹಾಗೂ ಪರಂವಾ ಸಂಸ್ಥೆ ಕ್ಷಮಾಪಣಾ ಅಫಿಡವಿಟ್ ಸಲ್ಲಿಸಿದ್ದರು. ಅದನ್ನು ಗಮನಿಸಿ ನ್ಯಾಯಾಲಯ ಮೃದು ಧೋರಣೆ ತಳೆದಿದೆ. ಜೈಲು ಶಿಕ್ಷೆ ಬದಲು 5 ಲಕ್ಷ ರೂ. ದಂಡ ಸೇರಿ ಒಟ್ಟು 25 ಲಕ್ಷ ರೂ. ಪಾವತಿಸಲು ಸೂಚಿಸಿದೆ. 5 ಲಕ್ಷ ದಂಡವನ್ನು 2 ವಾರದೊಳಗೆ ಪಾವತಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ರಕ್ಷಿತ್ ಶೆಡ್ಟಿ ಕಾಪಿರೈಟ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಕೂಡ ಎಡವಟ್ಟಾಗಿತ್ತು. 'ಶಾಂತಿ ಕ್ರಾಂತಿ' ಚಿತ್ರದ ಹಾಡಿನ ಟ್ಯೂನ್ ಬಳಸಿದ್ದಕ್ಕಾಗಿ ಲಹರಿ ಸಂಸ್ಥೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್ ವಿರುದ್ಧ ಕಾನೂನು ಹೋರಾಟ ನಡೆಸಿತ್ತು. ತಂಡದ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗುವ ಮಟ್ಟಕ್ಕೆ ಹೋಗಿತ್ತು. ಕೊನೆಗೆ ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಂಡಿದ್ದರು.


Click it and Unblock the Notifications











