ಕನ್ನಡದ 'ಶ್ರೀಮನ್ನಾರಾಯಣ'ನಿಗೆ ಗಾಳಿಯಲ್ಲಿ ಗುಂಡು ಹಾರಿಸುವ ಹುಚ್ಚೇಕೆ ?
ಮಾತು ಜಾಸ್ತಿ ಕಮ್ಮಿ ಕೆಲಸ ಕೆಲವರದ್ದು. ಸದ್ದಿಲ್ಲದೇ ಕೆಲಸ ಮಾಡುವವರು ಇರ್ತಾರೆ. ಆದರೆ ಇನ್ನು ಕೆಲವರು ಹೇಳಿಬಿಡುತ್ತಾರೆ ಆಮೇಲೆ ಮಾಡದೇ ಸತಾಯಿಸುತ್ತಾರೆ. ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಯಾವ ಗುಂಪಿಗೆ ಸೇರುತ್ತಾರೆ ಎನ್ನುವುದನ್ನು ನೀವೇ ಊಹಿಸಿ.
ಒಂದೇ ಒಂದು ಸಿನಿಮಾ ನಿರ್ದೇಶನ ಮಾಡಿ ಸ್ಟಾರ್ ಡೈರೆಕ್ಟರ್ ಪಟ್ಟ ಅಲಂಕರಿಸಿದ್ದರು ರಕ್ಷಿತ್ ಶೆಟ್ಟಿ. ಆ ಸಿನಿಮಾ ಕೂಡ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿತ್ತು. ಆದರೆ ಕಲ್ಟ್ ಸಿನಿಮಾ ಎಂದು ಕೆಲವರು ಅಪ್ಪಿ ಒಪ್ಪಿಕೊಂಡಿದ್ದಾರೆ. 4 ವರ್ಷಗಳ ಹಿಂದೆಯೇ 'ಉಳಿದವರು ಕಂಡಂತೆ' ಸೀಕ್ವೆಲ್ ಘೋಷಿಸಿದ್ದರು ರಕ್ಷಿತ್ ಶೆಟ್ಟಿ. ಆದರೆ ಆ ಸಿನಿಮಾ ಎಲ್ಲಿಗೆ ಬಂದಿದೆ ಎನ್ನುವುದು ಅವ್ರನ್ನು ಬಿಟ್ಟು ಮತ್ತೊಬ್ಬರಿಗೆ ಗೊತ್ತಿಲ್ಲ. ಅಭಿಮಾನಿಗಳು ಅಪ್ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ರಕ್ಷಿತ್ ಶೆಟ್ಟಿ ಈಗ ಏನೇ ಪೋಸ್ಟ್ ಮಾಡಿದರೂ ಕಾಮೆಂಟ್ ಬಾಕ್ಸ್ನಲ್ಲಿ 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡಿ ಅಂತಿದ್ದಾರೆ.

ರಕ್ಷಿತ್ ಶೆಟ್ಟಿ ಕೂಡ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ಟಿದ್ದಾರೆ. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಆದಷ್ಟು ಬೇಗ ಸಿನಿಮಾ ಶುರು ಮಾಡಬೇಕು ಎನ್ನುವ ಧಾವಂತದಲ್ಲಿದ್ದಾರೆ. ಇನ್ನು 4 ವರ್ಷಗಳಿಂದ ಅದೇನು ಸ್ಕ್ರಿಪ್ಟ್ ಮಾಡುತ್ತಿದ್ದಾರೋ? ಎಂದು ಸಿನಿರಸಿಕರು ತಲೆಕೆಡಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಸಿಂಪಲ್ ಸ್ಟಾರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಂದು 'ರಿಚರ್ಡ್ ಆಂಟನಿ' ಬಗ್ಗೆ ಏನಾದರೂ ಸರ್ಪ್ರೈಸ್ ಸಿಗಬಹುದು ಎಂದು ಕಾದಿದ್ದವರಿಗೆ ನಿರಾಸೆ ಕಾದಿತ್ತು.
ಈಗಾಗಲೇ ಮೂರ್ನಾಲ್ಕು ಸಿನಿಮಾಗಳನ್ನು ಮಾಡುವುದಾಗಿ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆದರೆ ಯಾವುದು ಕೂಡ ಸದ್ಯಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದ ಎಲ್ಲರಿಗೂ ರಕ್ಷಿತ್ ಧನ್ಯವಾದ ತಿಳಿಸಿ ಪೋಸ್ಟ್ ಮಾಡಿದ್ದರು. '777 ಚಾರ್ಲಿ' ಸಿನಿಮಾ 3 ವರ್ಷ ಪೂರೈಸಿದ್ದನ್ನು ನೆನಪಿಸಿಕೊಂಡಿದ್ದರು. ಆದರೆ ಕಾಮೆಂಟ್ ಬಾಕ್ಸ್ ತುಂಬಾ ಅಭಿಮಾನಿಗಳ ಅಸಾಮಾಧಾನ ಎದ್ದು ಕಾಣುತ್ತಿತ್ತು. "ವರ್ಷಕ್ಕೆ 2 ಸಿನಿಮಾ ಮಾಡಿ", "ರಿಚರ್ಡ್ ಆಂಟನಿ' ಅಪ್ಡೇಟ್ ಕೊಡಿ" ಇಂತಹ ಕಾಮೆಂಟ್ಗಳೇ ಹೆಚ್ಚಾಗಿತ್ತು.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ 'ರಿಚರ್ಡ್ ಆಂಟನಿ' ಚಿತ್ರವನ್ನು ಸಿಂಪಲ್ ಸ್ಟಾರ್ ಘೋಷಿಸಿದ್ದಾರೆ. 4 ವರ್ಷಗಳ ಹಿಂದೆ ಸಣ್ಣ ಟೀಸರ್ ಬಂದಿತ್ತು. ಬಳಿಕ ಈವರೆಗೆ ಯಾವುದೇ ಮಾಹಿತಿ ಇಲ್ಲ. 'ಸಪ್ತಸಾಗರದಾಚೆ ಎಲ್ಲೋ' ಬಳಿಕ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಲ್ಲ. ನನ್ನ ಕನಸ್ಸಿನ ಸಿನಿಮಾಗಳನ್ನು ತೆರೆಗೆ ತರುವುದೇ ನನ್ನ ಮೊದಲ ಆದ್ಯತೆ ಎಂದಿದ್ದರು.
'ರಿಚರ್ಡ್ ಆಂಟನಿ' ಬಳಿಕ ಪುಣ್ಯಕೋಟಿ ಸರಣಿ ಸಿನಿಮಾಗಳನ್ನು ರಕ್ಷಿತ್ ಮಾಡಬೇಕಿದೆ. 'ಮಿಡ್ ವೇ ಟು ಮೋಕ್ಷ' ಎನ್ನುವ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ. ರಿಷಬ್ ಹಾಗೂ ರಾಜ್ ಬಿ ಶೆಟ್ಟಿ ಜೊತೆ ಸೇರಿ ಒಂದು ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅದೆಲ್ಲಕ್ಕಿಂತ ಮುನ್ನ 'ರಿಚರ್ಡ್ ಆಂಟನಿ' ಕಥೆ ಮುಗಿಸಬೇಕಿತ್ತು. ಈ ಕಥೆಯೇ ಶುರುವಾಗದೇ ಮುಂದಿನ ಸಿನಿಮಾಗಳ ಆರಂಭ ಯಾವಾಗ ಎನ್ನುವಂತಾಗಿದೆ.
ಈ ಹಿಂದೆ ಹೇಮಂತ್ ರಾವ್ ನಿರ್ದೇಶನದಲ್ಲಿ 'ತೆನಾಲಿ' ಸಿನಿಮಾ ಬಗ್ಗೆ ಮಾತುಗಳು ಕೇಳಿಬಂದಿತ್ತು. ಏಳೆಂಟು ವರ್ಷಗಳ ಹಿಂದೆ ನಾಲ್ಕೈದು ದಿನ ಲುಕ್ ಟೆಸ್ಟ್ ಕೂಡ ಮಾಡಿದ್ದರು. ಆದರೆ ಬಳಿಕ ಆ ಸಿನಿಮಾ ಸೆಟ್ಟೇರಲಿಲ್ಲ. 'ತೆನಾಲಿ' ಚಿತ್ರದಲ್ಲಿ ಸ್ವಾತಂತ್ರ್ಯ ಪೂರ್ವದ ಕಥೆ ಹೇಳುವ ಲೆಕ್ಕಾಚಾರದಲ್ಲಿತ್ತು ಚಿತ್ರತಂಡ. ಇನ್ನು ಸುದೀಪ್ ಹೀರೊ ಆಗಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಮಾಡುವುದಾಗಿಯೂ ರಕ್ಷಿತ್ ಹೇಳಿದ್ದಾರೆ. ಆದರೆ ಆ ಸಿನಿಮಾ ಇನ್ನೊಂದು ದಶಕದಲ್ಲಿ ಶುರುವಾಗುವ ಸಾಧ್ಯತೆಯಿಲ್ಲ.
ಈ ಹಿಂದೆ ಬಿಗ್ಬಾಸ್ ವೇದಿಕೆಗೆ ರಕ್ಷಿತ್ ಶೆಟ್ಟಿ ಬಂದಾಗ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಮಾಡುವುದಾಗಿ ಹೇಳಿದ್ದರು. ಟೈಟಲ್ ಕೇಳಿ ಸುದೀಪಿಯನ್ಸ್ ಫಿದಾ ಆಗಿದ್ದರು. ಉಳಿದವರು ಕಂಡಂತೆ ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ವಿಚಾರವೇ ಇಂಟ್ರೆಸ್ಟಿಂಗ್ ಅನ್ನಿಸಿತ್ತು. ಆದರೆ ಬಳಿಕ ಅದನ್ನು ರಕ್ಷಿತ್ ಶೆಟ್ಟಿ ಮರೆತು ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.
ಮಾಡುವಂತಿದ್ದರೆ ಹೇಳಬೇಕು, ಅಥವಾ ಹೇಳಿದ ಮೇಲೆ ಮಾಡಬೇಕು. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಹೇಳಿ ಸುಮ್ಮನಾಗುವುದು ಯಾಕೆ? ಎಂದು ಕೇಳುವಂತಾಗಿದೆ. ಇನ್ನಾದರೂ ರಕ್ಷಿತ್ ಶೆಟ್ಟಿ ಬೇಗ ಬೇಗ ಸಿನಿಮಾಗಳನ್ನು ಮಾಡಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ನಿಯಮಿತವಾಗಿ ಕನ್ನಡದ ಸ್ಟಾರ್ ನಟರ ಚಿತ್ರಗಳು ಬರೆದೇ ಚಿತ್ರರಂಗ ಕಂಗೆಟ್ಟಿದೆ. ರಕ್ಷಿತ್ ಶೆಟ್ಟಿ ರೀತಿಯ ಸ್ಟಾರ್ ನಟರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಬಯಸುವುದರಲ್ಲಿ ಯಾವುದೇ ತಪ್ಪಿಲ್ಲ.


Click it and Unblock the Notifications











