ಬೇರಾವ ವಿಗ್ರಹದ ಮುಂದೆ ಅರ್ಧ ಘಂಟೆ ಕೂತವನಲ್ಲ ನಾನು ; ರಕ್ಷಿತ್ ಅಯೋಧ್ಯೆ ಅನುಭವ..!
ರಾಮ ನಾಮ ಸ್ಮರಣೆಯನ್ನ ಸಾಕ್ಷಾತ್ ಆ ರಾಮನ ಸನ್ನಿಧಿ ಅಯೋಧ್ಯೆಯಲ್ಲಿ ಮಾಡಿ ಬಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ತಮಗಾದ ಅನುಭವವನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಬೇರಾವ ವಿಗ್ರಹದ ಮುಂದೆ ಅರ್ಧಗಂಟೆ ಕೂತವನಲ್ಲ ನಾನು ಅಂದಿದ್ದಾರೆ. ತಾವು ಗಮನಸಿದ ಅಪರೂಪದ ಸಂಗತಿಗಳ ಬಗ್ಗೆ ರಕ್ಷಿತ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಇಂದು ಕೊನೆಗೂ ನಾನು ಹತ್ತಿರದಿಂದ ರಾಮನ ಮೂರ್ತಿಯನ್ನು ಕಂಡೆ. ಬಹಳ ಕಡಿಮೆ ಮಂದಿಗೆ ಅಷ್ಟು ಹತ್ತಿರದಿಂದ ರಾಮನನ್ನು ಕಣ್ಣು ತುಂಬಿಸಿಕೊಳ್ಳುವ ಅದೃಷ್ಟ ಪ್ರಾಪ್ತವಾಗುತ್ತದೆ. ರಾಮನ ಮೂರ್ತಿಯ ಮುಂದೆ ಸುಮಾರು ಅರ್ಧ ತಾಸು ನಾನು ಕುಳಿತಿದ್ದೆ. ಹೀಗೆ ಇಷ್ಟು ಸಮಯ ನಾನು ಯಾವ ಮೂರ್ತಿಯ ಮುಂದೆಯೂ ಕೂತಿದ್ದಿಲ್ಲ. ಆದರೆ ಈ ಅನುಭವ ಭಿನ್ನವಾಗಿತ್ತು.

ಎಂದಿರುವ ರಕ್ಷಿತ್ ಶೆಟ್ಟಿ ಸಾಮಾನ್ಯವಾಗಿ ಎಲ್ಲ ಮೂರ್ತಿ ಕೆತ್ತನೆಗಳನ್ನು ನಾನು ಶ್ಲಾಘಿಸುತ್ತೇನೆ. ಆದರೆ ಈ ಮೂರ್ತಿಯ ಕುಸುರಿ ಅದ್ಭುತ. ಇದು ಸಾಮಾನ್ಯವಲ್ಲ. ರಾಮನೆಂದರೆ ಹಾಗೆಯೇ ಎನಿಸುತ್ತದೆ. ಆತ ಕೇವಲ ಪೂಜಿಸಿಕೊಳ್ಳುವ ದೇವರು ಮಾತ್ರವಲ್ಲ, ನನ್ನ ಪ್ರಕಾರ ಆತ ಜೀವ ತಳೆದ ಕಲೆ. ಮೂರ್ತಿಯ ಶಿಲ್ಪ ಅರ್ಜುನ್ ಯೋಗಿರಾಜ್ ಜೀವಂತ ದಂತಕತೆ ಆತನನ್ನು ತಲೆಮಾರುಗಳು ನೆನಪಿಟ್ಟುಕೊಳ್ಳಲಿವೆ ಎಂದಿದ್ದಾರೆ.
ಕೆಲವು ವರ್ಷಗಳ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ಸುಮ್ಮನೆ ಲೆಕ್ಕ ಮಾಡುತ್ತಿದ್ದೆ. ನಾನು 504 ಚಂದ್ರಪರಿಭ್ರಮಣೆಗಳನ್ನು ಯಾವಾಗ ಪೂರೈಸುತ್ತೇನೆ ಎಂದು ಲೆಕ್ಕ ಹಾಕಿ ದಿನಾಂಕವನ್ನು ಗುರುತು ಹಾಕಿಕೊಂಡಿದ್ದೆ. ಆದರೆ ಕಾಲಾಂತರದಲ್ಲಿ ನಾನದನ್ನು ಮರೆತುಬಿಟ್ಟಿದ್ದೆ. ಕಾಕತಾಳೀಯ ಎಂಬಂತೆ ಆ ದಿನ ಕೃಷ್ಣ ಪಕ್ಷ ದಶಮಿ. ಸರಿಯಾಗಿ ಅದೇ ದಿನ ನಾನು ಪ್ರಯಾಗ್ರಾಜ್ನಲ್ಲಿದ್ದೆ.

ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದೆ. ಕಾಶಿಗೆ ಭೇಟಿ ನೀಡಿದೆ ಎಂದಿರುವ ರಕ್ಷಿತ್ ಶೆಟ್ಟಿ ಹೊಸ ಸಿನಿಮಾಕ್ಕಾಗಿ ಅಯೋಧ್ಯೆಯ ಶ್ರೀರಾಮ ಪ್ರಭುವಿನ ಉತ್ಸವ ಮೂರ್ತಿಯ ಎದುರು ಸಂಕಲ್ಪ ಮಾಡಿದೆ. ಆ ಅನುಭವವನ್ನು ನನಗೆ ಮಾತಿನಲ್ಲಿ ವರ್ಣಿಸಲು ಆಗದು ಎಂದಿದ್ದಾರೆ.
ಇನ್ನೂ ಅದೇ ದಿನ ಹನುಮಂತ ದೇವಾಲಯಕ್ಕೆ ಭೇಟಿ ನೀಡಿದ್ದು ಅಭೂತಪೂರ್ವ ಅನುಭವ. ಅಲ್ಲಿನ ಟ್ರಸ್ಟಿಗಳು ನಮಗೆ ನೀಡಿದ ಸ್ವಾಗತಕ್ಕೆ ಧನ್ಯವಾದ ಎಂದಿರುವ ರಕ್ಷಿತ್ ಶೆಟ್ಟಿ ಜೈ ಆಂಜನೇಯ, ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ

ರಿಚರ್ಡ್ ಆಂಟನಿಯಲ್ಲಿ ರಕ್ಷಿತ್ ಶೆಟ್ಟಿ ತಲ್ಲೀನ..!
ಸಪ್ತ ಸಾಗರದಾಚೆ ಸೈಡ್ ಎ ಹಾಗೂ ಸೈಡ್ ಬಿ ಚಿತ್ರದ ಗೆಲುವಿನಿಂದ ಎಕ್ಸಾಯಟ್ ಆಗಿರುವ ರಕ್ಷಿತ್ ಶೆಟ್ಟಿ, ಸದ್ಯಕ್ಕೆ ರಿಚರ್ಡ್ ಆಂಟನಿಯ ಧ್ಯಾನವನ್ನ ಮಾಡ್ತಿದ್ದಾರೆ. ಮಾರ್ಚ್ 28ಕ್ಕೆ 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡು 10 ವರ್ಷ ಆಗಲಿದೆ.
ಆ ಹಿನ್ನೆಲೆಯಲ್ಲಿ 'ರಿಚರ್ಡ್ ಆಂಟನಿ' ಸಿನಿಮಾಗೆ ಅದೇ ದಿನ ರಕ್ಷಿತ್ ಶೆಟ್ಟಿ ತಮ್ಮ ಕನಸಿನ ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದಕ್ಕೆ ಪೂರಕವಾಗಿ ಇದೀಗ ರಿಚರ್ಡ್ ಆಂಟನಿ ಚಿತ್ರವನ್ನ ಆರಂಭ ಮಾಡುವ ಮುನ್ನ ರಕ್ಷಿತ್ ಶೆಟ್ಟಿ ಅಯೋಧ್ಯೆಗೆ ತೆರಳಿ ಬಾಲರಾಮನ ಆಶೀರ್ವಾದ ಪಡೆದಿದ್ದಾರೆ


Click it and Unblock the Notifications











