ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಒಳ್ಳೆಯ ನಟ, ಬಹಳ ಒಳ್ಳೆಯ ನಿರ್ದೇಶಕ ಜೊತೆಗೆ ಜಾಣ ನಿರ್ಮಾಪಕ ಎಂಬುದನ್ನು ಸಹ ಅವರು '777 ಚಾರ್ಲಿ' ಸಿನಿಮಾದ ಮೂಲಕ ಸಾಬೀತುಪಡಿಸಿದ್ದಾರೆ. ನಿರ್ದೇಶನ, ನಟನೆಯಷ್ಟೆ ನಿರ್ಮಾಣದಲ್ಲಿಯೂ ತೊಡಗಿಕೊಳ್ಳುವ ಸೂಚನೆ ನೀಡಿರುವ ರಕ್ಷಿತ್ ಶೆಟ್ಟಿ ಸಾಲು-ಸಾಲು ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ.
ತಮ್ಮ ಪರಮ್ವಹ ನಿರ್ಮಾಣ ಸಂಸ್ಥೆಯ ಮೂಲಕ ಈಗಾಗಲೇ ಕೆಲವು ಸಿನಿಮಾಗಳನ್ನು ಸೆಟ್ಟೇರಿಸಿರುವ ರಕ್ಷಿತ್ ಶೆಟ್ಟಿ ಇದೀಗ 'ಮಿಥ್ಯ' ಹೆಸರಿನ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಸೆವೆನ್ ಆಡ್ಸ್ ತಂಡದ ಏಳು ಜನ ಬರಹಗಾರ, ಸಹಾಯಕ ನಿರ್ದೇಶಕರಿಗೆ ಒಂದೊಂದು ಸಿನಿಮಾ ನಿರ್ಮಿಸುವ ಯೋಜನೆಯಲ್ಲಿರುವ ರಕ್ಷಿತ್ ಶೆಟ್ಟಿ ಅದರ ಭಾಗವಾಗಿ ಈಗಾಗಲೇ ಕೆಲವು ಸಿನಿಮಾಗಳನ್ನು ಸೆಟ್ಟೇರಿಸಿದ್ದಾರೆ. ಇದೀಗ 'ಮಿಥ್ಯ' ಹೆಸರಿನ ಭಿನ್ನ ಕತೆಯ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.

11 ವರ್ಷದ ಬಾಲಕನೊಬ್ಬನ ಕತೆಯನ್ನು ಮಿಥ್ಯ ಹೊಂದಿದ್ದು, ಈ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶನ ಮಾಡಲಿದ್ದಾರೆ. ಸುಮಂತ್ಗೆ ಇದು ಮೊದಲ ಸಿನಿಮಾ. ಅದೇ ಹಳೆಯ ಪ್ರೀತಿ ಪ್ರೇಮ, ಮಾಸ್ ಆಕ್ಷನ್ ಸಿನಿಮಾಗಳಿಗೆ ಜೋತು ಬೀಳದೆ ಮಕ್ಕಳ ಕತೆಯೊಂದಿಗೆ ಸುಮಂತ್ ಪ್ರೇಕ್ಷಕರ ಎದುರು ಬರುತ್ತಿರುವುದು ವಿಶೇಷ.
ಪುಟ್ಟ ಬಾಲಕನ ತಂದೆ-ತಾಯಿ ನಿಧನ ಹೊಂದುತ್ತಾರೆ. ಅವರ ನೆನಪುಗಳಿಂದ ಹೊರಬರಲಾರದ ಈ ಬಾಲಕ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವೇ ಈ 'ಮಿಥ್ಯ'. ಕಥೆಯ ಒಂದೆಳೆ ಕೇಳಿ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಸುಮಂತ್ ಭಟ್. ಅವರಿಗೆ ಬಣ್ಣದ ಲೋಕದ ಮೇಲೆ ಎಲ್ಲಿಲ್ಲದ ಆಸಕ್ತಿ. ಈ ಕಾರಣಕ್ಕೆ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಪರಮ್ವಹ ಸ್ಟುಡಿಯೋಸ್ 'ಏಕಂ' ಹೆಸರಿನ ವೆಬ್ಸೀರೀಸ್ ನಿರ್ಮಾಣ ಮಾಡಿತ್ತು. ಏಳು ಎಪಿಸೋಡ್ಗಳ ಪೈಕಿ ನಾಲ್ಕು ಎಪಿಸೋಡ್ಗಳನ್ನು ಸುಮಂತ್ ಅವರೇ ಬರೆದು ನಿರ್ದೇಶನ ಮಾಡಿದ್ದರು. ಈಗ ಅವರು ಅದೇ ಸ್ಟುಡಿಯೋಸ್ಗಾಗಿ 'ಮಿಥ್ಯ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮತ್ತು 'ವಿಕ್ರಾಂತ್ ರೋಣ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ಆತಿಶ್ ಶೆಟ್ಟಿ 'ಮಿಥ್ಯ' ಚಿತ್ರದಲ್ಲಿ ಮಿಥುನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅವನೊಂದಿಗೆ ಪ್ರಕಾಶ್ ತುಮ್ಮಿನಾಡು, ರೂಪಾ ವರ್ಕಾಡಿ ಇನ್ನು ಹಲವರು ನಟಿಸುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ''ಪರಮ್ವಹ ಸ್ಟುಡಿಯೋಸ್ ಮತ್ತೊಂದು ಅದ್ಭುತ ಕತೆಯನ್ನು ಹೇಳಲು ಅಣಿಯಾಗಿದೆ. ತೀವ್ರ ನಷ್ಟವನ್ನು ಜೀವನದಲ್ಲಿ ಅನುಭವಿಸಿದ ಬಾಲಕನೊಬ್ಬನ ಜೀವನದ ಅನ್ವೇಷಣೆಯ ಕತೆಯನ್ನು ಒಳಗೊಂಡಿದೆ. ನಿಮ್ಮೊಳಗೆ ಭಾವನೆಗಳ ಅಲೆಗಳನ್ನು ಮೂಡಲು ಭರವಸೆ ನೀಡುತ್ತದೆ, ನಮ್ಮ ಜೊತೆಗಿರಿ'' ಎಂದಿದ್ದಾರೆ.
'ಮಿಥ್ಯ' ಸಿನಿಮಾದ ಹೊರತಾಗಿ ವಿಹಾನ್ ನಟನೆಯ ಹೊಸ ಸಿನಿಮಾ ಒಂದನ್ನು ಸಹ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಲಿದ್ದಾರೆ. ಇದರ ಜೊತೆಗೆ ಕೆಲವು ಉತ್ತಮ ಸಿನಿಮಾಗಳನ್ನು ಪ್ರೆಸೆಂಟ್ ಸಹ ಮಾಡಿದ್ದಾರೆ. ಮಾಡಲಿದ್ದಾರೆ. ಸ್ವತಃ ರಕ್ಷಿತ್ ಶೆಟ್ಟಿ ಸಹ ಬ್ಯುಸಿ ನಟರಾಗಿದ್ದು, ಅವರ ನಟನೆಯ 'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಅದರ ಬಳಿಕ ಅವರದ್ದೇ ನಿರ್ದೇಶನದ 'ರಿಚರ್ಡ್ ಆಂಟೊನಿ' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











