ರಾಂಗ್ ಟೈಮಲ್ಲಿ ಬಂತಾ ಸೈಡ್-B..? ಟಿಕೆಟ್ ದರ ಇಳಿಕೆ.. ಒಳ್ಳೆ ಚಿತ್ರಕ್ಕೆ ಪ್ರೇಕ್ಷಕರ ಬರ..!
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದ ಬಹುತೇಕರು ತಂಡದ ಶ್ರಮವನ್ನು ಮೆಚ್ಚಿಕೊಂಡಾಡುತ್ತಿದ್ದಾರೆ. ಪ್ರತಿ ದೃಶ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ ಸಿನಿಮಾ ಪ್ರೇಕ್ಷಕರ ಬರ ಎದುರಿಸುತ್ತಿದೆ.
ಕಳೆದ ಶುಕ್ರವಾರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ತೆರೆಕಂಡಿದೆ. ತಮಿಳುನಾಡಿನಲ್ಲೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಒಂದು ಸೂಪರ್ ಹಿಟ್ ಸೀಕ್ವೆಲ್ಗೆ ಸಿಗಬೇಕಾದ ಕಲೆಕ್ಷನ್ ಸಿಗುತ್ತಿಲ್ಲ. ಫಸ್ಟ್ ವೀಕೆಂಡ್ ಮುಗಿಯುತ್ತಿದ್ದಂತೆ ಚಿತ್ರತಂಡ ಟಿಕೆಟ್ ದರದಲ್ಲಿ ಕಡಿತ ಘೋಷಿಸಿದೆ. ಆದಾಗ್ಯೂ ಥಿಯೇಟರ್ಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಒಳ್ಳೆಯ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಮನು, ಪ್ರಿಯಾ, ಸುರಭಿ ಭಾವನಾತ್ಮಕ ಪಯಣದಲ್ಲಿ ಜೊತೆಯಾದವರೆಲ್ಲಾ ಒಂದೊಳ್ಳೆ ಸಿನಿಮಾ ನೋಡಿದ ಅನುಭವದೊಂದಿಗೆ ಥಿಯೇಟರ್ನಿಂದ ಹೊರ ಬರುತ್ತಿದ್ದಾರೆ. ಥಿಯೇಟರ್ನಿಂದ ಹೊರ ಬಂದ ಮೇಲೂ ಬಹಳ ಹೊತ್ತು ಸಿನಿಮಾ, ಪಾತ್ರಗಳು, ಹಿನ್ನೆಲೆ ಸಂಗೀತ ಕಾಡುತ್ತದೆ. ಅಷ್ಟರಮಟ್ಟಿಗೆ ಹೇಮಂತ್ ನಿರ್ದೇಶನ, ರಕ್ಷಿತ್, ರುಕ್ಮಿಣಿ, ಚೈತ್ರಾ ನಟನೆ ನೋಡುಗರನ್ನು ಆವರಿಸಿಕೊಂಡುಬಿಡುತ್ತದೆ.
ಸೈಡ್- A ಚಿತ್ರದಲ್ಲಿ ಕತೆ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಕತೆ ಮುಂದುವರೆಯುತ್ತದೆ. ಜೈಲಿನಿಂದ ಹೊರ ಬಂದ ಮನು ಬದಲಾಗಿದ್ದಾನೆ. ಆದರೆ ಪ್ರಿಯಾಳ ಗುಂಗಿನಲ್ಲೇ ಇರ್ತಾನೆ. ಇತ್ತ ಪ್ರಿಯಾಳ ಮದುವೆಯಾಗಿ ಸಂಕಷ್ಟದ ಜೀವನದ ಸಾಗಿಸುತ್ತಿರುತ್ತಾಳೆ. ಹಾಗಾದರೆ ಮನು ಮತ್ತೆ ಪ್ರಿಯಾ ಬಾಳಲ್ಲಿ ಎಂಟ್ರಿ ಕೊಡ್ತಾನಾ? ಈ ಹಾದಿಯಲ್ಲಿ ಜೊತೆಯಾಗುವ ಸುರಭಿ ಯಾರು? ಮುಂದೇನು? ಎನ್ನುವ ಕತೆ ಪ್ರೇಕ್ಷಕರನ್ನು ಸೆಳೆಯುತ್ತಿದೆ.
'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ಚೆನ್ನಾಗಿದ್ದರೂ ಸರಿಯಾದ ಸಮಯದಲ್ಲಿ ರಿಲೀಸ್ ಮಾಡಿಲ್ಲ, ಪ್ರಚಾರ ತಕ್ಕಮಟ್ಟಿಗೆ ಆಗಲಿಲ್ಲ ಎಂದು ಸಿನಿರಸಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದ 3ನೇ ದಿನಕ್ಕೆ ಭಾರತ Vs ಆಸ್ಟ್ರೇಲಿಯಾ ವರ್ಲ್ಡ್ ಕಪ್ ಫೈನಲ್ ಮ್ಯಾಚ್ ಇತ್ತು. ಭಾನುವಾರ ಯಾರೂ ಕೂಡ ಸಿನಿಮಾ ನೋಡವ ಗುಂಗಲ್ಲಿ ಇರಲಿಲ್ಲ. ಫಸ್ಟ್ ವೀಕೆಂಡ್ ಕ್ರೂಷಿಯಲ್ ದಿನದಂದೇ ಪ್ರೇಕ್ಷಕರು ಥಿಯೇಟರ್ಗಳಿಗೆ ಬರಲಿಲ್ಲ. ಇದು ಚಿತ್ರಕ್ಕೆ ಹಿನ್ನಡೆ ತಂದಿರುವುದು ಸುಳ್ಳಲ್ಲ.
ಸೆಪ್ಟೆಂಬರ್ 1ಕ್ಕೆ ರಿಲೀಸ್ ಆಗಿದ್ದ ಸೈಡ್- A ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡು ಪ್ರೇಕ್ಷಕರನ್ನು ಥಿಯೇಟರ್ಗೆ ಸೆಳೆದಿತ್ತು. ಆದರೆ ಸೈಡ್- B ಚಿತ್ರಕ್ಕೆ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ. ಬಹುತೇಕರಿಗೆ ಸಿನಿಮಾ ರಿಲೀಸ್ ಆಗಿರುವುದು ಗೊತ್ತಿಲ್ಲ. ಹೈಪ್ ಕ್ರಿಯೇಟ್ ಆಗಲಿಲ್ಲ. ಅದೇ ಕಾರಣಕ್ಕೆ ಜನ ಥಿಯೇಟರ್ಗೆ ಬರ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್, ರುಕ್ಮಿಣಿ, ಚೈತ್ರಾ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಮಾತನಾಡಿದರೂ ದೊಡ್ಡಮಟ್ಟದಲ್ಲಿ ರೀಚ್ ಆಗಿಲ್ಲ ಎನ್ನುವವರು ಇದ್ದಾರೆ.
ಕೆಲವರು ಸೈಡ್- Bಗಿಂತ ಸೈಡ್- A ಚೆನ್ನಾಗಿತ್ತು. ಎರಡೂ ಸಿನಿಮಾ ಸೇರಿಸಿ ಒಂದೇ ಸಿನಿಮಾ ಮಾಡಬಹುದಿತ್ತು. ಒಂದೇ ಚಿತ್ರದಲ್ಲಿ ಅಷ್ಟು ಕತೆ ಹೇಳಿದ್ದರೆ ಇನ್ನು ಚೆನ್ನಾಗಿತ್ತು, ಇದೇ ಕೆಲವರು ಥಿಯೇಟರ್ಗೆ ಬರಲು ಹಿಂದೇಟು ಹಾಕಲು ಕಾರಣ ಎನ್ನುವ ವಾದವನ್ನು ಮುಂದಿಡುತ್ತಾರೆ. ಕೆಲವರು ಓಟಿಟಿ ರಿಲೀಸ್ಗಾಗಿ ಕಾದು ಕೂತಿದ್ದಾರೆ. ಹಾಗಾಗಿ ಸಹಜವಾಗಿಯೇ ಥಿಯೇಟರ್ಗಳಲ್ಲಿ ಪ್ರೇಕ್ಷಕರ ಬರ ಎದ್ದು ಕಾಣುತ್ತಿದೆ.

ಪರಭಾಷಿಕರು ಕೂಡ 'ಸಪ್ತಸಾಗರದಾಚೆ ಎಲ್ಲೋ' ಸೈಡ್-A ಸಿನಿಮಾ ಮೆಚ್ಚಿಕೊಂಡಿದ್ದರು. ತಮಿಳು ನಟ, ರಾಜಕಾರಣಿ ಉದಯನಿಧಿ ಸ್ಟಾಲಿನ್ ಕೂಡ ಎರಡೂ ಭಾಗಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಎಲ್ಲರೂ ಥಿಯೇಟರ್ನಲ್ಲಿ ಸಿನಿಮಾ ನೋಡಿ ಎಂದಿದ್ದರು. ಆದರೂ ಕರ್ನಾಟಕದಲ್ಲೇ ಕನ್ನಡ ವರ್ಷನ್ಗೆ ಹಿನ್ನಡೆಯಾಗುತ್ತಿದೆ.
ಈ ವರ್ಷ ಕನ್ನಡ ಚಿತ್ರರಂಗ ಭಾರೀ ಹಿನ್ನಡೆ ಅನುಭವಿಸಿದೆ. ದೊಡ್ಡ ದೊಡ್ಡ ಸಿನಿಮಾಗಳ ಬರ ಎದುರಿಸಿತು. ಒಂದೆರಡು ಒಳ್ಳೆ ಸಿನಿಮಾ ಗೆಲುವಿನ ನಗೆಬೀರಿತ್ತು. ಉಳಿದಂತೆ ಈ ವರ್ಷ ಕನ್ನಡ ಸಿನಿಮಾಗಳ ಸಾಧನೆ ಕಳಪೆ ಎಂದೇ ಹೇಳಬೇಕು. ಆದರೆ 'ಸಪ್ತಸಾಗರದಾಚೆ ಎಲ್ಲೋ' ಒಳ್ಳೆ ಸಿನಿಮಾ ಎನಿಸಿಕೊಂಡಿದೆ. ಆದರೂ ಈಗ ಸೀಕ್ವೆಲ್ ನೋಡೋಕೆ ಪ್ರೇಕ್ಷಕರು ಹಿಂದೇಟು ಹಾಕುತ್ತಿರುವುದು ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹೇಗೆ ಪ್ರದರ್ಶನ ಕಾಣುತ್ತದೆ ಎಂದು ಕಾದುನೋಡಬೇಕಿದೆ.


Click it and Unblock the Notifications











